ಬೆಂಗಳೂರು,ಡಿ.14- ಸಾರಿಗೆ ನಿಗಮಗಳ ಬಸ್ಗಳು ಮಾರ್ಗಮಧ್ಯೆ ಅಪಘಾತ ಹಾಗೂ ಕೆಟ್ಟು ನಿಂತ ಸಂದರ್ಭದಲ್ಲಿ ತುರ್ತಾಗಿ ನೆರವಾಗಲು ಸ್ಪಂದನ ವಾಹನಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಈ ವಾಹನಗಳು ಕೆಎಸ್ಆರ್ಟಿಸಿ ಬಸ್ಸುಗಳು ಮಾರ್ಗಮಧ್ಯೆ ಅಪಘಾತ ಹಾಗೂ ಕೆಟ್ಟು ನಿಂತ ಸಂದರ್ಭದಲ್ಲಿ ವಾಹನವನ್ನು ಶೀಘ್ರವಾಗಿ ರಿಪೇರಿಗೊಳಿಸುವ ಸಲುವಾಗಿ ಮೊಬೈಲ್ ವರ್ಕ್ಶಾಪ್ ಮಾದರಿಯಲ್ಲಿ ಸೇರ್ಪಡೆಗೊಳಿಸಲು ಉದ್ದೇಶಿಸಲಾಗಿದೆ ಎಂದರು.
ಈ ವಾಹನಗಳನ್ನು ಬೆಂಗಳೂರು ಹಾಗೂ ಮೈಸೂರು ಕೇಂದ್ರ ಸ್ಥಳಗಳಲ್ಲಿ ನಿಯೋಜಿಸಲಾಗುತ್ತಿದ್ದು, ಇದರಿಂದ ಬೆಂಗಳೂರು ಸುತ್ತಮುತ್ತ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ಪ್ರದೇಶದಲ್ಲಿ ಉಂಟಾಗುವ ಅಪಘಾತ/ಅವಘಢಗಳನ್ನು ಶೀಘ್ರದಲ್ಲಿ ಸ್ಪಂದಿಸಲು ಅನುಕೂಲವಾಗುತ್ತದೆ ಎಂದರು.
ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ರಾಜ್ಯದ ಹಾಗೂ ಅಂತರರಾಜ್ಯದ ಭಾಗಗಳಿಗೆ ವಿವಿಧ ಮಾದರಿಯ ಬಸ್ಸುಗಳು ವಿವಿಧ ಸ್ಥಳಗಳಿಗೆ ಕಾರ್ಯಾಚರಣೆಯಾಗುತ್ತಿದೆ. ಸದರಿ ಬಸ್ಸುಗಳು ವಿವಿಧ ಸ್ಥಳಗಳಲ್ಲಿ ತಾಂತ್ರಿಕ ದೋಷದಿಂದಾಗಿ ಕೆಟ್ಟು ನಿಲ್ಲುವ ಸಂದರ್ಭದಲ್ಲಿ, ಉಂಟಾಗುವ ಟ್ರಾಫಿಕ್ ಸಮಸ್ಯೆ ಪರಿಹರಿಸಲು ಈ ವಾಹನವು ಸಹಕಾರಿಯಾಗಲಿದ್ದು, ಇದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗುತ್ತದೆ.
ಆದುದರಿಂದ, ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಮೈಸೂರು ರಸ್ತೆ ಬಸ್ ನಿಲ್ದಾಣದ ತಾಂತ್ರಿಕ ಸಿಬ್ಬಂದಿಗಳು ವಾಹನ ಅವಘಡ/ ಅಪಘಾತ ಸಮಯದಲ್ಲಿ ಶೀಘ್ರವಾಗಿ ಬಿಡಿಭಾಗಗಳು / ಇತರೆ ಪರಿಕರಗಳೊಂದಿಗೆ ಸದರಿ ಸ್ಥಳಗಳಿಗೆ ತೆರಳಿ ವಾಹನ ದುರಸ್ಥಿಗೊಳಿಸಲು ಮೊಬೈಲ್ ವರ್ಕಷಾಪ್ ವಾಹನವನ್ನು ಸೇರ್ಪಡೆಗೊಳಿಸಲು ಉದ್ದೇಶಿಸಲಾಗಿದೆ.
ಬಸ್ಸುಗಳು ಅಪಘಾತ/ಅವಘಡಕ್ಕೀಡಾದಲ್ಲಿ (ಬ್ರೇಕ್ ಡೌನ್) ಚಾಲಕ, ನಿರ್ವಾಹಕರಿಗೆ ತಕ್ಷಣದಲ್ಲಿ ಸಹಾಯ ನೀಡಲು ಹಾಗೂ ಗಾಯಗೊಂಡಿದಲ್ಲಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲು ಸಹ ಸ್ಪಂದನ ವಾಹನವು ಉಪಯುಕ್ತವಾಗುತ್ತದೆ.
ಪ್ರತಿ ವಾಹನದ ಬೆಲೆ ರೂ.7.22 ಲಕ್ಷಗಳಾಗುತ್ತದೆ. ಜನವರಿ-2026ರ ಅಂತ್ಯಕ್ಕೆ ಹೆಚ್ಚುವರಿಯಾಗಿ 10 ಹೊಸ ವಾಹನಗಳು ಸೇರ್ಪಡೆಗೊಳ್ಳಲಿದ್ದು, ಸದರಿ ವಾಹನಗಳನ್ನು ಉಳಿದ ಜಿಲ್ಲೆಗಳಿಗೆ ಕ್ರಮವಾಗಿ ನಿಯೋಜನೆ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಾಯುವ್ಯ ಸಾರಿಗೆ ಅಧ್ಯಕ್ಷ ಭರಮಗೌಡ(ರಾಜು) ಅಲಗೌಡ ಕಾಗೆ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಅರುಣ್ಕುಮಾರ್ ಎಂ.ವೈ, ಪಾಟೀಲ, ಬಿಎಂಟಿಸಿ ಅಧ್ಯಕ್ಷ ವಿ.ಎಸ್.ಆರಾಧ್ಯ, ಕೆಎಸ್ಆರ್ಟಿಸಿ ಉಪಾಧ್ಯಕ್ಷ ಮೊಹಮದ್ ರಿಜ್ವಾನ್, ನವಾಬ್, ವ್ಯವಸ್ಥಾಪಕ ನಿರ್ದೇಶಕ ಅಕ್ರಂಪಾಷಾ, ಬಿಎಂಟಿಸಿ ಎಂ.ಡಿ.ಶಿವಕುಮಾರ್, ವಾಯುವ್ಯ ಸಾರಿಗೆ ಎಂ.ಡಿ.ಪ್ರಿಯಾಂಗಾ, ಕಲ್ಯಾಣ ಕರ್ನಾಟಕ ಸಾರಿಗೆ ಎಂ.ಡಿ.ಡಾ.ಸುಶೀಲಾ ಮತ್ತಿತರರಿದ್ದರು.
