Tuesday, December 16, 2025
Homeರಾಜ್ಯಪ್ರತ್ಯೇಕ ಶ್ರೀಗಂಧ ಮಂಡಳಿ ಸ್ಥಾಪನೆಗೆ ಲೋಕಸಭೆ ಅಧಿವೇಶನದಲ್ಲಿ ಡಾ.ಸಿ.ಎನ್. ಮಂಜುನಾಥ್ ಒತ್ತಾಯ

ಪ್ರತ್ಯೇಕ ಶ್ರೀಗಂಧ ಮಂಡಳಿ ಸ್ಥಾಪನೆಗೆ ಲೋಕಸಭೆ ಅಧಿವೇಶನದಲ್ಲಿ ಡಾ.ಸಿ.ಎನ್. ಮಂಜುನಾಥ್ ಒತ್ತಾಯ

Dr. C.N. Manjunath demands for separate Sandalwood Board

ನವದೆಹಲಿ, ಡಿ.16- ಶ್ರೀಗಂಧ ಬೆಳೆಗಾರರ ಹಿತದೃಷ್ಟಿಯಿಂದ ಪ್ರತ್ಯೇಕ ಶ್ರೀಗಂಧ ಮಂಡಳಿ ಸ್ಥಾಪನೆಗೆ ಲೋಕಸಭೆ ಅಧಿವೇಶನದಲ್ಲಿ ಒತ್ತಾಯಿಸಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಾ.ಸಿ.ಎನ್. ಮಂಜುನಾಥ್ ಅವರು, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ‌ಪಿಯೂಷ್ ಗೋಯೆಲ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದಾರೆ.

ಕರ್ನಾಟಕವು ಶ್ರೀಗಂಧದ ನಾಡು ಎಂದೇ ಪ್ರಸಿದ್ಧಿ ನಡೆದಿದೆ. ಭಾರತದಲ್ಲಿ ಉತ್ಪಾದನೆಯಾಗುವ ಶ್ರೀಗಂಧದ ಪೈಕಿ ಸುಮಾರು ಶೇ.65 ರಷ್ಟು ಉತ್ಪಾದನೆ ಕರ್ನಾಟಕದಿಂದಲೇ ಆಗುತ್ತಿದ್ದು, ನಮ್ಮ ರಾಜ್ಯದ ಶ್ರೀಮಂತ ಪರಂಪರೆಯ ಪ್ರತೀಕವಾಗಿದೆ ಎಂದು ಅವರು ಅಧಿವೇಶನದಲ್ಲಿ ಶ್ರೀಗಂಧ ಬೆಳೆಗಾರರ ಪರವಾಗಿ ದನಿ ಎತ್ತಿದ್ದರು.

ಪ್ರಸ್ತುತ ಶ್ರೀಗಂಧ ಬೆಳೆ ನಿರ್ವಹಣೆ, ಕಠಾವು ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ಪ್ರತಿ ರಾಜ್ಯವೂ ತನ್ನದೇ ಆದ ನೀತಿ ನಿಯಮಗಳನ್ನು ಹೊಂದಿರುವುದರಿಂದ ಶ್ರೀಗಂಧ ಬೆಳೆಯುವ ರೈತರು ಅರಣ್ಯ ಇಲಾಖೆ ಹಾಗೂ ಗೃಹ ಇಲಾಖೆಯಿಂದ ಅನಗತ್ಯ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನೀತಿ ಆಯೋಗದ ಶಿಫಾರಸಿನಂತೆ ಕಾಫಿ ಮಂಡಳಿ ಮಾದರಿಯಲ್ಲಿ ರಾಷ್ಟ್ರ ಮಟ್ಟದ ಶ್ರೀಗಂಧ ಮಂಡಳಿ ಸ್ಥಾಪಿಸುವುದು ಅನಿವಾರ್ಯ ಎಂದು ಅವರು ಸದನಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಶ್ರೀಗಂಧ ಮಂಡಳಿ ಸ್ಥಾಪನೆಯಿಂದಾಗಿ ಶ್ರೀಗಂಧ ಬೆಳೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ರಾಷ್ಟ್ರ ಮಟ್ಟದಲ್ಲಿ ಏಕರೂಪದ ನಿಯಮಗಳು ಜಾರಿಗೆ ಬರಲಿದ್ದು, ಇದರಿಂದ ರೈತರಿಗೆ ಶ್ರೀಗಂಧ ಬೆಳೆಸಲು ಹೆಚ್ಚಿನ ಪ್ರೋತ್ಸಾಹ ಸಿಗಲಿದೆ. ಅಲ್ಲದೇ, ತಮ್ಮ ಉತ್ಪನ್ನವನ್ನು ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಮಾರಾಟ ಮಾಡುವ ಅವಕಾಶ, ಕಟ್ಟು ನಿಟ್ಟಾಗಿ ಕಳ್ಳತನ ತಡೆ ಕ್ರಮಗಳು, ಸಂಸ್ಥಾತ್ಮಕ ಸಾಲ ಸೌಲಭ್ಯ, ಶ್ರೀಗಂಧ ರಫ್ತು, ಆಮದು ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಸೇರಿದಂತೆ ಅನೇಕ ಸೌಲಭ್ಯಗಳು ರೈತರಿಗೆ ಲಭ್ಯವಾಗಲಿವ ಎಂದು ಅವರು ತಿಳಿಸಿದ್ದಾರೆ.

ಒಟ್ಟಾರೆ, ಶ್ರೀಗಂಧ ಮಂಡಳಿ ಸ್ಥಾಪನೆಯಿಂದ ಶ್ರೀಗಂಧ ಬೆಳೆಗಾರರಿಗೆ ಮಹತ್ತರ ಅನುಕೂಲವಾಗಲಿದ್ದು, ಅವರು ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗಲಿದೆ ಎಂದು ಅವರು ಸರ್ಕಾರದ ಗಮನ ಸೆಳೆದಿದ್ದಾರೆ.

RELATED ARTICLES

Latest News