ಬೆಂಗಳೂರು,ಫೆ.5- ಯಾವುದೇ ಧರ್ಮದ ಬಗ್ಗೆ ಶ್ರದ್ಧೆ, ಆಚರಣೆ, ನಂಬಿಕೆಗಳು ಆಯಾಯ ವ್ಯಕ್ತಿಗೆ ಸಂಬಂಧಿಸಿದ ವಿಚಾರಗಳು. ನಾವು ಪ್ರತಿಯೊಂದಕ್ಕೂ ಗೌರವ ನೀಡಬೇಕು. ಆದರೆ ಇವುಗಳನ್ನು ಬಿಜೆಪಿ ತನ್ನ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕ ಅಶೋಕ್ ಅವರ ಹೇಳಿಕೆಗೆ ಉತ್ತರಿಸಲು ನಾನು ಇಷ್ಟ ಪಡುವುದಿಲ್ಲ. ಅನಾವಶ್ಯಕವಾಗಿ ಈ ವಿಚಾರಗಳನ್ನು ಎಳೆದಾಡಲು ನಾನು ಹೋಗುವುದಿಲ್ಲ. ನಮ ಪಕ್ಷದ ನಾಯಕರು ಈ ವಿಚಾರವಾಗಿ ವಿಶಾಲಾರ್ಥದ ಹೇಳಿಕೆ ನೀಡಿದ್ದಾರೆ. ಆದರೆ ಬಿಜೆಪಿ ಇದರಲ್ಲಿ ರಾಜಕೀಯ ಮಾಡುತ್ತಿದೆ. ಧರ್ಮ, ಆಚರಣೆ, ನಂಬಿಕೆಗಳು ರಾಜಕೀಯವಾಗಿ ಉಪಯೋಗಿಸಿಕೊಳ್ಳುವ ವಿಚಾರವಲ್ಲ ಎಂದು ಹೇಳಿದರು.
ಪ್ರಪಂಚದಲ್ಲಿ ಹಲವಾರು ಧಾರ್ಮಿಕ ಆಚರಣೆ, ನಂಬಿಕೆಗಳಿವೆ. ನಾನು ನನ್ನ ದೇವರನ್ನು ನಂಬುತ್ತೇನೆ. ಕೆಲವರು ಹಸ್ತ ನೋಡಿಕೊಳುತ್ತಾರೆ, ಇನ್ನೂ ಕೆಲವರು ನೀರು, ಆಕಾಶ, ಸೂರ್ಯನನ್ನು ನಂಬುತ್ತಾರೆ. ಇದರಲ್ಲಿ ಸರಿ ತಪ್ಪು ಎಂಬುದಿಲ್ಲ, ಅವರವರ ನಂಬಿಕೆ ಅಷ್ಟೇ ಎಂದರು. ಅಶೋಕ್ ಅವರಿಗೆ ನನ್ನ ಹೆಸರು ಬಳಸಿಕೊಳ್ಳದೇ ಇದ್ದರೆ ಮಾರ್ಕೆಟ್ ಇರುವುದಿಲ್ಲ.
ಹೀಗಾಗಿ ಪ್ರತಿ ಸಾರಿ ಪ್ರತೀ ವಿಚಾರಕ್ಕೂ ನನ್ನ ಬಗ್ಗೆ ಹೇಳಿಕೆ ನೀಡುತ್ತಾರೆ. ಅದಕ್ಕೆಲ್ಲಾ ನಾನು ಪ್ರತಿಕ್ರಿಯಿಸುವ ಅಗತ್ಯವಿಲ್ಲ. ನನಗೆ ಧರ್ಮ, ದೇವರು ಎಲ್ಲದರ ಮೇಲೂ ನಂಬಿಕೆ ಇದೆ. ಅದನ್ನು ಪ್ರಶ್ನೆ ಮಾಡಲು ಯಾರಿಗೂ ಅಧಿಕಾರವಿಲ್ಲ. ಅಶೋಕ್ರವರು ಕಲ್ಲು ಎಂದು ಹೆಸರಿಟ್ಟುಕೊಳ್ಳಬೇಕಿತ್ತು. ಅಶೋಕ್ ಎಂದು ಏಕೆ ಇಟ್ಟುಕೊಂಡಿದ್ದಾರೆ. ಹಾಗೆಯೇ ಪ್ರತಿಯೊಂದಕ್ಕೂ ಅದರದೇ ಆದ ನಂಬಿಕೆಗಳಿರುತ್ತವೆ. ಅದನ್ನು ಏಕೆ ಪ್ರಶ್ನೆ ಮಾಡಬೇಕು. ಅಶೋಕ್ರವರಿಗೆ ಏನು ಹೆಚ್ಚುಕಡಿಮೆಯಾಗಿದೆಯೋ ಗೊತ್ತಿಲ್ಲ ಎಂದರು.
ಕುಂಭಮೇಳಕ್ಕೆ ನಾನು ಭೇಟಿ ನೀಡದೇ ಇರುವುದರ ಬಗ್ಗೆ ಅವರೇಕೆ ಪ್ರಶ್ನೆ ಮಾಡಬೇಕು. ಮಾಧ್ಯಮಗಳು ಕೂಡ ತಮ ಟಿಆರ್ಪಿ ಲಾಭಕ್ಕಾಗಿ ಇಂತಹ ವಿಚಾರದಲ್ಲಿ ವೈಭವೀಕರಿಸಬಾರದು ಎಂದು ತಿರುಗೇಟು ನೀಡಿದರು.ಎರಡನೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಬಗ್ಗೆ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಬಳಿಕ ಚರ್ಚೆ ನಡೆಯಲಿದೆ. ಈಗ ಕೈಗಾರಿಕಾ ಸಚಿವರು ಹಲವು ಸ್ಥಳಗಳನ್ನು ಪರಿಶೀಲಿಸಿದ್ದಾರೆ. ನನ್ನ ಬಳಿಯಾಗಲೀ, ಮುಖ್ಯಮಂತ್ರಿಯವರ ಬಳಿಯಾಗಲೀ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.