Friday, October 18, 2024
Homeರಾಜ್ಯಮುಡಾ ಅಧಿಕಾರಿಗಳಿಗೆ ಇ.ಡಿ. ನೋಟೀಸ್

ಮುಡಾ ಅಧಿಕಾರಿಗಳಿಗೆ ಇ.ಡಿ. ನೋಟೀಸ್

ED Notice to Muda officials.

ಬೆಂಗಳೂರು,ಅ.9- ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಕುರ್ಚಿಯನ್ನೇ ಅಲುಗಾಡಿಸುತ್ತಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಅಕ್ರಮ ನಿವೇಶನ ಹಂಚಿಕೆ ಪ್ರಕರಣ ಕುರಿತು ಜಾರಿನಿರ್ದೇಶನಾಲಯ (ಇಡಿ) ಮುಡಾ ಅಧಿಕಾರಿಗಳಿಗೆ ದಾಖಲೆ ನೀಡಲು ನೋಟೀಸ್ ಜಾರಿ ಮಾಡಿದೆ.

ಈಗಾಗಲೇ ಇಡಿ ಪ್ರಕರಣಕ್ಕೆ ಸಂಧಿಸಿದಂತೆ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಭಾವ ಮೈದುನ ಮಲ್ಲಿಕಾರ್ಜುನ ಸ್ವಾಮಿ, ಜಮೀನು ಮಾಲೀಕ ದೇವರಾಜ್ ವಿರುದ್ಧ ಇಸಿಐಆರ್ ದಾಖಲಿಸಿತ್ತು. ಇದರ ಬೆನ್ನಲ್ಲೇ ಪ್ರಕರಣದ ಪ್ರಮುಖ ಕೇಂದ್ರ ಬಿಂದು ಆಗಿರುವ ಮುಡಾ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿರುವ ಇಡಿ ಮೂರರಿಂದ 4 ದಿನದೊಳಗೆ ಸಂಭಂಧಪಟ್ಟ ದಾಖಲೆಗಳನ್ನು ನೀಡಬೇಕೆಂದು ಸೂಚನೆ ಕೊಟ್ಟಿದೆ.

ಮೈಸೂರಿನ ಕೆಸರೆ ಗ್ರಾಮದಲ್ಲಿ 50:50ರ ಅನುಮಪಾತದಲ್ಲಿ ನಿವೇಶನ ಹಂಚಿಕೆ ಸಂಭಂದ ಕೇಳಿಬಂದಿರುವ ಆರೋಪಗಳ ಕುರಿತು ಸಮಗ್ರವಾದ ದಾಖಲೆಗಳನ್ನು ಒದಗಿಸಬೇಕು. ಬೆಂಗಳೂರಿನ ಶಾಂತಿನಗರದಲ್ಲಿರುವ ಇಡಿ ಕಚೇರಿಗೆ ನಾಲ್ಕು ದಿನದೊಳಗೆ ದಾಖಲೆಗಳನ್ನು ತರಬೇಕೆಂದು ಮುಡಾ ಆಯುಕ್ತರಿಗೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

ಮೈಸೂರು ನಗರದಿಂದ 15 ಕಿ.ಮೀ ದೂರದಲ್ಲಿರುವ ಕೆಸರೆ ಗ್ರಾಮದಲ್ಲಿ ಮುಖ್ಯಮಂತ್ರಿ ಪತ್ನಿಗೆ ಪರ್ಯಾಯ ನಿವೇಶನ ನೀಡಬೇಕಾದಲ್ಲಿ ಯಾವುದಾದರೂ ಬಡಾವಣೆಯನ್ನು ನೀಡುವ ಬದಲು 1991ರಲ್ಲಿ ನಿರ್ಮಾಣವಾದ ವಿಜಯನಗರದ 3ನೇ ಹಂತದಲ್ಲಿ ನಿವೇಶನ ನೀಡಿರುವ ಬಗ್ಗೆ ದಾಖಲೆಗಳನ್ನು ಒದಗಿಸಬೇಕೆಂದು ನೋಟಿಸ್‌ನಲ್ಲಿ ಸೂಚನೆ ಕೊಡಲಾಗಿದೆ.

ಹೈರಾಣರಾದ ಅಧಿಕಾರಿಗಳು:
ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ನೇತೃತ್ವದ ಏಕಸದಸ್ಯ ವಿಚಾರಣಾ ಸಮಿತಿ ಹಾಗೂ ಲೋಕಾಯುಕ್ತ ಪೊಲೀಸರು ಮುಡಾ ಪ್ರಕರಣವನ್ನು ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದ್ದು, ಅವುಗಳಿಗೆ ಪೂರಕ ದಾಖಲೆಗಳನ್ನು ಒದಗಿಸುವಲ್ಲಿ ಮುಡಾ ಸಿಬ್ಬಂದಿ ಹೈರಾಣಾಗಿದ್ದಾರೆ. ಮುಡಾದಲ್ಲಿ 50:50 ಅನುಪಾತದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆಗೆ ರಾಜ್ಯ ಸರ್ಕಾರವು ಇದೇ ವರ್ಷ ಜುಲೈ 14ರಂದು ಏಕಸದಸ್ಯ ವಿಚಾರಣಾ ಸಮಿತಿಯನ್ನು ನೇಮಿಸಿತ್ತು. ನಿವೃತ್ತ ನ್ಯಾಯಮೂರ್ತಿಗಳು ಈಗಾಗಲೇ ಹಲವು ಬಾರಿ ಮುಡಾ ಕಚೇರಿಗೆ ಬಂದು ಹೋಗಿದ್ದಾರೆ.

ಆಯೋಗಕ್ಕೆ ಸುಮಾರು 8 ಲಕ್ಷ ಪುಟಗಳಷ್ಟು ದಾಖಲೆಗಳ ಪ್ರತಿಗಳು ಅವಶ್ಯವಿದೆ ಎನ್ನಲಾಗಿದ್ದು, ಅವೆಲ್ಲವನ್ನೂ ಜೆರಾಕ್ಸ್ ಮಾಡಿ, ದೃಢೀಕರಿಸಿ ನಂತರ ಆಯೋಗದ ಬಳಕೆಗೆ ನೀಡಲಾಗುತ್ತಿದೆ. ಮುಡಾದಲ್ಲಿ ಈಗಾಗಲೇ 9 ಜೆರಾಕ್ಸ್ ಯಂತ್ರಗಳಿದ್ದು, ಅದರೊಟ್ಟಿಗೆ ಹೆಚ್ಚುವರಿಯಾಗಿಯೂ ಯಂತ್ರಗಳನ್ನು ಖರೀದಿಸಲಾಗಿದೆ. ಮತ್ತೊಂದೆಡೆ ಲೋಕಾಯುಕ್ತ ಪೊಲೀಸರ ಒಂದು ತಂಡವು ಮುಡಾದಲ್ಲಿ ಕೆಲವು ದಿನಗಳಿಂದ ಬೀಡು ಬಿಟ್ಟಿದ್ದು, ದಾಖಲೆಗಳನ್ನು ಜಾಲಾಡುತ್ತಿದೆ.

RELATED ARTICLES

Latest News