Sunday, September 8, 2024
Homeರಾಜ್ಯಗ್ರೇಟರ್ ಬೆಂಗಳೂರು ಚರ್ಚೆಗೆ ಸದನ ಸಮಿತಿ ರಚನೆ : ಡಿಸಿಎಂ ಡಿಕೆಶಿ

ಗ್ರೇಟರ್ ಬೆಂಗಳೂರು ಚರ್ಚೆಗೆ ಸದನ ಸಮಿತಿ ರಚನೆ : ಡಿಸಿಎಂ ಡಿಕೆಶಿ

ಬೆಂಗಳೂರು,ಜು.25- ಬೆಂಗಳೂರಿಗೆ ಹೊಸ ರೂಪ ನೀಡುವ 2024 ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕದ ಬಗ್ಗೆ ಸಮಗ್ರವಾಗಿ ಚರ್ಚಿಸಲು ಸದನ ಸಮಿತಿ ರಚನೆ ಮಾಡುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ವಿಧಾನಸಭೆಗೆ ತಿಳಿಸಿದರು.

ಶಾಸನ ರಚನಾ ಕಲಾಪದಲ್ಲಿ ವಿಧೇಯಕವನ್ನು ಪರ್ಯಾಲೋಚನೆಗಾಗಿ ಮಂಡಿಸಿದ ಉಪಮುಖ್ಯಮಂತ್ರಿ ಬೆಂಗಳೂರಿಗೆ ಹೊಸ ರೂಪ ನೀಡುವ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಇದಾಗಿದೆ. ಬೆಂಗಳೂರಿನ ಜನಸಂಖ್ಯೆ 1 ಕೋಟಿ 40 ಲಕ್ಷದಷ್ಟಿದೆ. ದೊಡ್ಡ ಸಮಸ್ಯೆಗಳಿವೆ. ಆಡಳಿತದಲ್ಲಿ ಸುಧಾರಣೆ ತರಬೇಕು. ನಾಗರಿಕರಿಗೆ ಹೆಚ್ಚು ಸೌಲಭ್ಯ ಕಲ್ಪಿಸಬೇಕು.

ಆಡಳಿತ ನಿಯಂತ್ರಣ ನೀಡಬೇಕು, ಆರ್ಥಿಕ ಶಕ್ತಿ ತುಂಬಬೇಕು. ಇದು ಮಹತ್ವದ ವಿಧೇಯಕವಾಗಿದ್ದು, ಒಪ್ಪಿಗೆ ನೀಡಬೇಕೆಂದು ಕೋರಿದರು.ಈ ಸಂದರ್ಭದಲ್ಲಿ ಮಾತನಾಡಿದ ವಿರೋಧಪಕ್ಷದ ನಾಯಕ ಆರ್.ಅಶೋಕ್, ವಿಧೇಯಕವನ್ನು ಬಾಕಿ ಉಳಿಸಬೇಕು. ಇದರ ಬಗ್ಗೆ ಸಮಗ್ರ ಚರ್ಚೆಯಾಗಬೇಕಾಗಿದ್ದು, ವಿಧಾನಸಭೆ ಮತ್ತು ವಿಧಾನಪರಿಷತ್ನ ಸದಸ್ಯರನ್ನೊಳಗೊಂಡ ಸದನ ಸಮಿತಿ ರಚಿಸಬೇಕೆಂದು ಸಲಹೆ ಮಾಡಿದರು.

ಇದಕ್ಕೆ ಪೂರಕವಾಗಿ ಮಾತನಾಡಿದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್, ಇದೊಂದು ಐತಿಹಾಸಿಕವಾದ ವಿಧೇಯಕ. ಈ ವಿಧೇಯಕದ ಬಗ್ಗೆ ಸಮಗ್ರ ಚರ್ಚೆಯಾಗಬೇಕು. ಬೆಂಗಳೂರು ಪ್ರತಿನಿಧಿಸುವ ವಿಧಾನಸಭೆ, ವಿಧಾನಪರಿಷತ್ ಸದಸ್ಯರನ್ನೊಳಗೊಂಡ ಸದನ ಸಮಿತಿ ರಚನೆ ಮಾಡಬೇಕು ಎಂದು ಒತ್ತಾಯಿಸಿದರು.

ಮತ್ತೆ ಮಾತನಾಡಿದ ಉಪಮುಖ್ಯಮಂತ್ರಿ, ವಿಧೇಯಕದ ಬಗ್ಗೆ ವಿಸ್ತೃತವಾದ ಚರ್ಚೆಯಾಗಬೇಕೆಂಬ ಆಲೋಚನೆಯಿದೆ. ಬೆಂಗಳೂರಿನ ಶಾಸಕರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ಕೃಷ್ಣಭೈರೇಗೌಡ ಸೇರಿದಂತೆ ಹಲವರು ಸಾಕಷ್ಟು ಚರ್ಚೆಯಾಗಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ವ್ಯಾಪಕವಾದ ಚರ್ಚೆಯಾಗಲಿ. ನಾವು ಹರಿಬರಿ ಮಾಡುವುದಿಲ್ಲ. ಹೀಗಾಗಿ ಸದನ ಸಮಿತಿ ರಚನೆ ಮಾಡಲು ಒಪ್ಪಿಗೆ ಇದೆ ಎಂದು ಹೇಳಿದರು.ಆಗ ಸಭಾಧ್ಯಕ್ಷ ಯು.ಟಿ.ಖಾದರ್ರವರು ಈ ವಿಧೇಯಕವನ್ನು ಬಾಕಿ ಉಳಿಸಿಕೊಳ್ಳೋಣ ಎಂದು ಹೇಳಿ ಮುಂದಿನ ಕಲಾಪವನ್ನು ಕೈಗೆತ್ತಿಕೊಂಡರು.

RELATED ARTICLES

Latest News