ಬೆಂಗಳೂರು,ಮಾ.25- ಗಾರ್ಡನ್ ಸಿಟಿಗೆ ಮತ್ತೆ ಗಾರ್ಬೇಜ್ ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ.ತಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆಯಿಂದ ಕಸ ಸಾಗಿಸೋ ವಾಹನಗಳ ಚಾಲಕರು ಆಮರಣಾಂತ ಉಪವಾಸ ಕೈಗೊಳ್ಳುವ ಸಾಧ್ಯತೆ ಇರುವುದರಿಂದ ಸಿಲಿಕಾನ್ ಸಿಟಿ ಮತ್ತೆ ಗಾರ್ಬೇಜ್ ಸಿಟಿಯಾಗುವುದು ಗ್ಯಾರಂಟಿಯಾಗಿದೆ.
ಕಸ ಸಂಗ್ರಹ ಆಟೋಗಳು, ಲಾರಿಗಳ ಸಂಚಾರ ಬಂದ್ ಮಾಡಲು ವಿವಿಧ ಸಂಘಟನೆಗಳ ಜೊತೆ ಸೇರಿ ಪ್ರತಿಭಟನೆಗೆ ವಾಹನ ಚಾಲಕರು ಪ್ಲಾನ್ ಮಾಡಿದ್ದಾರೆ.ನಾಳೆಯಿಂದ 4 ಸಾವಿರ ಕಸದ ಆಟೋಗಳು. 700 ಕಸದ ಲಾರಿಗಳು. 2 ಸಾವಿರ ಕಸದ ಟಿಪ್ಪರ್ಗಳ ಸೇವೆ ಸ್ಥಗಿತಗೊಳ್ಳಲಿವೆ.
ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ಇರುವವರ ಖಾಯಂಗೆ ಪಟ್ಟು ಹಿಡಿದಿರುವ ಚಾಲಕರು ತಮ ಕಸ ವಿಲೇವಾರಿ ಕಾರ್ಯ ಸ್ಥಗಿತ ಮಾಡಿ ಪ್ರತಿಭಟಿಸಲು ನಿರ್ಧಾರ ಕೈಗೊಂಡಿದ್ದಾರೆ.
ಈಗಾಗಲೇ ನಗರದ ಗಲ್ಲಿ ಗಲ್ಲಿಯಲ್ಲೂ ಕಸ ನಿರ್ವಹಣೆಯಲ್ಲಿ ಸಮಸ್ಯೆ ಎದುರಾಗಿದೆ. ಇದರ ಮಧ್ಯೆ ಚಾಲಕರ ಪ್ರತಿಭಟನೆ ನಿರ್ಧಾರದಿಂದ ನಗರದ ಕಸ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ.
ಕಳೆದ ಬಾರಿ ಪ್ರತಿಭಟನೆ ನಡೆಸಿದಾಗ ಸಮಸ್ಯೆ ಬಗೆಹರಿಸುವುದಾಗಿ ಡಿಸಿಎಂ ಡಿಕೆಶಿ ಭರವಸೆ ನೀಡಿದ್ದರು. ಆದರೆ, ನಿಮ್ಮ ಸಮಸ್ಯೆಗಳನ್ನು ಬೆಳಗಾವಿ ಅಧಿವೇಶನ ನಂತರ ಬಗೆಹರಿಸ್ತಿನಿ ಅಂತ ಹೇಳಿದ್ದರೂ ಅಧಿವೇಶನ ಮುಗಿದು ಮೂರು ತಿಂಗಳು ಕಳೆದ್ರು ಈಗ ಕ್ಯಾರೆ ಅನ್ನುತ್ತಿಲ್ಲ ಎಂದು ಚಾಲಕರು ತಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಐಪಿಡಿ ಸಾಲಪ್ಪ ವರದಿ ಜಾರಿಗೊಳಿಸಬೇಕು, ಘನತ್ಯಾಜ್ಯ ವಿಲೇವಾರಿ ಮಾಡೋ ಚಾಲಕರ ಸೇವೆ ಖಾಯಂ ಮಾಡಬೇಕು, ಚಾಲಕರು, ಸಹಾಯಕರನ್ನ ಪೌರಕಾರ್ಮಿಕರೆಂದು ಪರಿಗಣಿಸಬೇಕು, 2023ರಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಚಾಲಕರನ್ನ ಖಾಯಂ ಮಾಡಬೇಕು, ಹೊರಗುತ್ತಿಗೆ ಕಾರ್ಮಿಕರನ್ನ ನೇರವೇತನಕ್ಕೆ ಪರಿಗಣಿಸಬೇಕು ಎನ್ನವುದು ಚಾಲಕರ ಪ್ರಮುಖ ಬೇಡಿಕೆಗಳಾಗಿವೆ.