ಚೆನ್ನೈ, ಡಿ.29- ತಮಿಳುನಾಡಿನ ಖ್ಯಾತ ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ದಳಪತಿ ವಿಜಯ್ ಜಾರಿ ಬಿದ್ದಿದ್ದಾರೆ.ಅವರು ಮಲೇಷ್ಯಾದಲ್ಲಿ ತಮ್ಮ ನಟನೆಯ ಕೊನೆ ಚಿತ್ರ ಜನ ನಾಯಗನ್ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಾಪಸ್ಸಾಗುವಾಗ ಚೆನ್ನೈ ವಿಮಾನ ನಿಲ್ದಾಣದಲ್ಲಿ ಅವರನ್ನು ಸ್ವಾಗತಿಸಲು ಸಹಸ್ರಾರು ಅಭಿಮಾನಿಗಳು ಜಮಾಯಿಸಿದ್ದರು.
ಪೊಲೀಸರು ಅವರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ, ಈ ವೇಳೆ ವಿಜಯ್ ಜಾರಿ ಬಿದ್ದರು. ಇದರ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.ಭಾರೀ ಭದ್ರತೆಯ ನಡುವೆ ನಾಯಕ ವಿಜಯ್ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಾಗ, ಅಭಿಮಾನಿಗಳು ಇದ್ದಕ್ಕಿದ್ದಂತೆ ಅವರ ಕಡೆಗೆ ಧಾವಿಸಿದರು. ವಿಜಯ್ ತಮ್ಮ ಕಾರಿನ ಕಡೆಗೆ ಹೋಗುತ್ತಿದ್ದಾಗ, ಅಭಿಮಾನಿಗಳು ಅವರನ್ನು ಮುಂದಕ್ಕೆ ತಳ್ಳಿದಾಗ ಅವರು ಜಾರಿ ಬಿದ್ದರು.
ಭದ್ರತಾ ಸಿಬ್ಬಂದಿ ತಕ್ಷಣ ಅವರಿಗೆ ಸಹಾಯ ಮಾಡಲು ಧಾವಿಸಿದರು. ವಿಜಯ್ ಅವರನ್ನು ಮೇಲಕ್ಕೆತ್ತಿ ಸುರಕ್ಷಿತವಾಗಿ ಕಾರಿಗೆ ಹತ್ತಿಸಿದಾಗ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಡಿಸೆಂಬರ್ 27 ರಂದು ಕೌಲಾಲಂಪುರದಲ್ಲಿ ನಡೆದ ಜನನಾಯಗನ್ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ದಳಪತಿ ವಿಜಯ್ ಮಲೇಷ್ಯಾದಿಂದ ಹಿಂತಿರುಗಿದರು.
ಈ ಕಾರ್ಯಕ್ರಮವು ಲಕ್ಷಾಂತರ ಅಭಿಮಾನಿಗಳನ್ನು ಆಕರ್ಷಿಸಿತು. ಈ ಕಾರ್ಯಕ್ರಮದಲ್ಲಿ ವಿಜಯ್ ಸಿನಿಮಾದಿಂದ ಸಂಪೂರ್ಣವಾಗಿ ಹಿಂದೆ ಸರಿಯುವುದಾಗಿ ಘೋಷಿಸಿದರು. ಅವರು ಸಾರ್ವಜನಿಕ ಜೀವನ ಮತ್ತು ರಾಜಕೀಯಕ್ಕೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳುವುದಾಗಿ ಹೇಳಿದಾಗ ಅಭಿಮಾನಿಗಳು ಭಾವುಕರಾದರು.
ಸಿನಿಮಾ ರಂಗ ಪ್ರವೇಶಿಸಿದಾಗ ಒಂದು ಸಣ್ಣ ಮನೆಯನ್ನು ನಿರ್ಮಿಸಬೇಕೆಂದು ಬಯಸಿದ್ದೆ. ಆದರೆ ಅಭಿಮಾನಿಗಳು ನನಗೆ ಅರಮನೆಯನ್ನು ನಿರ್ಮಿಸಿದರು. ನನ್ನ ಅಭಿಮಾನಿಗಳು ಕೋಟೆಯನ್ನು ನಿರ್ಮಿಸಲು ಸಹಾಯ ಮಾಡಿದರು. ಅದಕ್ಕಾಗಿಯೇ ಅವರ ಪರವಾಗಿ ನಿಲ್ಲಲು ನಿರ್ಧರಿಸಿದೆ ಎಂದು ಹೇಳಿದರು.
ವಿಜಯ್ಗೆ ಆದ ಘಟನೆ ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ. ಸೆಲೆಬ್ರಿಟಿಗಳ ಸುರಕ್ಷತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ನಟಿಯರಾದ ನಿಧಿ ಅಗರ್ವಾಲ್ ಮತ್ತು ಸಮಂತಾ ಇತ್ತೀಚೆಗೆ ಇದೇ ರೀತಿಯ ಅನುಭವಗಳನ್ನು ಎದುರಿಸಿದ್ದರು.
