ಬೆಂಗಳೂರು, ಜೂ.29- ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಯಾರ ಶ್ರಮ ಎಷ್ಟಿದೆ ಎಂದು ಹೈಕಮಾಂಡ್ಗೆ ಸ್ಪಷ್ಟವಾದ ಮಾಹಿತಿ ಇದೆ. ಅದಕ್ಕೆ ಪೂರಕವಾಗಿ ಮುಂದಿನ ಮೂರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂದು ಕಾಂಗ್ರೆಸ್ ಪಕ್ಷದ ಶಾಸಕರೊಬ್ಬರು ಹೇಳುವ ಮೂಲಕ ರಾಜಕೀಯ ಕ್ರಾಂತಿ ಹೇಳಿಕೆಗಳಿಗೆ ಮತ್ತೊಂದು ಸ್ವರೂಪ ನೀಡಿದ್ದಾರೆ.
ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ರಾಜ್ಯ ರಾಜಕಾರಣದಲ್ಲಿ ಕ್ರಾಂತಿಯಾಗಲಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದರು. ಹಿರಿಯ ನಾಯಕರು ತಾಕೀತು ಮಾಡಿದ ಬಳಿಕ ತಮ ಹೇಳಿಕೆಯನ್ನು ಬದಲಾವಣೆ ಮಾಡಿದ ರಾಜಣ್ಣ ಕ್ರಾಂತಿ ಕಾಂಗ್ರೆಸ್ ನಲ್ಲೇ ಯಾಕೆ ಆಗಬೇಕು. ಬಿಜೆಪಿಯಲ್ಲಿ ನಡೆಯಬಾರದೇ, ಕೇಂದ್ರ ಸರ್ಕಾರದಲ್ಲಿ ಆಗಬಾರದೇ ಎಂದು ಮಗ್ಗಲು ಬದಲಿಸಿದ್ದರು.
ರಾಜಕೀಯ ಕ್ರಾಂತಿ ಕುರಿತು ರಾಜಣ್ಣ ನೀಡಿದ್ದ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ರನ್ನು
ಪಕ್ಕದಲ್ಲಿರಿಸಿಕೊಂಡು ಹೇಳಿದ್ದರು.ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಅನೇಕರು ರಾಜಣ್ಣ ಹೇಳಿಕೆಗೆ ಪೂರಕವಾಗಿ ಮಾತನಾಡಿದ್ದರು. ಸಿದ್ದರಾಮಯ್ಯ ಬಣದ ಸಚಿವರು, ಶಾಸಕರು ಸೆಪ್ಟಂಬರ್ನಲ್ಲಿ ರಾಜಕೀಯ ಕ್ರಾಂತಿಯಾಗಲಿದೆ. ಕೆಪಿಸಿಸಿ ಅಧ್ಯಕ್ಷರು ಬದಲಾಗಲಿದ್ದಾರೆ, ಸಚಿವ ಸಂಪುಟ ಪುನರ್ ರಚನೆಯಾಗಲಿದೆ ಎಂದು ಹೇಳಿಕೊಂಡು ಅಡ್ಡಾಡುವ ಹೊತ್ತಿನಲ್ಲಿ ಡಿ.ಕೆ.ಶಿವಕುಮಾರ್ ಪರಮಾಪ್ತರಾಗಿರುವ ರಾಮನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಮತ್ತೊಂದು ಸ್ಫೋಟಕ ಹೇಳಿಕೆಯನ್ನು ಹೊರ ಹಾಕಿದ್ದು, ಸಿದ್ದರಾಮಯ್ಯ ಬಣಕ್ಕೆ ಟಾಂಗ್ ನೀಡಿದ್ದಾರೆ.
ಮುಂದಿನ ಎರಡು ಮೂರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವುದು ಖಚಿತ. ನಾನು ಸುತ್ತು ಬಳಸಿ ಮಾತನಾಡುವುದಿಲ್ಲ. ನೇರವಾಗಿಯೇ ಹೇಳುತ್ತಿದ್ದೇನೆ. ಅವರೆಲ್ಲಾ ಹೇಳುವಂತೆ ರಾಜಕೀಯ ಕ್ರಾಂತಿಯಾಗುತ್ತದೆ. ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅಧಿಕಾರವಹಿಸಿಕೊಳ್ಳಲಿದ್ದಾರೆ ಎಂದಿದ್ದಾರೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಷ್ಟು ಸ್ಥಾನ ಗಳಿಸಿತ್ತು. ನಮ ಸಂಖ್ಯಾಬಲ ಎಷ್ಟಿತ್ತು ಎಂದು ಎಲ್ಲರಿಗೂ ಗೊತ್ತಿದೆ. ಡಿ.ಕೆ.ಶಿವಕುಮಾರ್ ಪಕ್ಷದ ಜವಾಬ್ದಾರಿ ವಹಿಸಿಕೊಂಡ ಬಳಿಕ ಭಾರತ್ ಜೋಡೋ ಯಾತ್ರೆಯನ್ನು ಯಶಸ್ವಿಗೊಳಿಸಿದರು. ಮೇಕೆದಾಟು ಪಾದಯಾತ್ರೆ, ಸ್ವಾತಂತ್ರ್ಯ ನಡಿಗೆಯಂತಹ ಕಾರ್ಯಕ್ರಮಗಳು ಇತಿಹಾಸದಲ್ಲೇ ನಡೆದಿರಲಿಲ್ಲ. ಕೋವಿಡ್ ಸಂದರ್ಭದಲ್ಲಿ ಆರೋಗ್ಯಹಸ್ತದಂತಹ ಅಪರೂಪದ ಕಾರ್ಯಕ್ರಮ ಡಿ.ಕೆ.ಶಿವಕುಮಾರ್ ಕೊಡುಗೆ ಎಂದಿದ್ದಾರೆ.
ಡಿ.ಕೆ.ಶಿವಕುಮಾರ್ ಅವರ ಶ್ರಮ, ರೂಪುರೇಷೆ, ಹೋರಾಟ, ಬೆವರು, ಆಸಕ್ತಿ ಎಲ್ಲವೂ ಕಣ್ಣೆದುರಿಗೆ ಇದೆ. ಅದು ಹೈಕಮಾಂಡ್ ಗಮನಕ್ಕೂ ಇದೆ. ಅದಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ. ಹೈಕಮಾಂಡ್ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಕ್ರಾಂತಿಗೆ ಅವರು ಹೇಳುತ್ತಿರುವ ದಿನಾಂಕವೇ ಇದು. ಹೈಕಮಾಂಡ್ ಈ ವರ್ಷವೇ ನಿರ್ಧಾರ ತೆಗೆದುಕೊಳ್ಳಲಿದೆ. ಎರಡು ಮೂರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ಗೆ ಅವಕಾಶ ಸಿಗುತ್ತದೆ ಎಂದು ಪುನರುಚ್ಚರಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ , ಮುಖ್ಯಮಂತ್ರಿ ಬದಲಾಗುವುದಿಲ್ಲ ಎಂದು ಹೇಳಿರುವುದಕ್ಕೆ ತಿರುಗೇಟು ನೀಡಿರುವ ಇಕ್ಬಾಲ್ ಹುಸೇನ್, ವಿಧಾನಸಭೆ ಚುನಾವಣೆ ಬಳಿಕ ಮುಖ್ಯಮಂತ್ರಿ ಆಯ್ಕೆಯ ವೇಳೆಯ ವೇಳೆ ದೆಹಲಿಯ ಬೆಳವಣಿಗೆಗಳು ನಮಗೆ ಗೊತ್ತಿವೆ. ನಾವು ದೆಹಲಿಯಲ್ಲೇ ಇದ್ದೆವು. ಆಗ ನಡೆದ ಚರ್ಚೆಯಲ್ಲಿ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರು ನಿರ್ಧಾರ ತೆಗೆದುಕೊಂಡಿದ್ದಾರೆ. ಅದರಂತೆ ಮಾಡುತ್ತಾರೆ. ಕಾದು ನೋಡಬೇಕಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಲ್ಲಿ ಎಲ್ಲವೂ ತಣ್ಣಗಿದೆ ಎಂಬ ಹೊತ್ತಿನಲ್ಲಿ ರಾಜಣ್ಣ ಕಾಂತ್ರಿಯ ಸುಳಿವು ನೀಡಿ ಬಿರುಗಾಳಿ ಎಬ್ಬಿಸಿದ್ದಾರೆ. ಅದಕ್ಕೆ ಡಿ.ಕೆ.ಶಿವಕುಮಾರ್ ಬಣ ನಿಧಾನಕ್ಕೆ ತಿರುಗೇಟು ನೀಡಲಾರಂಭಿಸಿದೆ. ಸಿದ್ದರಾಮಯ್ಯ ಇರುವವರೆಗೂ ರಾಜಕೀಯದಲ್ಲಿರುತ್ತೇನೆ ಎಂದು ಹೇಳುವಷ್ಟು ಕಟ್ಟಾ ಅಭಿಮಾನಿಯಾಗಿರುವ ರಾಜಣ್ಣ, ಉದ್ದೇಶಪೂರ್ವಕವಾಗಿಯೇ ಹೇಳಿಕೆ ನೀಡಿದ್ದಾರೆ.
ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಮುಖ್ಯಂತ್ರಿ ಅಧಿಕಾರ ಬದಲಾಗುತ್ತದೆ ಎಂಬ ಆಂತರಿಕ ಚರ್ಚೆಯನ್ನು ಹತ್ತಿಕ್ಕುವ ಸಲುವಾಗಿ ರಾಜಣ್ಣ ನೀಡಿದ ಹೇಳಿಕೆ ಬೇರೆಯ ಸ್ವರೂಪ ಪಡೆದುಕೊಳ್ಳುತ್ತಿದೆ. ಡಿ.ಕೆ.ಶಿವಕುಮಾರ್ ಬಣದ ಶಾಸಕರು, ಸಚಿವರು ನಿಧಾನಕ್ಕೆ ಧ್ವನಿ ಎತ್ತಲಾರಂಭಿಸಿದ್ದಾರೆ.
ಕಾಂಗ್ರೆಸ್ ಶಾಸಕರ ಜತೆ ಸುರ್ಜೇವಾಲ ಪ್ರತ್ಯೇಕ ಮಾತುಕತೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ನಾಳೆ ಬೆಂಗಳೂರಿಗೆ ಆಗಮಿಸುತ್ತಿದ್ದು, ಶಾಸಕರ ಜೊತೆ ಪ್ರತ್ಯೇಕವಾಗಿ ಚರ್ಚೆ ನಡೆಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟ ಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಣದೀಪ್ ಸಿಂಗ್ ಸುರ್ಜೇವಾಲ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಶಾಸಕರ ಜೊತೆ ಪ್ರತ್ಯೇಕವಾಗಿ ಚರ್ಚೆ ನಡೆಸುತ್ತಾರೆ. ರಣದೀಪ್ ಸಿಂಗ್ ಸುರ್ಜೇವಾಲ ಅವರ ಕಚೇರಿಯಿಂದಲೇ ನೇರವಾಗಿ ಶಾಸಕರಿಗೆ ಮಾಹಿತಿ ಹೋಗಿದೆ. ನನಗೂ ಕಾರ್ಯಕ್ರಮದ ವೇಳಾ ಪಟ್ಟಿ ಕಳುಹಿಸಿದ್ದಾರೆ. ಅದರಂತೆ ನಾನು ಶಾಸಕರಿಗೆ ವಿಷಯ ತಿಳಿಸುತ್ತಿದ್ದೇನೆ ಎಂದು ಹೇಳಿದರು.
ದಸರಾ ವೇಳೆಗೆ ಮುಖ್ಯಮಂತ್ರಿ ಬದಲಾಗುತ್ತಾರೆ. ನೂತನ ಮುಖ್ಯಮಂತ್ರಿ ದಸರಾ ಉದ್ಘಾಟಿಸುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಶೋಕ್ ಜೋತಿಷ್ಯ ಕಲಿತಿದ್ದರೆ ನನಗೂ ಸಮಯ ಕೊಡಿಸಿ, ನಾನು ಭವಿಷ್ಯ ಕೇಳುವುದಿದೆ.
ಅವರನ್ನು ಭೇಟಿ ಮಾಡುತ್ತೇನೆ ಎಂದು ಮಾರ್ಮಿಕವಾಗಿ ಹೇಳಿದರು. ಕಾವೇರಿ ಆರತಿ ಕುರಿತು ಹೈಕೋರ್ಟ್ ನೋಟೀಸ್ಗೆ ಕಾನೂನು ಪ್ರಕಾರವೇ ಉತ್ತರ ನೀಡುತ್ತೇವೆ. ಆರತಿ ವಿಚಾರಕ್ಕೆ ಯಾರೂ ಅನುಮತಿ ಕೇಳುತ್ತಿಲ್ಲ. ದಿನಾ ಅಲ್ಲಿ ಆರತಿ, ಪೂಜೆ ನಡೆಯುತ್ತಿದೆ ಎಂದು ಹೇಳಿದರು.