ಬೆಂಗಳೂರು, ಜೂ.9- ಪಬ್ಗೆ ಹೋಗಿ ಹಿಂದಿರುಗುತ್ತಿದ್ದ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದು ಕೈ ಕೈ ಮಿಲಾಯಿಸಿಕೊಂಡು ಹಲ್ಲೆ ನಡೆಸಿದ್ದರಿಂದ ಒಬ್ಬನ ಸ್ಥಿತಿ ಗಂಭೀರವಾಗಿರುವ ಘಟನೆ ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ. ಜ್ಯೋತಿನಿವಾಸ್ ಕಾಲೇಜು ಬಳಿ ಇರುವ ಪಬ್ವೊಂದಕ್ಕೆ ಎರಡು ಯುವಕರ ಗುಂಪು ಹೋಗಿದ್ದು, ಇಂದು ಬೆಳಗಿನ ಜಾವ 12.30 ರ ಸುಮಾರಿನಲ್ಲಿ ಪಬ್ನಿಂದ ಹೊರಗೆ ಬಂದಿವೆ.
ಆ ಸಂದರ್ಭದಲ್ಲಿ ಒಂದು ಗುಂಪಿನಲ್ಲಿದ್ದ ವರು ಮತ್ತೊಂದು ಗುಂಪಿನಲ್ಲಿದ್ದ ಯುವತಿಯನ್ನು ಮಾತನಾಡಿಸಿದರೆಂಬ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಗಲಾಟೆಯಾಗಿದೆ.ಆ ವೇಳೆ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಅಲ್ಲದೇ ಕಲ್ಲು ತೂರಾಟ ನಡೆಸಿದ್ದರಿಂದ ಇಬ್ಬರು ಯುವಕರಿಗೆ ಗಾಯವಾಗಿದ್ದು, ಆ ಪೈಕಿ ಒಬ್ಬನ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಹೊಡೆದಾಟದ ದೃಶ್ಯ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿವೆ.ಸುದ್ದಿ ತಿಳಿದು ಕೋರಮಂಗಲ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಮುಂದುವರೆಸಿದ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ ಅದರಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನು ಆಧರಿಸಿ ಮೂವರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.