Monday, October 27, 2025
Homeರಾಜ್ಯಧರ್ಮಸ್ಥಳ ಪ್ರಕರಣ ಷಡ್ಯಂತ್ರದ ರೂವಾರಿಗಳಿಗೆ ಬಂಧನದ ಭೀತಿ

ಧರ್ಮಸ್ಥಳ ಪ್ರಕರಣ ಷಡ್ಯಂತ್ರದ ರೂವಾರಿಗಳಿಗೆ ಬಂಧನದ ಭೀತಿ

Dharmasthala case

ಬೆಂಗಳೂರು,ಅ.27- ಕರ್ನಾಟಕ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರೀ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದ್ದ ಧರ್ಮಸ್ಥಳ ಕೊಲೆ, ಅತ್ಯಾಚಾರ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ (ಎಸ್‌‍ಐಟಿ) ಷಡ್ಯಂತ್ರ ರೂಪಿಸಿದವರಿಗೆ ಬಲೆ ಬೀಸಿದೆ.

ಎಲ್ಲಾ ಆಯಾಮಗಳಲ್ಲೂ ಎಸ್‌‍ಐಟಿ ತನಿಖೆ ನಡೆಸಿದ್ದು, ಧರ್ಮಸ್ಥಳದಲ್ಲಿ ಸಾಮೂಹಿಕ ಅತ್ಯಾಚಾರ, ಕೊಲೆ ಮತ್ತು ಶವ ಹೂತಿಟ್ಟ ಪ್ರಕರಣಕ್ಕೆ ಸೂಕ್ತವಾದ ಸಾಕ್ಷ್ಯಾಧಾರಗಳು ಲಭ್ಯವಿಲ್ಲ ಎಂಬ ಅಂತಿಮ ನಿರ್ಧಾರಕ್ಕೆ ಬಂದಿದೆ. ಈಗ ಎಸ್‌‍ಐಟಿ ಈ ಪ್ರಕರಣವನ್ನು ಮುನ್ನಲೆಗೆ ತಂದ ಷಡ್ಯಂತ್ರದ ರೂವಾರಿಗಳನ್ನು ಹೆಡೆಮುರಿ ಕಟ್ಟಲು ಸಜ್ಜಾಗಿದ್ದು,ಕೆಲವರಿಗೆ ಬಂಧನದ ಭೀತಿ ಕಾಡುತ್ತಿದೆ.

- Advertisement -

ಹಲವಾರು ವರ್ಷಗಳಿಂದ ನಾನು ಶವವನ್ನು ಹೂತಿಟ್ಟಿದ್ದೇನೆ ಎಂದು ಹೇಳಿ ಜೈಲುಪಾಲಾಗಿರುವ ಚಿನ್ನಯ್ಯ ಪ್ರಕರಣದ ಹಿಂದಿನ ರೂವಾರಿಗಳಾದ ಮಹೇಶ್‌ ಶೆಟ್ಟಿ ತಿಮರೋಡಿ, ಗಿರೀಶ್‌ ಮಟ್ಟಣ್ಣನವರ್‌, ಜಯಂತ್‌.ಟಿ ಹಾಗೂ ವಿಠಲಗೌಡರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌‍ ನೀಡಿದೆ. ಒಂದು ವೇಳೆ ಗೈರುಹಾಜರಾದರೆ ಬಂಧಿಸುವ ಎಚ್ಚರಿಕೆಯನ್ನು ಸಹ ಕೊಡಲಾಗಿದೆ.

ಇವರು ಮಾತ್ರವಲ್ಲದೆ ಪ್ರಕರಣದ ಹಿಂದೆ ಇನ್ನು ಕೆಲವು ಕಾಣದ ಕೈಗಳಿರುವುದರಿಂದ ತೆರೆಮರೆಯಲ್ಲಿ ಕುಳಿತು ಶ್ರೀಕ್ಷೇತ್ರ ಧರ್ಮಸ್ಥಳದ ಕೀರ್ತಿಗೆ ಹಾಗೂ ಭಕ್ತರ ಭಾವನೆಗಳಿಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಷಡ್ಯಂತ್ರ ರೂಪಿಸಿದವರಿಗೆ ಬಲೆ ಬೀಸಿದೆ ಎಂದು ತಿಳಿದುಬಂದಿದೆ. ಶವ ಹೂತಿಟ್ಟಿದ್ದೇನೆ ಎಂದು ಹೇಳಿದ್ದ ಚಿನ್ನಯ್ಯನ ಮಾತು ನಂಬಿ ಎಸ್‌‍ಐಟಿ ಧರ್ಮಸ್ಥಳದ ಸುತ್ತಮುತ್ತ ಉತ್ಖನನ ನಡೆಸಿದರು. ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಸಾಕ್ಷ್ಯಾಧಾರಗಳು ಹಾಗೂ ಪುರಾವೆಗಳು ಸಿಗಲಿಲ್ಲ.

ಒಂದೆರಡು ಕಡೆ ಶವಗಳು ಪತ್ತೆಯಾದರೂ ಅವುಗಳು ಪುರುಷರ ಮೃತದೇಹಗಳಾಗಿದ್ದವು. ಅಲ್ಲದೆ ಅನ್ಯ ಕಾರಣಗಳಿಂದ ಆತಹತ್ಯೆ ಹಾಗೂ ಧರ್ಮಸ್ಥಳದಲ್ಲಿ ಸತ್ತರೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆಯಿಂದ ಸಾವನ್ನಪ್ಪಿದ ಪ್ರಕರಣಗಳಾಗಿದ್ದವು. ಆರೋಪಿಯು ಆರೋಪಿಸಿದಂತೆ ಉತ್ಖನನದ ವೇಳೆ ಸಿಕ್ಕ ಮೃತದೇಹಕ್ಕೂ ಪ್ರಕರಣಕ್ಕೂ ಒಂದಕ್ಕೊಂದು ಸಂಬಂಧವೇ ಇರಲಿಲ್ಲ. ಈಗ ಧರ್ಮಸ್ಥಳ ಹಾಗೂ ಅದರ ಆಡಳಿತ ಮಂಡಳಿಯನ್ನು ಗುರಿಯಾಗಿಟ್ಟುಕೊಂಡು ಸಂಚು ರೂಪಿಸಲಾಗಿದೆಯೇ ಎಂಬುದರತ್ತ ಎಸ್‌‍ಐಟಿ ತನಿಖೆ ನಡೆಸುತ್ತಿದೆ.

ಹದಿಹರೆಯದ ಯುವತಿಯರು, ಮಹಿಳೆಯರು ಸೇರಿದಂತೆ 100ಕ್ಕೂ ಹೆಚ್ಚು ಶವಗಳನ್ನು ನನ್ನಿಂದ ಹೂತು ಹಾಕಿಸಲಾಗಿತ್ತು ಎಂದು ಸುಳ್ಳು ಹೇಳಿಕೆ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ದೂರುದಾರ ಸಿ.ಎನ್‌.ಚಿನ್ನಯ್ಯ ನ್ಯಾಯಾಲಯದ ಮುಂದೆ ಸತ್ಯ ಒಪ್ಪಿಕೊಂಡದ್ದು ಯಾಕೆ? ಇಂತಹ ಗಂಭೀರ ಆರೋಪಗಳನ್ನು ಮಾಡಲು ಅವರನ್ನು ಪ್ರಚೋದಿಸಿದವರು ಯಾರು? ಎಂಬಿತ್ಯಾದಿ ಮಾಹಿತಿ ತಿಳಿಯಲು ಎಸ್‌‍ ಐಟಿ ಮುಂದಾಗಿದೆ.

1995ರಿಂದ 2014ರವರೆಗೆ ದೇವಸ್ಥಾನದಲ್ಲಿ ಮಾಜಿ ಸ್ವಚ್ಛತ ಕೆಲಸಗಾರನಾಗಿದ್ದ ಚಿನ್ನಯ್ಯ 2002 ಮತ್ತು 2014ರ ನಡುವೆ ದೇವಾಲಯದ ಆವರಣದಲ್ಲಿ 200ಕ್ಕೂ ಹೆಚ್ಚು ಅಪರಿಚಿತ ಶವಗಳನ್ನು ರಹಸ್ಯವಾಗಿ ಹೂತ್ತಿಟ್ಟಿರುವುದಾಗಿ ಆರೋಪಿಸಿ 2025 ಆಗಸ್ಟ್‌ನಲ್ಲಿ ದೂರು ದಾಖಲಿಸಿದ್ದರು.

ಅಪಘಾತಗಳು, ಕೊಲೆ ಮತ್ತು ಅನುಮಾಸ್ಪಾದವಾಗಿ ಮೃತಪಟ್ಟವರನ್ನು ಮರಣೋತ್ತರ ಪರೀಕ್ಷೆ ಇಲ್ಲದೆ ಅಥವಾ ಪೊಲೀಸರ ವರದಿಯಿಲ್ಲದೆ ಹೂತು ಹಾಕಲಾಗಿದೆ ಎಂದು ಹೇಳಿದ್ದರು. ಬಳಿಕ ನ್ಯಾಯಾಲಯದಲ್ಲಿ ಸ್ವಯಂಪ್ರೇರಿತ ಹೇಳಿಕೆ ನೀಡಿದ್ದ ಚಿನ್ನಯ್ಯ, ತಾನು ಈ ಹಿಂದೆ ನೀಡಿದ್ದ ಹೇಳಿಕೆ ಹಾಗೂ ಸಾಕ್ಷ್ಯಸುಳ್ಳಾಗಿದ್ದು, ಕೆಲವರ ಆಜ್ಞೆಯಿಂದ ಆ ರೀತಿ ಮಾಡಿರುವುದಾಗಿ ಹೇಳಿದ್ದರು.
18 ಕಡೆಗಳಲ್ಲಿ ಎಸ್‌‍ ಐಟಿ ಉತ್ಖನನ

ತಾನೂ ಹೂತಿಟ್ಟಿದ್ದ ಸ್ಥಳದಿಂದ ತರಲಾದ ತಲೆಬುರಡೆ ಎಂದು ಹೇಳಿ ದಕ್ಷಿಣಕನ್ನಡ ಪೊಲೀಸರಿಗೆ ನೀಡಿದ್ದ ಚಿನ್ನಯ್ಯ, ತದನಂತರ ತನ್ನ ಹೇಳಿಕೆ ಹಿಂಪಡೆದಿದ್ದರು. ಅಕ್ಟೋಬರ್‌ 2012ರಲ್ಲಿ ದಕ್ಷಿಣ ಕನ್ನಡದಲ್ಲಿ ಅತ್ಯಾಚಾರ ಮತ್ತು ಕೊಲೆಯಾದ ಸೌಜನ್ಯ ಅವರ ಚಿಕ್ಕಪ್ಪ ವಿಠ್ಠಲ ಗೌಡ ತಲೆಬುರುಡೆಯನ್ನು ತನಗೆ ನೀಡಿದ್ದರು ಎಂದು ಹೇಳಿದ್ದರು.

ಚಿನ್ನಯ್ಯ ಗುರುತಿಸಿದ ಸುಮಾರು 18 ಕಡೆಗಳಲ್ಲಿ ಎಸ್‌‍ಐಟಿ ಅಗೆದು ಪರಿಶೀಲಿಸಿದೆ. ಬಂಗ್ಲೆಗುಡ್ಡೆ ಸೇರಿದಂತೆ ಕೆಲವೆಡೆ ಮಾನವನ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ. ಅವುಗಳನ್ನು ಡಿಎನ್‌ಎ ವಿಶ್ಲೇಷಣೆ ಮತ್ತು ಫೋರೆನ್ಸಿಕ್‌ ಪರೀಕ್ಷೆಗೆ ಕಳುಹಿಸಲಾಗಿದೆ.

ಉಲ್ಟಾ ಹೊಡೆದ ಸುಜಾತ್‌ ಭಟ್‌
ಈ ಹಿಂದೆ 2003ರಲ್ಲಿ ಧರ್ಮಸ್ಥಳಕ್ಕೆ ತೆರಳಿದ್ದ ಮಗಳು ಅನನ್ಯಾ ನಾಪತ್ತೆಯಾಗಿದ್ದಳು ಎಂದು ದೂರಿದ್ದ ಮತ್ತೋರ್ವ ದೂರುದಾರ ಮಹಿಳೆ ಸುಜಾತಾ ಭಟ್‌ ನಂತರ ಹೇಳಿಕೆ ಹಿಂಪಡೆದು ತನಗೆ ಹೆಣ್ಣು ಮಕ್ಕಳೇ ಇಲ್ಲ, ಮಟ್ಟಣ್ಣನವರ್‌, ಜಯಂತ್‌ ಹಾಗೂ ಇತರರ ಪ್ರಚೋದನೆಯಿಂದ ಸುಳ್ಳು ಹೇಳಿಕೆ ನೀಡಿರುವುದಾಗಿ ಹೇಳಿದ್ದರು.

2012ರ ಅಕ್ಟೋಬರ್‌ನಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಉಜಿರೆಯಲ್ಲಿ ನಡೆದ 17 ವರ್ಷದ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಇನ್ನೂ ನ್ಯಾಯ ಸಿಕ್ಕದ ಹಿನ್ನೆಲೆಯಲ್ಲಿ ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ ಜುಲೈನಲ್ಲಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.

- Advertisement -
RELATED ARTICLES

Latest News