ಚಿಕ್ಕಮಗಳೂರು,ಡಿ.29- ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಕಾಫಿನಾಡಿನ ರೆಸಾರ್ಟ್ಗಳು, ಹೋಟೆಲ್ಗಳು, ಹೋಂಸ್ಟೇಗಳಲ್ಲಿ ಬುಕ್ಕಿಂಗ್ ಭರಾಟೆ ಜೋರಾಗಿ ನಡೆಯುತ್ತಿದೆ. ಹೊಸ ವರ್ಷವನ್ನು ಬರಮಾಡಿಕೊಳ್ಳಲು ರಾಜ್ಯದ ಜನತೆ ಸಜ್ಜಾಗುತ್ತಿದ್ದು, ಅಗತ್ಯ ಸಿದ್ಧತೆಗಳನ್ನು ಕೂಡ ಮಾಡಿಕೊಳ್ಳುತ್ತಿದ್ದಾರೆ.
ಪ್ರಕೃತಿ ಸೌಂದರ್ಯದ ಮಡಿಲಲ್ಲಿ ಸಂಭ್ರಮಿಸಲು ಚಿಕ್ಕಮಗಳೂರಿಗೆ ಪ್ರವಾಸಿಗರು ಲಗ್ಗೆಯಿಡುತ್ತಿದ್ದು, ಕಳೆದ ಒಂದು ತಿಂಗಳಿನಿಂದಲೇ ಬುಕ್ಕಿಂಗ್ ಮಾಡಿಕೊಳ್ಳುತ್ತಿದ್ದಾರೆ.ಚಿಕ್ಕಮಗಳೂರು ನಗರದ ಸುತ್ತಮುತ್ತಲಿರುವ ಹೋಟೆಲ್ಗಳು, ಲಾಡ್ಜ್ ಗಳು, ರೆಸಾರ್ಟ್ಗಳು, ಹೋಂಸ್ಟೇಗಳಲ್ಲಿ ಈಗಾಗಲೇ ಜನರು ನೋಂದಣಿ ಮಾಡಿಕೊಂಡಿದ್ದಾರೆ.
ಹೆಚ್ಚು ದುಡ್ಡು ಕೊಟ್ಟರೂ ಸಹ ರೂಂಗಳು ಸಿಗುತ್ತಿಲ್ಲ. ವರ್ಷಾಂತ್ಯದ ಕ್ರಿಸ್ಮಸ್ ರಜೆಯ ಹಿನ್ನೆಲೆಯಲ್ಲಿ ಈಗಾಗಲೇ ಕೆಲವರು ಚಿಕ್ಕಮಗಳೂರಿನಲ್ಲೇ ಬೀಡುಬಿಟ್ಟಿದ್ದಾರೆ. ವರ್ಷಾಚರಣೆ ಮುಗಿಸಿಕೊಂಡು ವಾಪಸ್ ಬೆಂಗಳೂರಿಗೆ ಬರುವ ಪ್ಲ್ಯಾನ್ ಕೂಡ ಮಾಡಿದ್ದು, ಹೋಟೆಲ್ಗಳಿಗೆ ಬೇಡಿಕೆ ಹೆಚ್ಚಾಗಿದೆ.
ಜಿಲ್ಲೆಯ ಪ್ರವಾಸಿತಾಣಗಳಾದ ಮುಳ್ಳಯ್ಯನಗಿರಿ, ಬಾಬಾಬುಡನ್ಗಿರಿ, ಕಲ್ಲತ್ತಗಿರಿ, ಕೆಮಣ್ಣುಗುಂಡಿ ಸೇರಿದಂತೆ ಮತ್ತಿತರ ಪ್ರವಾಸಿತಾಣಗಳಲ್ಲಿ ಈಗಾಗಲೇ ಪೊಲೀಸರು ನಿಬಂಧನೆಗಳನ್ನು ಜಾರಿ ಮಾಡಿದ್ದಾರೆ.
ಕೆಲವರು ಪ್ರವಾಣಿತಾಣಗಳಿಗೆ ಭೇಟಿ ನೀಡುತ್ತಿದ್ದರೆ, ಇನ್ನೂ ಕೆಲವರು ಶೃಂಗೇರಿ, ಹೊರನಾಡು, ಕಳಸ, ಬಾಳೆಹೊನ್ನೂರು, ದೇವೀರಮನಬೆಟ್ಟ ಸೇರಿದಂತೆ ಮತ್ತಿತರ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದು, ಮುಂಗಡವಾಗಿ ರೂಂಗಳನ್ನು ಬುಕ್ಕಿಂಗ್ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ 2026 ಅನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಜನರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
