ಬಾರಾಮುಲ್ಲಾ ಜಿಲ್ಲೆಯೆಲ್ಲಿ ಎನ್ಕೌಂಟರ್ : ಉಗ್ರ ಹತ, ವಿಶೇಷ ಪೊಲೀಸ್ ಆಧಿಕಾರಿ ಹುತಾತ್ಮ
ಶ್ರೀನಗರ, ಆ.21 (ಪಿಟಿಐ)- ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯೆಲ್ಲಿ ಇಂದು ಬೆಳಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರನೊಬ್ಬ ಹತನಾಗಿದ್ದು, ವಿಶೇಷ ಪೊಲೀಸ್ ಆಧಿಕಾರಿ(ಎಸ್ಪಿಒ) ಹುತಾತ್ಮರಾಗಿದ್ದಾರೆ.
ಭಯೋತ್ಪಾದಕರು ಅವಿತಿಟ್ಟುಕೊಂಡಿರುವ ಖಚಿತ ಸುಳಿವಿನ ಮೇರೆಗೆ ಪೊಲೀಸರು ಮತ್ತು ಭದ್ರತಾ ಪಡೆ ನಿನ್ನೆ ರಾತ್ರಿಯಿಂದಲೇ ಗ್ಯಾನಿ ಹಮಾಮ್ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ನಡೆಸುತ್ತಿತ್ತು. ಇಂದು ಮುಂಜಾನೆ ಮರೆಯಲ್ಲಿ ಅಡಗಿದ್ದ ಉಗ್ರಗಾಮಿಗಳು ಪೊಲೀಸರು ಮತ್ತು ಯೋಧರತ್ತ ಗುಂಡು ಹಾರಿಸಿದರು. ಭದ್ರತಾಪಡೆಗಳು ಪ್ರತಿಯಾಗಿ ದಾಳಿ ಹಾರಿಸಿದಾಗ ಕೆಲಕಾಲ ಎನ್ಕೌಂಟರ್ ನಡೆಯಿತು ಎಂದು ಪೊಲೀಸ್ ವಕ್ತಾರರೊಬ್ಬರು ತಿಳಿಸಿದ್ದಾರೆ.
ಗುಂಡಿನ ಕಾಳಗದ ವೇಳೆ ಎಸ್ಪಿಒ ಬಿಲಾಲ್ ಅಹಮದ್ ಮೃತಪಟ್ಟರು. ತೀವ್ರ ಗಾಯಗೊಂಡ ಸಬ್ ಇನ್ಸ್ಪೆಕ್ಟರ್ ಅಮರ್ದೀಪ್ ಪರಿಹಾರ್ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.