Sunday, September 8, 2024
Homeರಾಜ್ಯಪ.ವರ್ಗ ಮತ್ತು ಪ.ಪಂಗಡದ ಜನಾಂಗಕ್ಕೆ ದ್ರೋಹ ಎಸಗಲಾಗಿದೆ : ಆರ್‌.ಅಶೋಕ್‌

ಪ.ವರ್ಗ ಮತ್ತು ಪ.ಪಂಗಡದ ಜನಾಂಗಕ್ಕೆ ದ್ರೋಹ ಎಸಗಲಾಗಿದೆ : ಆರ್‌.ಅಶೋಕ್‌

ಬೆಂಗಳೂರು,ಜು.18- ಪರಿಶಿಷ್ಟ ವರ್ಗ ಮತ್ತು ಪಂಗಡಕ್ಕಾಗಿ ಮೀಸಲಿಟ್ಟ ಎಸ್ಸಿಪಿ, ಟಿಎಸ್ಪಿಯ 25 ಸಾವಿರ ಕೋಟಿ ರೂ. ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಂಡು ಆ ಜನಾಂಗಕ್ಕೆ ದ್ರೋಹ ಎಸಗಲಾಗಿದೆ ಎಂದು ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ವಿಧಾನಸಭೆಯಲ್ಲಿ ತಿಳಿಸಿದರು.

ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪ ಮಾಡಿದ ಅವರು, ಅವೈಜ್ಞಾನಿಕವಾಗಿ 5 ಗ್ಯಾರಂಟಿಗಳನ್ನು ಜಾರಿಗೆ ತಂದರು. ಆ ಗ್ಯಾರಂಟಿ ಯೋಜನೆಗಳಿಗೆ ಬಜೆಟ್‌ ಅನುದಾನ ಒದಗಿಸುವ ಬಗ್ಗೆ ಸರಿಯಾದ ಚರ್ಚೆ ಮಾಡಲಿಲ್ಲ. ಕಳೆದ ವರ್ಷ ಹಾಗೂ ಈ ವರ್ಷ ಮೀಸಲಿಟ್ಟಿದ್ದ ಎಸ್ಸಿಪಿ ಮತ್ತು ಟಿಎಸ್ಪಿಯ 25 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಬಳಸಲಾಗಿದೆ ಎಂದು ಆಕ್ಷೇಪಿಸಿದರು.

ಎಸ್‌‍ಸಿ/ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ಆ ಸಮುದಾಯದ ಕಲ್ಯಾಣಕ್ಕಾಗಿ ರಸ್ತೆ, ಚರಂಡಿ, ಪ್ರದೇಶದ ಅಭಿವೃದ್ಧಿ, ಬಡಾವಣೆಗಳ ಅಭಿವೃದ್ಧಿಗೆ ವಿನಿಯೋಗಿಸಬೇಕಿತ್ತು. ಆದರೆ ಕಾಯಿದೆಯನ್ನು ಗಾಳಿಗೆ ತೂರಲಾಗಿದೆ. ಅದೇ ರೀತಿ ಲಿಂಗಾಯತರ ಅಭಿವೃದ್ಧಿ ನಿಗಮ, ಒಕ್ಕಲಿಗರ ಅಭಿವೃದ್ಧಿ ನಿಗಮ, ಬ್ರಾಹಣರ ಅಭಿವೃದ್ಧಿ ನಿಗಮವನ್ನು ಬಳಸಿಕೊಳ್ಳಿ ಎಂದು ವಾಗ್ದಾಳಿ ನಡೆಸಿದರು.

ಎಸ್‌‍ಸಿ/ಎಸ್ಟಿ ಜನಾಂಗಕ್ಕೆ ಸರ್ಕಾರ ಮಾಡುತ್ತಿರುವ ದ್ರೋಹ ವಂಚನೆಯಾಗಿದೆ. ಅವರಿಗೆ 2 ಸಾವಿರ ಕೊಡುವುದರಿಂದ ಶುದ್ಧ ಕುಡಿಯುವ ನೀರು ದೊರೆಯುವುದಿಲ್ಲ. ಆ ಜನಾಂಗಕ್ಕೆ ಮೀಸಲಿಟ್ಟ ಹಣವನ್ನ ಬೇರೆ ಕಾರಣಕ್ಕೆ ಖರ್ಚು ಮಾಡಬಾರದು, ಈ ಬಗ್ಗೆ ಚರ್ಚೆಗೆ ಹೆಚ್ಚಿನ ಅವಕಾಶ ನೀಡಬೇಕೆಂದು ಕೋರಿದರು.ಆಗ ಸಭಾಧ್ಯಕ್ಷರು ಈ ವಿಚಾರವನ್ನು ನಿಲುವಳಿ ಸೂಚನೆ ಬದಲಿಗೆ ನಿಯಮ 69 ರಡಿ ಚರ್ಚೆಗೆ ಅವಕಾಶ ನೀಡುವುದಾಗಿ ಪ್ರಕಟಿಸಿದರು.

RELATED ARTICLES

Latest News