ಬೆಂಗಳೂರು, ಜೂ.6- ಆರ್ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತದ ದುರಂತಕ್ಕೆ ನೇರ ಹೊಣೆ ಬೆಂಗಳೂರು ಉಸ್ತುವಾರಿ ಸಚಿವರಾದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂದು ಜೆಡಿಎಸ್ ಆರೋಪಿಸಿದೆ.
ಈ ಸಂಬಂಧ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಡಿ.ಕೆ.ಶಿವಕುಮಾರ್ ಅವರ ರಾಜೀನಾಮೆ ಪಡೆಯದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದೆ.
ದುರಂತಕ್ಕೆ ಪ್ರಮುಖ ಕಾರಣರಾದ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಸಂಪುಟದಿಂದ ಹೊರಹಾಕುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ನೈತಿಕತೆಯನ್ನು ಉಳಿಸಿಕೊಳ್ಳಲಿ. ಇಲ್ಲದಿದ್ದರೆ ನಿಮ್ಮಂತಹ ಕಟುಕರು, ಪಾಪ ಪ್ರಜ್ಞೆ ಇಲ್ಲದವರು ರಾಜಕಾರಣಕ್ಕೆ ಕಪ್ಪು ಚುಕ್ಕೆ ಎಂದು ಟೀಕಿಸಿದೆ.
ಫೋಟೋ ಸೆಷನ್ ನಡೆಸಿ ಸಂಭ್ರಮಿಸಿದ್ದು ಸಿಎಂ, ಸಿಎಂ ಮೊಮ್ಮಕ್ಕಳು, ಡಿಸಿಎಂ, ಸಚಿವರು ಮತ್ತು ಅವರ ಮಕ್ಕಳು, ಆಡಳಿತ ಪಕ್ಷದ ಶಾಸಕರು, ಅವರ ಕುಟುಂಬದವರು ಹಾಗೂ ಅಧಿಕಾರಿಗಳು. ಆದರೆ, ಶಿಕ್ಷೆ ಮಾತ್ರ ಬೆಂಗಳೂರು ಪೊಲೀಸ್ ಆಯುಕ್ತರಿಗೆ. ಸರ್ಕಾರ ಮಾಡಿರುವ ಅಚಾತುರ್ಯಕ್ಕೆ ಪೊಲೀಸ್ ಅಧಿಕಾರಿಗಳ ತಲೆದಂಡ. ಇದು ಯಾವ ನ್ಯಾಯ? ಎಂದು ಜೆಡಿಎಸ್ ಪ್ರಶ್ನಿಸಿದೆ.
ಕೋತಿ ಮೊಸರು ತಿಂದು ಮೇಕೆ ಬಾಯಿಗೆ ವರೆಸಿತು ಎಂಬ ಮಾತಿನಂತೆ ಇಂತಹ ಘನ ಕಾರ್ಯವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಟೀಕಿಸಿದೆ.