Wednesday, June 4, 2025
Homeರಾಜಕೀಯ | Politicsಜೂ.6ರಂದು ಡಿಎಂ-ಡಿಸಿಎಂ ದೆಹಲಿ ಭೇಟಿ, ಗರಿಗೆದರಿದ ಸಚಿವ ಸಂಪುಟ ಪುನರ್ ರಚನೆ ಚರ್ಚೆ

ಜೂ.6ರಂದು ಡಿಎಂ-ಡಿಸಿಎಂ ದೆಹಲಿ ಭೇಟಿ, ಗರಿಗೆದರಿದ ಸಚಿವ ಸಂಪುಟ ಪುನರ್ ರಚನೆ ಚರ್ಚೆ

DM-DCM to visit Delhi on June 6, cabinet reshuffle debate heats up

ಬೆಂಗಳೂರು, ಜೂ.2- ಸಚಿವ ಸಂಪುಟ ಪುನರ್ ರಚನೆಯಾಗಲಿದೆ ಎಂಬ ಚರ್ಚೆಗಳ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾ‌ರ್ ಜೂ. 6ರಂದು ದೆಹಲಿಗೆ ಭೇಟಿ ನೀಡುತ್ತಿರುವುದು ಕುತೂಹಲ ಕೆರಳಿಸಿದೆ.

ಸಂಪುಟದಲ್ಲಿ ಖಾಲಿ ಇರುವ ಒಂದು ಸ್ಥಾನಕ್ಕೆ ಭರ್ತಿ ಮಾಡುವುದರ ಜೊತೆಗೆ ಒಂದಷ್ಟು ಮಂದಿ ಅಸಮರ್ಥ, ವಿವಾದಿತ ಹಾಗೂ ನಿಷ್ಕ್ರಿಯ ಸಚಿವರುಗಳನ್ನು ಸಂಪುಟದಿಂದ ಹೊರಗಿಟ್ಟು ಉತ್ಸಾಹಿ ಹಾಗೂ ಸಮರ್ಥರಿಗೆ ಅವಕಾಶ ಕಲ್ಪಿಸಬೇಕು ಎಂಬ ಭಾರೀ ಪ್ರಮಾಣದಲ್ಲಿ ಚರ್ಚೆ ನಡೆದಿದೆ.

ಕೆಲ ಸಚಿವರಿಗೆ ತ್ರಿಶಂಖು ಸ್ಥಿತಿ ಆಗುವ ಆತಂಕವಿದ್ದು, ಸಂಪುಟ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿರುವವರು ನಿನ್ನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿಗೆ ಬಂದಾಗ ಅವರ ಮನೆಗೆ ಭೇಟಿ ನೀಡಿ ಮತ್ತೊಂದು ಅವಕಾಶ ನೀಡುವಂತೆ ದುಂಬಾಲು ಬಿದ್ದಿದ್ದಾರೆ.

ವಿಧಾನಪರಿಷತ್‌ನಲ್ಲಿ ಹಿರಿಯ ಸದಸ್ಯರಾಗಿರುವ ಬಿ.ಕೆ.ಹರಿಪ್ರಸಾದ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ವಿಧಾನಪರಿಷತ್‌ನ ಶಾಸಕಾಂಗ ನಾಯಕರಾಗಿ ನೇಮಿಸುವ ಸಾಧ್ಯತೆ ಇದೆ. ಹೀಗಾಗಿ ಹಾಲಿ ವಿಧಾನಪರಿಷತ್ ಸದಸ್ಯರಾಗಿರುವ ಹಾಗೂ ಸಚಿವ ಎನ್.ಎಸ್.ಬೋಸರಾಜು ಸ್ಥಾನಪಲ್ಲಟವಾಗುವ ಚರ್ಚೆಗಳು ಶುರುವಾಗಿವೆ.

ಸಂಪುಟದ ಏಕೈಕ ಮಹಿಳಾ ಸದಸ್ಯೆ ಲಕ್ಷ್ಮೀಹೆಬ್ಬಾಳ್ಳರ್ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಅಧಿಪತ್ಯ ಸಾಧಿಸಲು ಮುಂದಾಗಿದ್ದು, ಹಿರಿಯರಾದ ಸತೀಶ್ ಜಾರಕಿಹೊಳಿಯವರಿಗೆ ಪರೋಕ್ಷವಾಗಿ ಸೆಡ್ಡು ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಲಕ್ಷ್ಮೀಹೆಬ್ಬಾಳ್ಳರ್‌ರವರ ಪ್ರಾಬಲ್ಯ ತಗ್ಗಿಸಲು ಸಂಪುಟದಿಂದ ಕೋಕ್ ನೀಡುವ ಅಥವಾ ಮತ್ತೊಬ್ಬ ಮಹಿಳಾ ಸದಸ್ಯರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ.

ಪೌರಾಡಳಿತ ಸಚಿವ ರಹೀಂಖಾನ್, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ್, ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪೂರ್, ಸಮಾಜ
ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಸೇರಿದಂತೆ ಹಲವರಿಗೆ ಸಂಪುಟದಿಂದ ಕೋಕ್ ಸಿಗುವ ಸಾಧ್ಯತೆ ಇದೆ.

ಸಂಪುಟಕ್ಕೆ ಸೇರುವವರ ಪಟ್ಟಿ ಹನುಮಂತನ ಬಾಲದಂತೆ ಉದ್ದವಾಗಿದ್ದು, ಸುಮಾರು 60ಕ್ಕೂ ಹೆಚ್ಚು ಮಂದಿ ಲಾಬಿ ನಡೆಸುತ್ತಿದ್ದಾರೆ. ಎರಡೂವರೆ ವರ್ಷಗಳವರೆಗೂ ಕಾಯುವ ಪರಿಸ್ಥಿತಿ ಬಹಳಷ್ಟು ಮಂದಿ ಶಾಸಕರಿಗಿಲ್ಲದಂತಾಗಿದ್ದು ಕೂಡಲೇ ಸಂಪುಟ ಪುನರ್ ರಚನೆಯಾಗಬೇಕೆಂದು ಹಠ ಹಿಡಿದಿದ್ದಾರೆ. ಹೀಗಾಗಿ ಹೈಕಮಾಂಡ್‌ನೊಂದಿಗೆ ಚರ್ಚಿಸಲು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ದೆಹಲಿಗೆ ತೆರಳುತ್ತಿದ್ದಾರೆ ಎಂದು ಹೇಳಲಾಗಿದೆ.

RELATED ARTICLES

Latest News