ಬೆಂಗಳೂರು, ಮೇ 30– ನಗರದಲ್ಲಿ ಸಂಭವಿಸುವ ಮಳೆ ಅನಾಹುತಗಳನ್ನು ಪತ್ತೆ ಹಚ್ಚಲು ಡ್ರೋನ್ ಬಳಕೆ ಮಾಡಿಕೊಳ್ಳಲು ಬಿಬಿಎಂಪಿ ತೀರ್ಮಾನಿಸಿದೆ.ಇತ್ತಿಚೆಗೆ ಬಿದ್ದ ಮಳೆಯಿಂದ ಸಂಭವಿಸಿದ ಭಾರಿ ಅನಾಹುತದ ನಂತರ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಅಧಿಕಾರಿಗಳು ಇದೀಗ ಅನಾಹುತ ತಪ್ಪಿಸಲು ಸಾಧ್ಯವಿರುವ ಸಾಧಕ ಭಾದಕಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಈಗಾಗಲೇ ವಾಟರ್ ಬೋಟ್ ಖರೀದಿಗೆ ಟೆಂಡರ್ ಕರೆದಿರುವ ಬಿಬಿಎಂಪಿ ಅಧಿಕಾರಿಗಳು ಇದೀಗ ಅನಾಹುತ ಪತ್ತೆ ಹಚ್ಚಲು ಡ್ರೋನ್ಗಳ ಸಹಾಯ ಪಡೆಯಲು ಮುಂದಾಗಿದ್ದಾರೆ. ಪೊಲೀಸ್ ಇಲಾಖೆ ಜೊತೆ ಸೇರಿ ಮಳೆ ಹಾನಿಯಾಗುವ ಪ್ರದೇಶದಲ್ಲಿ ಡ್ರೋನ್ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು, ಪೊಲೀಸ್ ಇಲಾಖೆ ಹಾಗೂ ಬಿಬಿಎಂಪಿಯಿಂದ ನೋಡಲ್ ಅಧಿಕಾರಿ ನೇಮಕ ಮಾಡಲಾಗಿದೆ.
ಡ್ರೋನ್ ಮೂಲಕ ಹೆಚ್ಚು ಮಳೆ ಹಾನಿ ಪ್ರದೇಶಗಳನ್ನು ಪಾಲಿಕೆಯ ವಾರ್ ರೂಮ್ ನಿಂದ ವೀಕ್ಷಣೆ ಮಾಡಿ ಅಗತ್ಯ ಬಿದ್ದರೆ ತಕ್ಷಣ ಪರಿಹಾರ ತಂಡಗಳನ್ನು ಸ್ಥಳಕ್ಕೆ ರವಾನಿಸುವ ಉದ್ದೇಶ ಹೊಂದಲಾಗಿದೆ.
ಒಂದು ವೇಳೆ ಅತಿ ಅನಾಹುತ ಕಂಡು ಬಂದರೆ ಸ್ಥಳಿಯ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶ ರವಾನೆ ಮಾಡಲಾಗುವುದು.
ವಾಟರ್ ಬೋಟ್, ಡ್ರೋನ್ ಮತ್ತಿತರ ಯಾವುದೆ ಸಾಧನ ಬೇಕಾದರೂ ಬಳಕೆ ಮಾಡಿಕೊಳ್ಳಿ ಆದರೆ ನಗರದಲ್ಲಿ ಸಂಭವಿಸುವ ಮಳೆ ಅನಾಹುತಗಳಿಗೆ ಕಡಿವಾಣ ಹಾಕಿ ಎಂದು ಸರ್ಕಾರದ ಹಿರಿಯ ಅಧಿಕಾರಿಗಳು ಬಿಬಿಎಂಪಿಯವರಿಗೆ ಬಿಸಿ ಮುಟ್ಟಿಸಿರುವ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ನಾನಾ ಕಸರತ್ತುಗಳನ್ನು ಆರಂಭಿಸಿದ್ದಾರೆ.