Tuesday, September 17, 2024
Homeರಾಷ್ಟ್ರೀಯ | Nationalಅಗ್ನಿಪತ್ ಯೋಜನೆಯಲ್ಲಿ ಬದಲಾವಣೆ ತರಲು ಮುಂದಾದ ಕೇಂದ್ರ ಸರ್ಕಾರ

ಅಗ್ನಿಪತ್ ಯೋಜನೆಯಲ್ಲಿ ಬದಲಾವಣೆ ತರಲು ಮುಂದಾದ ಕೇಂದ್ರ ಸರ್ಕಾರ

Agnipath Scheme

ನವದೆಹಲಿ,ಸೆ.6- ಲೋಕಸಭೆ ಸಾರ್ವತ್ರಿಕ ಚುನಾವಣೆಯ ವೇಳೆ ಉತ್ತರ ಭಾರತದ ರಾಜ್ಯಗಳಲ್ಲಿ ಕೋಲಾಹಲಕ್ಕೆ ಕಾರಣವಾಗಿದ್ದ ಅಗ್ನಿಪಥ್ ಯೋಜನೆಯಲ್ಲಿ ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಅಗ್ನಿವೀರರ ಸಂಖ್ಯೆ, ಸಂಬಳ ಸೇರಿ ಮತ್ತಿತರ ನಿಯಮಗಳನ್ನು ಪರಿಷ್ಕರಿಸಲಿದೆ ಎಂದು ತಿಳಿದುಬಂದಿದೆ.

ಅಗ್ನಿಪಥ್ ಯೋಜನೆಯ ಪ್ರಸ್ತುತ ನಿಯಮಗಳ ಪ್ರಕಾರ, 4 ವರ್ಷಗಳ ತರಬೇತಿಯ ಬಳಿಕ ಶೇಕಡಾ 75 ಅಗ್ನಿವೀರರು ನಿವೃತ್ತಿ ಹೊಂದಬೇಕು. 25 ಪ್ರತಿಶತದಷ್ಟು ಯುವಕರನ್ನು ಸೇನೆಗೆ ಆಯ್ಕೆಯಾಗುತ್ತಾರೆ. ಈ ನಿಯಮಕ್ಕೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.

ಜೊತೆಗೆ ಎನ್ಡಿಎ ಮಿತ್ರಪಕ್ಷಗಳು ಸಹ ಅಗ್ನಿಪಥ್ ನಿಯಮಗಳನ್ನು ಮರುಪರಿಶೀಲಿಸಲು ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಡುವ ಸಾಧ್ಯತೆ ಇದೆ. 4 ವರ್ಷಗಳ ಅವಧಿಯ ಬಳಿಕ ಅಗ್ನಿವೀರರು ನಿವೃತ್ತಿ ಮತ್ತು ಸೇನೆಗೆ ಸೇರುವವರ ಸಂಖ್ಯೆಯನ್ನು ಶೇಕಡಾ 50:50ರಷ್ಟು ಆಗಲಿದೆ.

ಈಗಿರುವ 21 ವರ್ಷ ವಯೋಮಿತಿ ಬದಲಿಗೆ 23 ವರ್ಷಕ್ಕೆ ಅರ್ಹತೆ ಹೆಚ್ಚಳವಾಗಲಿದೆ ಎಂದು ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವೇತನದಲ್ಲೂ ಬದಲಾವಣೆ ತರುವ ಯೋಜನೆ ಇದೆ ಎಂದರು.

ಸೇನಾ ಬಲ ಕುಗ್ಗುವ ಸಾಧ್ಯತೆ:
ಆಂತರಿಕ ಸಮೀಕ್ಷೆಗಳನ್ನು ನಡೆಸಿರುವ ಸೇನೆಯು, ಅಗ್ನಿಪಥ್ ಯೋಜನೆಯಲ್ಲಿ ಬದಲಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಕೇಂದ್ರಕ್ಕೆ ಹಲವು ಪ್ರಸ್ತಾವನೆಗಳನ್ನು ಸಲ್ಲಿಸಿದೆ. ಅಗ್ನಿವೀರರು ಶೇ.25ರಷ್ಟು ಮಾತ್ರ ಸೇನೆ ಸೇರುವುದರಿಂದ ಅದರ ಬಲವೂ ಕುಗ್ಗುವ ಸಾಧ್ಯತೆ ಇದೆ.

ಇದನ್ನು ತಪ್ಪಿಸಲು ಸೇನೆಗೆ ಆಯ್ಕೆಯಾಗುವ ಯುವಕರ ಸಂಖ್ಯೆಯನ್ನು ದುಪ್ಪಟ್ಟು ಮಾಡಲು ಶಿಫಾರಸು ಮಾಡಲಾಗಿದೆ. 4 ವರ್ಷ ಕಠಿಣ ತರಬೇತಿ ಪಡೆದ ಸೈನಿಕರ ಸಾಮರ್ಥ್ಯವನ್ನು ಸೇನೆ ಬಳಸಿಕೊಳ್ಳಬೇಕು ಎಂದು ನಿವೃತ್ತ ನೌಕಾಪಡೆ ಅಧಿಕಾರಿಯೊಬ್ಬರು ತಿಳಿಸಿದರು.

2022 ರ ಜೂನ್ನಲ್ಲಿ ಕೇಂದ್ರ ಸರ್ಕಾರವು ಮೂರು ಪಡೆಗಳಲ್ಲಿ ನೇಮಕಾತಿಗಾಗಿ ಅಗ್ನಿಪಥ್ ಯೋಜನೆಯನ್ನು ಜಾರಿಗೆ ತಂದಿತು. 17ರಿಂದ 21 ವರ್ಷದೊಳಗಿನ ಯುವಕ-ಯುವತಿಯರು ಮಾತ್ರ ಅಗ್ನಿವೀರರಾಗಿ ಕರ್ತವ್ಯ ನಿರ್ವಹಿಸಲು ಅರ್ಹರು ಎಂದು ಕೇಂದ್ರ ಹೇಳಿದೆ.
ನಾಲ್ಕು ವರ್ಷ ಪೂರ್ಣಗೊಂಡ ನಂತರ ಸೇವೆಯಿಂದ ನಿವೃತ್ತಿಯಾಗುವ ಯುವಕರಿಗೆ ಸಂಬಳ ಮತ್ತು ಮೊತ್ತವನ್ನು ನೀಡಲಾಗುತ್ತಿದೆ.

ನಿವೃತ್ತಿ ಬಳಿಕ ಯಾವುದೇ ಪಿಂಚಣಿ ಸೌಲಭ್ಯ ಸಿಗುವುದಿಲ್ಲ. ಇದು ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿತ್ತು. ಬಳಿಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗ್ನಿವೀರರಿಗೆ ಹಲವು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡಲು ನಿರ್ಧರಿಸಿವೆ.

RELATED ARTICLES

Latest News