ಬೆಂಗಳೂರು, ಜೂ.3- ಕಾಂಗ್ರೆಸ್ ನಾಯಕರೊಬ್ಬರು ಖಾಸಗಿ ಶಾಲೆಯ ಜಾಗವನ್ನು ಕಬಳಿಸಲು ಯತ್ನಿಸಿರುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದ ವಿದ್ಯಾರಣ್ಯಪುರದ ಎಂ.ಎಸ್.ಪಾಳ್ಯದ ಶ್ರೀ ಶಾರದಾ ವಿದ್ಯಾನಿಕೇತನ ಶಾಲೆಯ ಶಿಕ್ಷಕರು, ಆಡಳಿತ ಮಂಡಳಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಸದಾಶಿವನಗರದ ಡಿ.ಕೆ.ಶಿವಕುಮಾರ್ರವರ ಮನೆಗೆ ಭೇಟಿ ನೀಡಿ ದೂರು ನೀಡಿದರು.
ಧನಂಜಯ ಎಂಬುವವರು ಅಕ್ರಮವಾಗಿ ಶಾಲೆಯನ್ನು ಕಬ್ಬ ಮಾಡಿಕೊಂಡಿದ್ದು, ಗೂಂಡಾಗಳನ್ನು ಬಳಸಿ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಶಾಲೆಯ ಆವರಣದಿಂದ ಹೊರಹಾಕಿದ್ದಾರೆ. ಸಿಬ್ಬಂದಿಗಳ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಈಗಲೂ ಅವರು ಶಾಲೆಯ ಆವರಣವನ್ನು ಅತಿಕ್ರಮಿಸಿಕೊಂಡಿದ್ದಾರೆ ಎಂದು ದೂರಿದ್ದರು.
ಪೋಷಕರು ಈ ವೇಳೆ ಅತಿಕ್ರಮಣಕಾರರಿಂದಾಗುತ್ತಿರುವ ತೊಂದರೆಗಳ ಬಗ್ಗೆ ವಿವರಿಸಿದರು. ತಕ್ಷಣವೇ ಡಿ.ಕೆ.ಶಿವಕುಮಾರ್ ಡಿಡಿಪಿಐ, ಪೊಲೀಸ್ ನಗರಾಯುಕ್ತರು ಹಾಗೂ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿದರು.
ಡಿಡಿಪಿಐ ಫೋನ್ನಲ್ಲಿ ಮಾತನಾಡುವ ವೇಳೆ ಈ ಪ್ರಕರಣ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಹೇಳುವ ಪ್ರಯತ್ನ ಮಾಡಿದರು. ಇದರಿಂದ ಸಿಟ್ಟಾದ ಡಿ.ಕೆ.ಶಿವಕುಮಾರ್, 200 ಜನ ನನ್ನ ಮನೆಯ ಬಳಿ ಬಂದು ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಗೊತ್ತಿಲ್ಲ ಎಂದರೆ ಹೇಗೆ?, ತಕ್ಷಣವೇ ಖುದ್ದಾಗಿ ಸ್ಥಳಕ್ಕೆ ಭೇಟಿ ನಿನೀಬೇಕು. ಮಧ್ಯಾಹ್ನದ ನಡುವೆ ನನಗೆ ವಾಸ್ತವದ ವರದಿ ನೀಡಬೇಕು ಎಂದು ಹೇಳಿದರು.
ಅತಿಕ್ರಮಣ ಮಾಡಿರುವ ಧನಂಜಯ ಎಂಬ ವ್ಯಕ್ತಿ ಕಾಂಗ್ರೆಸ್ ನಾಯಕ ಎಂದು ಹೇಳಿಕೊಳ್ಳುತ್ತಿದ್ದಾರೆ ಎನ್ನುತ್ತಿದ್ದಂತೆ ಮತ್ತಷ್ಟು ಅಸಹನೆ ವ್ಯಕ್ತಪಡಿಸಿದ ಡಿ.ಕೆ.ಶಿವಕುಮಾರ್, ಯಾರು, ಯಾವುದೇ ಪಕ್ಷದ ಹೆಸರು ಹೇಳಲಿ, ನನ್ನ ಹೆಸರು ಹೇಳಿದರೂ ಚಿಂತೆಯಿಲ್ಲ, ಶಾಲೆ ಮತ್ತು ವಿದ್ಯಾರ್ಥಿಗಳ ಭವಿಷ್ಯ ಮುಖ್ಯ ಖುದ್ದಾಗಿ ಈ ಪ್ರಕರಣವನ್ನು ಗಮನಿಸಬೇಕು. ಅತಿಕ್ರಮಣವನ್ನು ತೆರವು ಮಾಡಿ ಒಪ್ಪಂದದಂತೆ ಶಾಲೆ ನಡೆಯಲು ಅನುವು ಮಾಡಿಕೊಡಬೇಕು. ಬಿಇಒ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದೇ ಇದ್ದರೆ ಅಮಾನತು ಮಾಡಬೇಕಾಗುತ್ತದೆ. ಎಂದು ಡಿ.ಕೆ.ಶಿವಕುಮಾರ್ ಎಚ್ಚರಿಸಿದರು.
ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡು ಈ ರೀತಿ ಶಾಲೆಗಳಿಗೆ ತೊಂದರೆ ಕೊಡಲು ಸಾಧ್ಯವಿಲ್ಲ. ನಾನೂ ಕೂಡ ಶಾಲೆ ನಡೆಸುತ್ತಿದ್ದೇನೆ. ನಾನು ವಾರಸುದಾರನಾಗಿದ್ದರೂ ಕೂಡ ಶಾಲೆ ಸಮಾಜದ ಆಸ್ತಿ. ಶಿಕ್ಷಣ ಸಂಸ್ಥೆಗಳನ್ನು ರಕ್ಷಿಸದೇ ಇದ್ದರೆ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಯಾವುದೇ ಪಕ್ಷದವರಾಗಿರಲಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಾವು ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಈ ವಿವಾದ ಇತ್ಯರ್ಥವಾಗದೇ ಇದ್ದರೆ ನಾನೇ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡುತ್ತೇನೆ. ಈಗಾಗಲೇ ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಡಿಡಿಪಿಐನವರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.