ಬೆಂಗಳೂರು,ಸೆ.5- ನಗರದ ಹೊರವಲಯದ ಜ್ಯೂವೆಲ್ಲರಿ ಶಾಪ್ಗೆ ನುಗ್ಗಿ ಮಾಲೀಕನಿಗೆ ಆಟಿಕೆ ಪಿಸ್ತೂಲಿನಿಂದ ಬೆದರಿಸಿ 90 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ನಾಲ್ವರ ದರೋಡೆಕೋರರನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಹಾಗೂ ನಗರದ ನಾಲ್ವರು ದರೋಡೆಕೋರ ಬಂಧನದಿಂದ 40ಕ್ಕೂ ಹೆಚ್ಚು ದರೋಡೆ ಪ್ರಕರಣಗಳು ಬೆಳಕಿಗೆ ಬಂದಿವೆ.ಈ ದರೋಡೆಕೋರರ ಗ್ಯಾಂಗ್ ಬೆಂಗಳೂರುನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ದರೋಡೆ ಹಾಗೂ ಕಳ್ಳತನ ಮಾಡಿರುವುದು ಪೊಲೀಸರ ವಿಚಾರಣೆಯಿಂದ ಬೆಳಕಿಗೆ ಬಂದಿದೆ.
ಕಳೆದ ಜುಲೈ 21 ರಂದು ಮಾಗಡಿ ರಸ್ತೆಯ ಮಾಚೋಹಳ್ಳಿ ಜ್ಯೂವೆಲ್ಲರಿ ಶಾಪ್ಗೆ ಈ ದರೋಡೆಕೋರರ ತಂಡ ನುಗ್ಗಿ ಮಾಲೀಕನಿಗೆ ಆಟಿಕೆ ಗನ್ ತೋರಿಸಿ ಬೆದರಿಸಿ ಆಭರಣಗಳನ್ನು ದೋಚಿ ಪರಾರಿಯಾಗಿತ್ತು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಚುರುಕುಗೊಳಿಸಿದ ಪೊಲೀಸರು ಬೇರೆ ಬೇರೆ ರಾಜ್ಯಗಳಿಗೂ ಮಾಹಿತಿ ರವಾನಿಸಿ ಆರೋಪಿಗಳಿಗಾಗಿ ಹುಡುಕಾಡುತ್ತಿದ್ದರು. ಇದೀಗ ನಾಲ್ವರನ್ನು ಬಂಧಿಸಿದ್ದು, ಉಳಿದವರಿಗಾಗಿ ಶೋಧ ಮುಂದುವರೆಸಿದ್ದಾರೆ.