ಬೆಂಗಳೂರು,ಡಿ.8- ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಿರೋಧ ಪಕ್ಷಗಳನ್ನು ನಿರ್ಲಕ್ಷಿಸುತ್ತಿದ್ದು, ವಿದೇಶಿ ನಿಯೋಗಗಳಿಗೆ ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗದಂತೆ ಹೇಳುತ್ತಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇರ ಆರೋಪ ಮಾಡಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕರಾಗಿದ್ದರೂ, ವಿದೇಶಿ ಅತಿಥಿಗಳು ವಿರೋಧ ಪಕ್ಷವನ್ನು ಭೇಟಿಯಾಗಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವಲ್ಲಿ ಸರ್ಕಾರಕ್ಕೆ ಯಾವುದೇ ಪಾತ್ರವಿಲ್ಲ ಎಂದು ಅವರಿಗೆ ತಿಳಿದಿಲ್ಲ. ಇದು ಸಂಪೂರ್ಣವಾಗಿ ವಿದೇಶಿ ಅತಿಥಿಗಳ ವೈಯಕ್ತಿಕ ನಿರ್ಧಾರ. ಇದರಲ್ಲಿ ಸರ್ಕಾರಕ್ಕೆ ಯಾವುದೇ ಪಾತ್ರವಿಲ್ಲ. ಅವರು, ತುಂಬಾ ಬಾಲಿಶವಾಗಿ ವರ್ತಿಸುತ್ತಿದ್ದಾರೆ. ಅವರು ಇನ್ನೂ ತಮ ಕಾನ್ವೆಂಟ್ ಶಾಲೆಯ ಆಟಗಳಿಂದ ಮಾನಸಿಕವಾಗಿ ಹೊರಬಂದಿಲ್ಲ ಎಂದು ತೋರುತ್ತದೆ.
ರಾಹುಲ್ ಗಾಂಧಿಗೆ ತಾನು ಹೊಂದಿರುವ ಹುದ್ದೆಯ ಘನತೆ ಅರ್ಥವಾಗುತ್ತಿಲ್ಲ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ತಾನು ಗೌರವಾನ್ವಿತ ಮತ್ತು ಗಂಭೀರ ಸ್ಥಾನದಲ್ಲಿದ್ದೇನೆಂದು ತಿಳಿದಿಲ್ಲ ಎಂದು ವ್ಯಂಗ್ಯ ಮಾಡಿದೆ.
ರಾಹುಲ್ ಗಾಂಧಿಯವರ ಹೇಳಿಕೆಗಳು ಎಷ್ಟು ಹಾಸ್ಯಾಸ್ಪದವೆಂದರೆ, ಅವುಗಳ ಬಗ್ಗೆ ಯೋಚಿಸಿ ನಗುವಷ್ಟು. ಮೋದಿಯವರು ದೇಶದ ಪ್ರಧಾನಿ. ಅವರು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ನಿರತರಾಗಿದ್ದಾರೆ ಇಂಥ ಸಣ್ಣ ವಿಷಯಗಳಿಗೆ ಅವರಿಗೆ ಸಮಯವಿಲ್ಲ. ಹೀಗಿದ್ದಾಗ ವಿದೇಶಿ ನಾಯಕರಿಗೆ ರಾಹುಲ್ ಗಾಂಧಿಯನ್ನು ಭೇಟಿಯಾಗಬೇಡಿ ಎಂದು ಅವರು ಹೇಳುವುದಾದರೆ ಇದನ್ನು ಯಾರಾದರೂ ಹೇಗೆ ಊಹಿಸಲು ಸಾಧ್ಯ? ಎಂದು ಪ್ರಶ್ನೆ ಮಾಡಿದೆ.
ರಾಹುಲ್ ಗಾಂಧಿಯವರು ವಿರೋಧಪಕ್ಷದ ನಾಯಕರಾದ ನಂತರ ಅನೇಕ ವಿದೇಶಿ ನಾಯಕರು ಈಗಾಗಲೇ ಅವರನ್ನು ಭೇಟಿ ಮಾಡಿದ್ದಾರೆ. ಅವರಲ್ಲಿ ಶೇಖ್ ಹಸೀನಾ (10 ಜೂನ್ 2024), ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ (21 ಆಗಸ್ಟ್ 2024), ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ (18 ಮಾರ್ಚ್ 2025), ಮತ್ತು ಮಾರಿಷಸ್ ಪ್ರಧಾನಿ ನವೀನ್ಚಂದ್ರ ರಾಮಗೂಲಮ್ (16 ಸೆಪ್ಟೆಂಬರ್ 2025) ಸೇರಿದ್ದಾರೆ.
ಅಲ್ಲದೆ, ವಿದೇಶಿ ರಾಷ್ಟ್ರಗಳ ಮುಖ್ಯಸ್ಥರು ಭಾರತ ಭೇಟಿಯ ಸಮಯದಲ್ಲಿ ವಿರೋಧ ಪಕ್ಷದ ನಾಯಕನನ್ನು ಭೇಟಿಯಾಗಬೇಕು ಎಂಬ ಯಾವುದೇ ಸ್ಥಿರ ಅಥವಾ ಅಧಿಕೃತ ನಿಯಮವಿಲ್ಲ. ಆದರೆ ಇದನ್ನು ಸಾಮಾನ್ಯವಾಗಿ ಪ್ರಜಾಪ್ರಭುತ್ವ ಸಂಪ್ರದಾಯ ಮತ್ತು ಶಿಷ್ಟಾಚಾರದ ಭಾಗವಾಗಿ ನೋಡಲಾಗುತ್ತದೆ. ಆದಾಗ್ಯೂ ವಿದೇಶಾಂಗ ಸಚಿವಾಲಯ ಇದನ್ನು ಎಂದಿಗೂ ಕಡ್ಡಾಯ ನಿಯಮವೆಂದು ಘೋಷಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
ರಾಹುಲ್ ಗಾಂಧಿ ಇನ್ನೂ 10 ಜನಪಥ್ ಮನಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ. ಮನಮೋಹನ್ ಸಿಂಗ್ ಸರ್ಕಾರದಲ್ಲಿ, ಸೋನಿಯಾ ಗಾಂಧಿ, ಯುಪಿಎ ಅಧ್ಯಕ್ಷೆಯಾಗಿ, ಪ್ರಧಾನಿಗಿಂತಲೂ ಮೇಲಿದ್ದರು. ಅನೇಕ ವಿದೇಶಿ ನಾಯಕರು ಪ್ರಧಾನಿಯನ್ನು ಭೇಟಿ ಮಾಡದಿದ್ದರೂ ಅವರನ್ನು ಭೇಟಿಯಾಗುತ್ತಿದ್ದರು. ರಾಹುಲ್ ಗಾಂಧಿಯವರ ರಾಜವರ್ತನೆ ಇನ್ನೂ ಉಳಿದಿದೆ. ಇದು ನಿರಾಶೆಗೊಂಡ ಹೇಳಿಕೆಗಳ ರೂಪದಲ್ಲಿ ಹೊರಬರುತ್ತದೆ ಎಂದು ಟೀಕಿಸಿದೆ.
ಅಂತಹ ಯಾವುದೇ ಶಿಷ್ಟಾಚಾರವಿಲ್ಲದಿದ್ದರೂ ವಿದೇಶಿ ನಾಯಕರು ತಮನ್ನು ಭೇಟಿಯಾಗದಿರುವ ಬಗ್ಗೆ ಅವರು ಕೋಪಗೊಂಡಿದ್ದಾರೆ. ಆದರೆ ವಿರೋಧ ಪಕ್ಷದ ನಾಯಕರಾಗಿರುವಾಗ, ಅವರು ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಮಾನದಂಡಗಳನ್ನು ಎಷ್ಟು ಬಾರಿ ಅವಮಾನಿಸಿದ್ದಾರೆಂದು ಅವರು ಇಂದಿಗೂ ಅರಿತುಕೊಂಡಿಲ್ಲ. ಅವರು ಯಾವಾಗಲೂ ಸಾಂದರ್ಭಿಕವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದೆ.
ವಿದೇಶಕ್ಕೆ ಹೋದಾಗ, ಅವರು ಯಾರಿಗಾದರೂ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆಯೇ? ರಾಹುಲ್ ಗಾಂಧಿ ರಾಜಕೀಯ ಮತ್ತು ಸಾಂವಿಧಾನಿಕ ಜವಾಬ್ದಾರಿಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ನ್ಯಾಯಮೂರ್ತಿ ಸೂರ್ಯಕಾಂತ್ ಭಾರತದ 53ನೇ ಮುಖ್ಯ ನ್ಯಾಯಮೂರ್ತಿಯಾದರು. ಇದು ಒಂದು ಪ್ರಮುಖ ಸಾಂವಿಧಾನಿಕ ಸಂದರ್ಭವಾಗಿತ್ತು. ರಾಷ್ಟ್ರಪತಿ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಮಾಜಿ ಉಪಾಧ್ಯಕ್ಷ ಜಗದೀಪ್ ಧನ್ಕರ್, ಮಾಜಿ ಸಿಜೆಐ ಬಿ.ಆರ್.ಗವಾಯಿ ಮತ್ತು ಅನೇಕ ಪ್ರಮುಖ ಗಣ್ಯರು ಉಪಸ್ಥಿತರಿದ್ದರು. ಇದಕ್ಕೂ ಮೊದಲು, ಪ್ರಜಾಪ್ರಭುತ್ವದ ಅತಿದೊಡ್ಡ ಆಚರಣೆಯಾದ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಗೈರುಹಾಜರಾಗಿದ್ದರು. ಉಪಾಧ್ಯಕ್ಷ ಸಿ.ಪಿ.ರಾಧಾಕೃಷ್ಣನ್ ಅವರ ಪ್ರಮಾಣವಚನ ಸಮಾರಂಭದಲ್ಲೂ ರಾಹುಲ್ ಕಾಣೆಯಾಗಿದ್ದರು, ಇದು ಸಾಂವಿಧಾನಿಕ ಕಾರ್ಯಕ್ರಮವೂ ಆಗಿದೆ.
ಚುನಾವಣಾ ರ್ಯಾಲಿಗಳಲ್ಲಿ, ರಾಹುಲ್ ಗಾಂಧಿ ಸಂವಿಧಾನದ ಕೆಂಪು ಪ್ರತಿಯನ್ನು ಹಿಡಿದು ಸಂವಿಧಾನ ಅಪಾಯದಲ್ಲಿದೆ ಎಂದು ಕೂಗುತ್ತಲೇ ಇರುತ್ತಾರೆ. ಆದರೆ ನಿಜ ಜೀವನದಲ್ಲಿ ಸಂವಿಧಾನವನ್ನು ಗೌರವಿಸುವ ವಿಷಯಕ್ಕೆ ಬಂದಾಗ, ಅವರು ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ. ತಾವು ಬಯಸಿದ ರೀತಿಯಲ್ಲಿ ನಡೆದರೆ ಅದು ಸರಿ, ಇಲ್ಲದಿದ್ದರೆ ಎಲ್ಲವೂ ತಪ್ಪೇ ಎಂದು ನಂಬುತ್ತಾರೆ. ಅವರ ಮನಸ್ಥಿತಿ ಇನ್ನೂ ರಾಜಮನೆತನದದು. ಆದರೆ ಭಾರತದಲ್ಲಿ ರಾಜಪ್ರಭುತ್ವ ಬಹಳ ಹಿಂದೆಯೇ ಕೊನೆಗೊಂಡಿತು ಎಂದು ಅವರಿಗೆ ತಿಳಿದಿಲ್ಲ ಎಂದು ಅಪಹಾಸ್ಯ ಮಾಡಿದೆ.
10 ಜನಪಥ್ನಲ್ಲಿ ಉಳಿದಿದ್ದನ್ನು 2014ರಲ್ಲಿ ಮೋದಿ ಮುಗಿಸಿದರು. ವಿದೇಶಿ ನಾಯಕರೊಬ್ಬರು ತಮನ್ನು ಭೇಟಿ ಮಾಡುವ ಅಗತ್ಯವಿಲ್ಲ ಎಂದು ಭಾವಿಸಿದರೆ, ಅದರಲ್ಲಿ ಸರ್ಕಾರದ ಪಾತ್ರವಿಲ್ಲ ಎಂದು ರಾಹುಲ್ ಗಾಂಧಿ ಅರ್ಥಮಾಡಿಕೊಳ್ಳಬೇಕು. ಇಂತಹ ಬಾಲಿಶ ಹೇಳಿಕೆಗಳನ್ನು ನೀಡುವ ಮೂಲಕ, ಅವರು ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂರ್ಖರನ್ನಾಗಿ ಮಾಡುತ್ತಾರೆ. ಏಕೆಂದರೆ ದುರದೃಷ್ಟವಶಾತ್ ಅವರು ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಹೊಂದಿದ್ದಾರೆ ಮತ್ತು ಅಂತಹ ಜವಾಬ್ದಾರಿಯುತ ಸ್ಥಾನದಿಂದ ಬರುವ ಹೇಳಿಕೆಗಳು ದೇಶದ ಪ್ರತಿಷ್ಠೆಯ ಮೇಲೆ ಪರಿಣಾಮ ಬೀರಬಹುದು ಎಂದು ಬಿಜೆಪಿ ಹೇಳಿದೆ.
