ಬೆಂಗಳೂರು,ಅ.24– ಮೈಸೂರಿನ ಹೊರವಲಯದ ಫಾರ್ಮ್ಹೌಸ್ನಲ್ಲಿ ಬೆಳಕಿಗೆ ಬಂದ ಹೆಣ್ಣು ಭ್ರೂಣ ಪತ್ತೆ -ಹತ್ಯೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನರ್ಸ್ ಸೇರಿ ನಾಲ್ವರನ್ನು ಬಂಧಿಸಿರುವ ವರುಣಾ ಠಾಣೆ ಪೊಲೀಸರು ತಲೆಮರೆಸಿಕೊಂಡಿರುವವರಿಗಾಗಿ ಶೋಧ ಮುಂದುವರೆದಿದೆ.
ಬನ್ನೂರಿನ ಎಸ್ಕೆ ಆಸ್ಪತ್ರೆ ನರ್ಸ್ ಆಗಿರುವ ಶ್ಯಾಮಲಾ ಎಂಬುವವರಿಗೆ ಸೇರಿದ ಈ ಫಾರ್ಮ್ಹೌಸ್ ಮಂಡ್ಯ ತಾಲ್ಲೂಕು ಹಾಡ್ಯ-ಹುಳ್ಳೇನಹಳ್ಳಿ ನಡುವೆ ಇದ್ದು, ಎರಡು ತಿಂಗಳ ಹಿಂದೆಯಷ್ಟೆ ಗೃಹಪ್ರವೇಶವಾಗಿದೆ.
ಈ ಫಾರ್ಮ್ಹೌಸ್ನಲ್ಲಿ ಹೆಣ್ಣು ಭ್ರೂಣ ಲಿಂಗ ಪತ್ತೆ ದಂಧೆ ನಡೆಯುತ್ತಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಮೈಸೂರಿನ ಡಿಹೆಚ್ಓ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಮೊನ್ನೆ ಈ ಫಾರ್ಮ್ಹೌಸ್ ಮೇಲೆ ದಾಳಿ ಮಾಡಿ ನಾಲ್ವರನ್ನು ಬಂಧಿಸಲಾಗಿದ್ದು, ಕೆಲವು ಉಪಕರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಎಷ್ಟು ದಿನಗಳಿಂದ ಈ ದಂಧೆ ನಡೆಯುತ್ತಿದೆ, ಎಷ್ಟು ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆಯಾಗಿದೆ ಎಂಬುವುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮೈಸೂರು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.
ಈ ಸಂಜೆಯೊಂದಿಗೆ ಮಾತನಾಡಿದ ಅವರು, ಈ ದಂಧೆಯಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವವರ ಪತ್ತೆ ಕಾರ್ಯ ಮುಂದುವರೆದಿದೆ.
ಇಬ್ಬರು ಪ್ರಮುಖ ಆರೋಪಿಗಳು ಸಿಕ್ಕಿದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಅವರು ವಿವರಿಸಿದರು. ವರುಣ ಪೊಲೀಸ್ಠಾಣೆಯಲ್ಲಿ ಈಗಾಗಲೇ 7 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ನಾಲ್ವರನ್ನು ಬಂಧಿಸಲಾಗಿದೆ. ಉಳಿದ ಮೂವರಿಗಾಗಿ ಶೋಧ ಮುಂದುವರೆದಿದೆ ಎಂದು ಅವರು ಹೇಳಿದರು.ಹೆಣ್ಣು ಭ್ರೂಣ ಪತ್ತೆ-ಹತ್ಯೆಯ ಪ್ರಮುಖ ಆರೋಪಿಗಳಿಗಾಗಿ ವರುಣಾ ಠಾಣೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
