ಮೈಸೂರು,ಡಿ.26- ನೂತನ ಕ್ರೈಸ್ತ ವರ್ಷ-2026ರ ಸ್ವಾಗತಕ್ಕೆ ಮೈಸೂರಿನ ವಿಜಯನಗರದಲ್ಲಿರುವ ಶ್ರೀ ಯೋಗಾನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ತಿರುಪತಿ ಮಾದರಿ 2 ಲಕ್ಷ ಲಡ್ಡು ಪ್ರಸಾದ ವಿತರಿಸಲಾಗುತ್ತದೆ.ಈ ಬಗ್ಗೆ ದೇವಸ್ಥಾನದ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಸ್ಥಾಪಕರಾದ ಶ್ರೀ ಭಾಷ್ಯಂ ಸ್ವಾಮೀಜಿಯವರು ಮಾಹಿತಿ ನೀಡಿದರು.
ಪ್ರತಿವರ್ಷದಂತೆ ಈ ವರ್ಷವೂ ಜನವರಿ ಒಂದರಂದು ತಿರುಪತಿ ಮಾದರಿ ಲಡ್ಡುಗಳನ್ನು ಬೆಳಿಗ್ಗೆ 4 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ವಿತರಿಸಲಾಗುತ್ತದೆ. ಕಳೆದ 10 ದಿನಗಳಿಂದ ಲಡ್ಡು ತಯಾರಿಕೆ ಕಾರ್ಯ ಭರದಿಂದ ಸಾಗುತ್ತಿದೆ.
ನುರಿತ 100 ಬಾಣಸಿಗರಿಂದ ತಯಾರಿ ಕಾರ್ಯ ನಡೆಯುತ್ತಿದೆ. ಈ ವರ್ಷ 2 ಕೆ ಜಿ ತೂಕದ 10 ಸಾವಿರ ಲಡ್ಡುಗಳು ಹಾಗೂ 150 ಗ್ರಾಂ ತೂಕದ 2 ಲಕ್ಷ ಲಡ್ಡುಗಳು ಸಜ್ಜಾಗಿದೆ. ಲಡ್ಡು ತಯಾರಿಕೆಗಾಗಿ 100 ಕ್ವಿಂಟಾಲ್ ಕಡ್ಲೆ ಹಿಟ್ಟು, 200 ಕ್ವಿಂಟಾಲ್ ಸಕ್ಕರೆ, 10 ಸಾವಿರ ಲೀಟರ್ ಖಾದ್ಯ ತೈಲ, 500 ಕೆ ಜಿ ಗೋಡಂಬಿ, 500 ಕೆ ಜಿ ಒಣದ್ರಾಕ್ಷಿ, 250 ಕೆ ಜಿ ಬಾದಾಮಿ, 1000 ಕೆ ಜಿ ಡೈಮಂಡ್ ಸಕ್ಕರೆ, 2000 ಕೆ ಜಿ ಬೂರಾ ಸಕ್ಕರೆ, 50 ಕೆ ಜಿ ಪಿಸ್ತಾ, 50 ಕೆ ಜಿ ಏಲಕ್ಕಿ, 50 ಕೆ ಜಿ ಜಾಕಾಯಿ ಮತ್ತು ಜಾಪತ್ರೆ, 50 ಕೆ ಜಿ ಪಚ್ಚಕರ್ಪೂರ, 200 ಕೆ ಜಿ ಲವಂಗ ಬಳಸಲಾಗಿದೆ. ಜನವರಿ ಒಂದರಂದು ಶ್ರೀ ಯೋಗಾನರಸಿಂಹಸ್ವಾಮಿಗೆ ವಿಶೇಷ ಅಲಂಕಾರ, ಸ್ವರ್ಣಪುಷ್ಪದಿಂದ ಸ್ವಾಮಿಗೆ ಸಹಸ್ರನಾಮಾರ್ಚನೆ ಹಾಗೂ ಉತ್ಸವಮೂರ್ತಿಯ ಏಕಾದಶ ಪ್ರಾಕಾರೋತ್ಸವ ನಡೆಯಲಿದೆ.
ಭಕ್ತರಿಗೆ ಲಡ್ಡು ಜೊತೆಗೆ 50 ಕ್ವಿಂಟಾಲ್ ಪುಳಿಯೋಗರೆ ಪ್ರಸಾದ ವಿತರಿಸಲಾಗುತ್ತದೆ. ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ಆಡಳಿತ ಅಧಿಕಾರಿ ಶ್ರೀನಿವಾಸ್, ಡಾ. ರಾಜಕುಮಾರ್ ಅವರ ಅಳಿಯ ಗೋವಿಂದರಾಜ್ ಹಾಗೂ ಅವರ ಪತ್ನಿ ಲಕ್ಷ್ಮಿಉಪಸ್ಥಿತರಿದ್ದರು.
