ಹಾಸನ,ಮೇ 31 – ಚಿನ್ನಕ್ಕಾಗಿ ಅನ್ನ ಹಾಕಿದ ಮಾಲೀಕನನ್ನೇ ಸ್ನೇಹಿತರಿಬ್ಬರು ಸೇರಿಕೊಂಡು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಅರಸೀಕೆರೆ ಪಟ್ಟಣದ ಕೆಎಸ್ಆರ್ಟಿಸಿ ಬಸ್ ಡಿಪೋ ಮುಂಭಾಗ ನಡೆದಿದೆ.
ವಿಜಯಕುಮಾರ್ (46) ಕೊಲೆಯಾದ ವ್ಯಕ್ತಿ. ಬಿಲ್ಡಿಂಗ್ ಕಂಟ್ರಾಕ್ಟರ್ ಕೆಲಸ ಮಾಡಿಸುತ್ತಿದ್ದ ವಿಜಯಕುಮಾರ್ ಗಾರೆ ಕೆಲಸಕ್ಕಾಗಿ ಬಿಹಾರ ಮೂಲದ ವಿಕ್ರಂ ಮತ್ತು ಸಚಿನ್ನನ್ನು ಪಟ್ಟಣಕ್ಕೆ ಕರೆತಂದು ಕೆಲಸ ಕೊಟ್ಟಿದ್ದರು.
ಈ ವೇಳೆ ವಿಜಯಕುಮಾರ್ ಧರಿಸುತ್ತಿದ್ದ ಆಭರಣಗಳ ಮೇಲೆ ಕಣ್ಣು ಹಾಕಿದ ಸ್ನೇಹಿತರು ಕಳೆದ ರಾತ್ರಿ ಮಾಲೀಕರಿಗೆ ಫೋನ್ ಮಾಡಿ ಆರೋಗ್ಯ ಸರಿಯಿಲ್ಲ, ಬೇಗ ಆಸ್ಪತ್ರೆಗೆ ಹೋಗಬೇಕು ಬನ್ನಿ ಎಂದು ತಿಳಿಸಿದ್ದಾರೆ. ಗಾಬರಿಯಿಂದ ನಿರ್ಮಾಣ ಹಂತದ ಕಟ್ಟಡದ ಬಳಿ ಬರುತ್ತಿದ್ದಂತೆ ಆರೋಪಿಗಳು ಕಬ್ಬಿಣದ ರಾಡು ಮತ್ತು ಸಿಲಿಂಡರ್ನಿಂದ ತಲೆ ಜಜ್ಜಿ ಕೊಲೆ ಮಾಡಿದ್ದಾರೆ. ನಂತರ ಅವರ ಮೈಮೇಲಿದ್ದ ಚಿನ್ನದ ಸರ, ಮೂರು ಉಂಗುರ, ಹಣ, ಮೊಬೈಲ್ ದೋಚಿದ್ದಾರೆ.
ಈ ವೇಳೆ ಒಂದು ಬೆರಳಿನ ಉಂಗುರ ತೆಗೆಯಲು ಸಾಧ್ಯವಾಗದಿದ್ದಾಗ ಬೆರಳನ್ನೇ ಕತ್ತರಿಸಿ ಬೆರಳುಸಮೇತ ಉಂಗುರವನ್ನು ಹೊತ್ತೊಯ್ದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿಜಯಕುಮಾರನನ್ನು ಗಮನಿಸಿದ ಸ್ಥಳೀಯರು ಅರಸೀಕೆರೆ ನಗರ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.