ಬೆಂಗಳೂರು,ಜೂ.28- ರಾಜ್ಯದಲ್ಲಿ ಉತ್ತಮ ಮಳೆ- ಬೆಳೆಯಾಗಿದ್ದು, ಕೃಷಿ ಚಟುವ ಟಿಕೆಗಳು ನಡೆಯುತ್ತಿವೆ. ರೈತರು ಸಂತಸದಿಂದಿದ್ದಾರೆ. ಅದಕ್ಕಾಗಿ ಈ ವರ್ಷ ವಿಜೃಂಭಣೆಯ ದಸರಾ ಆಚರಣೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದಲ್ಲಿಂದು ದಸರಾ ಆಚರಣೆಗೆ ಸಂಬಂಧಪಟ್ಟಂತೆ ಪೂರ್ವಭಾವಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾರಂಪರಿಕ ಐತಿಹಾಸವನ್ನು ದಸರಾದಲ್ಲಿ ಪ್ರದರ್ಶಿಸಲಾಗುತ್ತದೆ. ಆ.4 ರಂದು ಗಜಪಯಣ ಆರಂಭವಾಗಲಿದೆ.
ಸೆ. 22 ರಂದು ಬೆಳಿಗ್ಗೆ 10-10 ರಿಂದ 10-45 ರ ನಡುವೆ ದಸರಾ ಉತ್ಸವಕ್ಕೆ ಎಂದಿನಂತೆ ಚಾಮುಂಡಿಬೆಟ್ಟದಲ್ಲಿ ಚಾಲನೆ ನೀಡಲಾಗುತ್ತದೆ. ಅ.2 ರಂದು ಮಧ್ಯಾಹ್ನ 1 ಗಂಟೆಗೆ ನಂದಿಧ್ವಜ ಪೂಜೆ ನಡೆಯಲಿದೆ. ಸಂಜೆ 4-42 ರಿಂದ 5-06 ರ ನಡುವೆ ತಾಯಿ ಚಾಮುಂಡೇಶ್ವರಿ ದೇವಿ ಪ್ರತಿಮೆಗೆ ಪುಷ್ಪಾರ್ಚನೆ ನಡೆಯಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಈ ಬಾರಿಯ ದಸರಾ ಮುಂಚಿತವಾಗಿ ಬಂದಿದ್ದು, ಸೆ.22 ರಿಂದ ಅ.2 ರವರೆಗೆ 11 ದಿನಗಳ ಕಾಲ ನಡೆಯುತ್ತಿದೆ. ನವರಾತ್ರಿ 9 ದಿನದ ಬದಲು 10 ದಿನ ದಸರಾ ಆಚರಣೆ ಒಂದು ದಿನ ವಿಜಯದಶಮಿ ಆಚರಣೆಯಾಗುತ್ತದೆ. ಅಧಿಕ ಪಂಚಮಿಯ ಕಾರಣಕ್ಕಾಗಿ ಈ ಮೊದಲಿನಂತೆ 11 ದಿನದ ದಸರಾ ಆಚರಣೆ ಈ ವರ್ಷದ ವಿಶೇಷ ಎಂದರು.
ಮೈಸೂರು ಸಂಸ್ಥಾನದ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲಿ ದಸರಾ ನಡೆಯುತ್ತಿತ್ತು. ಈಗ ಮೈಸೂರಿನಲ್ಲಿ ನಡೆಯುತ್ತಿದೆ. ಪ್ರಸಕ್ತ ವರ್ಷ 10 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ. ಮೈಸೂರು ಅರಮನೆಯಿಂದ ಜಂಬೂ ಸವಾರಿ ಆರಂಭಗೊಳ್ಳುತ್ತದೆ. ಅಲ್ಲಿ ನೂಕುನುಗ್ಗಲು ಆಗದಂತೆ ಎಚ್ಚರಿಕೆ ವಹಿಸಲು ಹಾಗೂ ಪೊಲೀಸರು ಜನಸ್ನೇಹಿಗಳಾಗಿ ವರ್ತಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಕಳೆದ ವರ್ಷ ದಸರಾಗೆ 40 ಕೋಟಿ ಖರ್ಚು ಮಾಡಲಾಗಿದ್ದು, ಯಾವುದೇ ಬಿಲ್ಗಳು ಬಾಕಿ ಉಳಿಸಿಲ್ಲ. ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿರುವ ಕಾರ್ಯಕಾರಿ ಸಮಿತಿ ಈ ವರ್ಷದ ದಸರಾಗೆ ಸೂಚಿಸುವ ವೆಚ್ಚವನ್ನು ಸರ್ಕಾರ ಭರಿಸಲಿದೆ. ಕಳೆದ ವರ್ಷದಂತೆ ಈ ವರ್ಷವೂ ಮೈಸೂರು ನಗರದಲ್ಲಿ 21 ದಿನಗಳ ಆಕರ್ಷಕ ದೀಪಾಲಂಕಾರ ಆಯೋಜಿಸಲು ಸೂಚಿಸುವುದಾಗಿ ಹೇಳಿದರು.
ಲೋಕೋಪಯೋಗಿ ಮತ್ತು ಇಂಧನ ಇಲಾಖೆಗಳು ತಮ ಇಲಾಖೆ ವ್ಯಾಪ್ತಿಯ ಖರ್ಚುಗಳನ್ನು ತಾವೇ ನಿಭಾಯಿಸಬೇಕು. ಮೈಸೂರಿನಿಂದ ಹೊರಹೋಗುವ ಎಲ್ಲಾ ರಸ್ತೆಗಳು ಒಳಗಿನ ರಸ್ತೆಗಳು ಸುಸ್ಥಿತಿಯಲ್ಲಿರಬೇಕೆಂದು ಸೂಚಿಸಿದರು.ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಇದ್ದು, ದಸರಾ ಮೆರವಣಿಗೆಯಲ್ಲಿನ ಪ್ರತಿಕೃತಿಗಳು ಗಾಂಧಿತತ್ವವನ್ನು ಸಾರುವಂತಿರಬೇಕು ಎಂದು ಹೇಳಿದ್ದಲ್ಲದೆ, ದಸರಾ ಜನರ ಹಬ್ಬವಾಗಬೇಕು ಎಂದರು.
ಕಾಂಗ್ರೆಸ್ ನಾಯಕಿ ಪುಷ್ಪಾ ಅಮರನಾಥ್ ಈ ಬಾರಿಯ ದಸರಾವನ್ನು ಮಹಿಳೆಯರಿಂದ ಉದ್ಘಾಟಿಸಬೇಕು ಎಂದು ಸಲಹೆ ನೀಡಿದ್ದಾರೆ. ಅದನ್ನು ಪರಿಶೀಲಿಸಿ ವಾರ ಅಥವಾ ಹದಿನೈದು ದಿನದೊಳಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.ದಸರಾ ಉದ್ಘಾಟನೆಗೆ ಮಹಿಳೆಯರನ್ನು ಆಹ್ವಾನಿಸಬೇಕು ಎಂದು ಕೆಲವರು ಸಲಹೆ ಕೊಟ್ಟರೆ ಗಾಂಧಿವಾದಿಯಿಂದ ಉದ್ಘಾಟನೆ ಮಾಡಿಸಬೇಕೆಂದು ಇನ್ನೂ ಕೆಲವರು ಹೇಳಿದ್ದಾರೆ. ಅಂತಿಮವಾಗಿ ನನಗೆ ಅಧಿಕಾರ ನೀಡಲಾಗಿದೆ ಎಂದು ತಿಳಿಸಿದರು.
ಚಾಮರಾಜನಗರಕ್ಕೆ ದೀಪಲಂಕಾರ ಇಲ್ಲ :
ಚಾಮರಾಜನಗರಕ್ಕೂ ವಿದ್ಯುತ್ ದೀಪಾಲಂಕಾರ ಮಾಡಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮನವಿ ಮಾಡಿದಾಗ ಮುಖ್ಯಮಂತ್ರಿ ನಿರಾಕರಿಸಿದರು.
ದಸರಾ ನಡೆಯುವುದು ಮೈಸೂರಿನಲ್ಲಿ. ಚಾಮರಾಜನಗರಕ್ಕೆ ದೀಪಲಂಕಾರ ಮಾಡಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು. ಈ ಹಿಂದೆ ನೀವೇ ಅಲ್ಲಿ ದೀಪಲಂಕಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾಗಿ ವೆಂಕಟೇಶ್ ಹೇಳಿದಾಗ, ಇಲ್ಲ, ನಾನು ಆ ರೀತಿ ಮಾಡಿಕೊಟ್ಟಿಲ್ಲ, ಮೈಸೂರು ಅರಸರು ಚಾಮರಾಜನಗರದಲ್ಲಿ ಇರಲಿಲ್ಲ. ಶ್ರೀರಂಗಪಟ್ಟಣ ರಾಜಧಾನಿಯಾಗಿದ್ದು, ಹಾಗಾಗಿ ಅಲ್ಲಿ ದಸರಾ ಆಚರಣೆಯಾಗುತ್ತದೆ ಎಂದರು. ಇದು ಕೆಲಕಾಲ ಚರ್ಚೆಗೆ ಗ್ರಾಸವಾಯಿತು.
ಚಾಮರಾಜನಗರ ಜಿಲ್ಲೆಯ ಶಾಸಕರ ಮನವಿಗೂ ಮುಖ್ಯಮಂತ್ರಿ ಮಣಿಯಲಿಲ್ಲ. ನೀವು ಆ ರೀತಿ ಒತ್ತಾಯ ಮಾಡಬೇಡಿ ಎಂದು ಸಚಿವರು ಹಾಗೂ ಶಾಸಕರಿಗೆ ತಾಕೀತು ಮಾಡಿದರು.
ಇದೇ ಸಂದರ್ಭದಲ್ಲಿ ರಾಜಕೀಯ ಕುರಿತ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ ಮುಖ್ಯಮಂತ್ರಿಯವರು ರಾಜಣ್ಣ ಅವರ ಹೇಳಿಕೆಯನ್ನು ನಿರ್ಲಕ್ಷಿಸಿ ಎಂದು ಸಲಹೆ ನೀಡಿದರು.
ಮನುಸ್ಮೃತಿ ಜಾರಿಗೆ ಹುನ್ನಾರ :
ಆರ್ಎಸ್ಎಸ್ನ ನಾಯಕ ದತ್ತಾತ್ರೇಯ ಹೊಸಬಾಳೆ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು ಆರ್ಎಸ್ಎಸ್ನವರು ಮನುಸತಿಯ ಮೇಲೆ ನಂಬಿಕೆ ಇಟ್ಟುಕೊಂಡಿರುವವರು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಹೊಂದಿಲ್ಲ. ಸಂವಿಧಾನ ಬದಲಾವಣೆ ಯಾಗಬೇಕು, ಮನುಸತಿ ಜಾರಿಯಾಗಬೇಕು ಎಂಬುದು ಅವರ ಒತ್ತಾಸೆಯಾಗಿದೆ. ಹೀಗಾಗಿ ಅದನ್ನು ಬಿಟ್ಟು ಅವರು ಬೇರೆ ಏನು ಹೇಳಲು ಸಾಧ್ಯ? ಎಂದರು.
ಸಾಂವಿಧಾನಿಕ ರಚನಾ ಸಮಿತಿಯಲ್ಲಿ ಚರ್ಚೆಯಾಗಿ ಜಾತ್ಯತೀತತೆಯನ್ನು ಸೇರ್ಪಡೆಗೊಳಿಸಲಾಗಿದೆ. ಇದು ಸಂಸತ್ನಲ್ಲಿ ಚರ್ಚೆಯಾಗಿ ಸಮಾಜವಾದ ಸೇರ್ಪಡೆಯಾಗಿದೆ. ಹೊಸಬಾಳೆ ಹೇಳಿದಂತೆಲ್ಲಾ ಸೇರಿಸಲಾಗುವುದಿಲ್ಲ ಎಂದರು.
ಸಭೆಯಲ್ಲಿನ ಚರ್ಚೆಗಳು :
ಅನಗತ್ಯವಾಗಿ ಹಣ ಖರ್ಚು ಮಾಡುವುದು ವೈಭವ ಅಲ್ಲ. ಜನರ, ಪ್ರವಾಸಿಗರ ಸುರಕ್ಷತೆ ಮತ್ತು ಅನುಕೂಲಕ್ಕೆ ಪ್ರಥಮ ಆದ್ಯತೆ ನೀಡುವ ಕಾರಣಕ್ಕಾಗಿ. ಸರ್ಕಾರದ ಸಾಧನೆಗಳು, ನಾವು ಪ್ರತೀ ಇಲಾಖೆಯಲ್ಲೂ ಜಾರಿ ಮಾಡಿರುವ ಜನಪರ ಕಾರ್ಯಕ್ರಮಗಳು ಜನರಿಗೆ ಸಮರ್ಪಕವಾಗಿ ಮನವರಿಕೆ ಆಗುವ ರೀತಿಯಲ್ಲಿ ಯೋಜನೆ ರೂಪಿಸಬೇಕು. ದಸರಾಕ್ಕೆ ತನ್ನದೇ ಆದ ಚಾರಿತ್ರಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಿದ್ದು, ಇದಕ್ಕೆ ಪೂರಕವಾಗಿ ದಸರಾ ಆಚರಿಸಲಾಗುವುದು. ವಿಶ್ವ ವಿಖ್ಯಾತ ದಸರಾದ ಪರಂಪರೆಯನ್ನು ಮುಂದುವರೆಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು.
ಕಲ್ಯಾಣ ಕಾರ್ಯಕ್ರಮಗಳು, ಗ್ಯಾರಂಟಿ ಯೋಜನೆಗಳ ಮಾಹಿತಿ ಒದಗಿಸಲು ವ್ಯವಸ್ಥೆ ಮಾಡಬೇಕು. ಅರಮನೆ ಮುಂಭಾಗದಲ್ಲಿ ಆಸನದ ವ್ಯವಸ್ಥೆಯನ್ನು ಕಳೆದ ಬಾರಿಗಿಂತ ಈ ಬಾರಿ ಕಡಿಮೆ ಮಾಡಿ ಜನದಟ್ಟಣೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ವಸ್ತು ಪ್ರದರ್ಶನದ ಮಳಿಗೆಗಳು ಉದ್ಘಾಟನೆ ಸಂದರ್ಭದಲ್ಲೇ ಪೂರ್ಣ ಪ್ರಮಾಣದಲ್ಲಿ ಸಜ್ಜುಗೊಂಡಿರಬೇಕು. ಯಾವುದೇ ಮಳಿಗೆಗಳು ಖಾಲಿಯಿರಬಾರದು. ಗೋಲ್ಡ್ ಕಾರ್ಡ್ ಯಾವುದೇ ಗೊಂದಲಕ್ಕೆ ಆಸ್ಪದವಾಗದಂತೆ ವಿತರಿಸಬೇಕು. ಮೈಸೂರು ನಗರದ ಸೌಂದರ್ಯವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು.
ದಸರಾ ವೀಕ್ಷಿಸಲು ಆಗಮಿಸುವವರಿಗೆ ಹೆಚ್ಚಿನ ಪ್ರಮಾಣದಲ್ಲಿ ಶೌಚಾಲಯ, ವಾಹನ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಬೇಕು. ಈ ಬಾರಿಯೂ ದೊಡ್ಡ ಪ್ರಮಾಣದಲ್ಲಿ ಡೋಣ್ ಶೋ ಆಯೋಜಿಸಲಾಗುವುದು.
ದಸರಾ ಸಂದರ್ಭದಲ್ಲಿ ಅಧಿಕಾರಿಗಳು ಜನಸಾಮಾನ್ಯರಿಗೆ ದೊರೆಯುವುದಿಲ್ಲ ಎಂಬ ದೂರುಗಳಿದ್ದು, ಇದಕ್ಕೆ ಈ ಬಾರಿ ಅವಕಾಶ ನೀಡಬಾರದು. ಜನಸಾಮಾನ್ಯರ ಕೆಲಸ ಕಾರ್ಯಗಳು, ಅಭಿವೃದ್ದಿ ಕಾರ್ಯಗಳು ಯಾವುದೇ ಕಾರಣಕ್ಕೂ ಕುಂಠಿತವಾಗಬಾರದು.
ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್.ಸಿ.ಮಹದೇವಪ್ಪ, ಕೆ.ಜೆ.ಜಾರ್ಜ್, ಶಿವರಾಜ ತಂಗಡಗಿ, ಕೆ. ವೆಂಕಟೇಶ್, ಅಪರ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತಾ, ಮುಖ್ಯಮಂತ್ರಿ ಅವರ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ಜಿ.ಟಿ.ದೇವೇಗೌಡ, ರಮೇಶ್ ಬಂಡಿಸಿದ್ದೇಗೌಡ, ಪುಟ್ಟರಂಗಶೆಟ್ಟಿ,, ತನ್ವೀರ್ ಸೇಠ್, ಡಾ.ಯತೀಂದ್ರ ಎಸ್, ಡಾ.ಡಿ.ತಿಮಯ್ಯ, ಅನಿಲ್ ಕುಮಾರ್, ಎ.ಆರ್.ಕೃಷ್ಣಮೂರ್ತಿ, ಮಧು ಜಿ ಮಾದೇಗೌಡ, ಕೆ.ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ, ಡಾ.ಮಾನಸ, ಪುಷ್ಪಾ ಅಮರನಾಥ್, ಅಯೂಬ್ ಖಾನ್ ಮತ್ತಿತರರು ಉಪಸ್ಥಿತರಿದ್ದರು.