ಬೆಂಗಳೂರು, ಮಾ.21- ವಿಧಾನಸಭೆಯಲ್ಲಿನ ಗದ್ದಲ ಹಾಗೂ ಗೊಂದಲದಿಂದಾಗಿ ಎಲ್ಲಾ ಶಾಸಕರು ಬಾಕಿ ಉಳಿದ ಕಲಾಪಗಳಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ತುರ್ತು ವಿಪ್ ಜಾರಿ ಮಾಡಲಾಗಿದೆ.
ಶಾಸಕಾಂಗ ಪಕ್ಷದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೂಚನೆ ಮೇರೆಗೆ ಸರ್ಕಾರದ ಮುಖ್ಯ ಸಚೇತಕ ಪಿ.ಎಂ.ಅಶೋಕ್ ತುರ್ತು ವಿಪ್ನ್ನು ಜಾರಿಗೊಳಿಸಿದ್ದು, ಕರ್ನಾಟಕ ವಿಧಾನಸಭೆಯಲ್ಲಿ ವಿವಿಧ ವಿಧೇಯಕಗಳು ಇನ್ನು ಅಂಗೀಕಾರವಾಗಬೇಕಿದೆ. ಹೀಗಾಗಿ ಮಾ.21ರ ಮಧ್ಯಾಹ್ನ 3 ಗಂಟೆಗೆ ಎಲ್ಲಾ ಶಾಸಕರು ಕಡ್ಡಾಯವಾಗಿ ಕಲಾಪಕ್ಕೆ ಹಾಜರಾಗಿರಬೇಕು ಎಂದು ಸೂಚಿಸಿದ್ದಾರೆ.
ಇದಕ್ಕೂ ಮುನ್ನ ವಿಧಾನಸಭೆಯಲ್ಲಿ ನಡೆದ ಕಲಾಪದಲ್ಲಿ ಬಿಜೆಪಿ ಜೆಡಿಎಸ್ ಶಾಸಕರು ಧರಣಿ ನಡೆಸಿದರು. ಹನಿಟ್ರಾಪ್ ಪ್ರಕರಣವನ್ನು ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದರು. ಜೊತೆಗೆ ಬಜೆಟ್ ನಲ್ಲಿ ಮುಸ್ಲಿಮರಿಗೆ ಗುತ್ತಿಗೆ ಕಾಮಗಾರಿಗಳಲ್ಲಿ ಶೇ.4ರಷ್ಟು ಮೀಸಲಾತಿ ನೀಡಿರುವುದನ್ನು ವಿರೋಧಿಸಿ ಬಿಜೆಪಿ ಶಾಸಕರು ಭಾರೀ ಗದ್ದಲ ಕೋಲಾಹಲ ಎಬ್ಬಿಸಿದರು.
ಇದು ಒಂದು ಹಂತಕ್ಕೆ ಕಾವೇರಿದ ವಾತಾವರಣ ನಿರ್ಮಿಸಿ ಪರಸ್ಪರ ಕೈ ಕೈ ಮಿಲಾಯಿಸುವ ಮಟ್ಟಕ್ಕೆ ತಲುಪಿತು. ಪ್ರತಿಪಕ್ಷಗಳ ಶಾಸಕರು, ಆಡಳಿತ ಪಕ್ಷಗಳ ಸಚಿವರ ಜೊತೆ ಮಾತಿನ ಚಕಮಕಿ ನಡೆಯಿತು. ಇದರ ನಡುವೆಯೇ ಹಣಕಾಸು ಮಸೂದೆ ಹಾಗೂ ಇತರೆ ವಿಧೇಯಕಗಳನ್ನು ಸಭಾಧ್ಯಕ್ಷ ಯು.ಟಿ.ಖಾದರ್ ಧ್ವನಿಮತದ ಮೂಲಕ ಅಂಗೀಕರಿಸಿದರು.
ಪರಿಸ್ಥಿತಿ ತಿಳಿಗೊಳ್ಳಿಸದ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಕಾಂಗ್ರೆಸ್ನಿಂದ ವಿಪ್ ಜಾರಿ ಮಾಡಲಾಗಿದೆ. ಶಾಸಕರ ಸಂಖ್ಯಾ ಬಲವನ್ನು ಬಳಸಿಕೊಂಡು ಎಲ್ಲಾ ವಿಧೇಯಕಗಳ ಅಂಗೀಕಾರ ಪಡೆದುಕೊಳ್ಳಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ.