Sunday, June 15, 2025
Homeರಾಷ್ಟ್ರೀಯ | Nationalಏರ್ ಇಂಡಿಯಾ ವಿಮಾನ ದುರಂತದ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಿದ ಕೇಂದ್ರ ಸರ್ಕಾರ

ಏರ್ ಇಂಡಿಯಾ ವಿಮಾನ ದುರಂತದ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಿದ ಕೇಂದ್ರ ಸರ್ಕಾರ

Govt sets up high-level panel to examine causes for Air India plane crash

ನವದೆಹಲಿ, ಜೂ.14- ಗುಜರಾತ್‌ ನ ಅಹಮ್ಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪ್ರಕರಣದ ತನಿಖೆಗಾಗಿ ಕೇಂದ್ರ ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿದ್ದು, ಮುಂದಿನ ದಿನಗಳಲ್ಲಿ ಈ ರೀತಿಯ ದುರಂತಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಪ್ರಮಾಣಿತ ನಿರ್ವಹಣಾ ಮಾರ್ಗಸೂಚಿಗಳನ್ನು ರೂಪಿಸಲು ಆದೇಶಿಸಿದೆ.

ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸಮಿತಿಯಲ್ಲಿನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ, ಕೇಂದ್ರ ಗೃಹ ಇಲಾಖೆಯ ಹೆಚ್ಚುವರಿ ಅಥವಾ ಜಂಟಿ ಕಾರ್ಯದರ್ಶಿ, ಗುಜರಾತ್ ಸರ್ಕಾರದ ಗೃಹ ಕಾರ್ಯದರ್ಶಿ, ಗೃಹ ಇಲಾಖೆಯ ಮುಖ್ಯಸ್ಥರು, ಗುಜರಾತ್‌ನ ಪ್ರಕೃತಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರತಿನಿಧಿ, ಅಹಮ್ಮದಾಬಾದ್‌ ಪೊಲೀಸ್ ಆಯುಕ್ತರು, ಭಾರತೀಯ ವಾಯುಪಡೆಯ ತಪಾಸಣೆ ಮತ್ತು ಸುರಕ್ಷತೆಯ ಮಹಾ ನಿರ್ದೇಶಕರು, ನಾಗರಿಕ ವಿಮಾನಯಾನ ಸುರಕ್ಷತಾ ದಳದ ಮಹಾ ನಿರ್ದೇಶಕರು, ವಿಶೇಷ ನಿರ್ದೇಶಕರು, ಕೇಂದ್ರ ಸರ್ಕಾರದ ವಿಧಿವಿಜ್ಞಾನ ವಿಭಾಗದ ನಿರ್ದೇಶಕರು ಮತ್ತು ಇತರರನ್ನು ಸಮಿತಿಗೆ ಸದಸ್ಯರನ್ನಾಗಿ ನಿಯೋಜಿಸಲಾಗುತ್ತಿದೆ ಎಂದು ಕೇಂದ್ರ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಉನ್ನತಾಧಿಕಾರ ಸಮಿತಿಗೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸುವ ಅಧಿಕಾರವನ್ನು ನೀಡಲಾಗಿದೆ. ವಿಮಾನದ ದತ್ತಾಂಶಗಳು, ಕಾಟ್ ಫಿಟ್‌ನ ವಾಯ್ಸ್ ರೆಕಾರ್ಡ್, ವಿಮಾನದ ನಿರ್ವಹಣೆಯ ದಾಖಲಾತಿಗಳು, ವಿಮಾನಯಾನ ಸಂಚಾರಿ ನಿರ್ವಹಣೆಯ ದಾಖಲಾತಿಗಳು, ಸ್ಥಳ ಪರಿಶೀಲನೆ, ಸಿಬ್ಬಂದಿಗಳ ವಿಚಾರಣೆ, ವಿಮಾನ ಸಂಚಾರ ನಿರ್ವಹಣೆ ನಿಯಂತ್ರಕರು ಹಾಗೂ ಸಂಬಂಧಪಟ್ಟವರಿಂದ ಮಾಹಿತಿ ಪಡೆಯುವುದು, ವಿದೇಶಿ ಸಂಸ್ಥೆಗಳಿಂದ ಅಗತ್ಯ ನೆರವು ಪಡೆಯಲು ಹಾಗೂ ಬೋಯಿಂಗ್ ವಿಮಾನ ತಯಾರಿಕಾ ವಿದೇಶಿ ಸಂಸ್ಥೆಯ ವಿವರಣೆ ಪಡೆಯಲು ಸಹ ಅವಕಾಶ ಕಲ್ಪಿಸಲಾಗಿದೆ.

ವಿಚಾರಣಾ ವರದಿಯನ್ನು ಸಲ್ಲಿಸಲು ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ. ಈ ಸಮಿತಿ ಪ್ರಮುಖವಾಗಿ ವಿಮಾನ ಪತನದ ಕಾರಣವನ್ನು ಪತ್ತೆ ಹಚ್ಚಲಿದೆ. ವಿಮಾನದಲ್ಲಿ ತಾಂತ್ರಿಕ ದೋಷಗಳಿದ್ದವೆ. ಮಾನವ ಸೃಷ್ಟಿತ ದೋಷಗಳಾಗಿದ್ದವೆ. ಹವಾಮಾನ ವೈಪರೀತ್ಯವೇ, ಸಂಬಂಧಪಟ್ಟವರ ನಿರ್ದೇಶನದಲ್ಲಿ ವೈಫಲ್ಯವಿತ್ತೇ ಹಾಗೂ ಇತರ ಕಾರಣಗಳನ್ನು ಪರಿಶೀಲಿಸಲಿದೆ.

ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆಗಳನ್ನು ತಪ್ಪಿಸಲು ಕೈಗೊಳ್ಳಬೇಕಾದ ಪ್ರಮಾಣಿತ ನಿರ್ವಹಣಾ ಪ್ರಕ್ರಿಯೆಗಳ (ಎಸ್‌ಓಪಿ) ರೂಪಿಸುವ ಕುರಿತು ಸಮಿತಿ ಸಲಹೆ ಮಾಡಬೇಕಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನುಸರಿಸುತ್ತಿರುವ ಉತ್ತಮ ಅಭ್ಯಾಸಗಳನ್ನು ಅಧ್ಯಯನ ನಡೆಸಿ ಅದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ವಿವರಣೆ ನೀಡಲಿದೆ.

ಏರ್ ಇಂಡಿಯಾ ವಿಮಾನ ಪತನವಾಗಿ 241ಕ್ಕೂ ಹೆಚ್ಚು ಮಂದಿ ಮೃತಪಟ್ಟ ಘಟನೆಯಲ್ಲಿ ತ್ವರಿತ ರಕ್ಷಣಾ ಕಾರ್ಯಗಳ ವೈಫಲ್ಯವಾಗಿತ್ತೇ?, ಸ್ಥಳಕ್ಕೆ ಕೇಂದ್ರ ಮತ್ತು ರಾಜ್ಯ ರಕ್ಷಣಾ ದಳಗಳು ಧಾವಿಸುವಲ್ಲಿ ವಿಳಂಬವಾಯಿತೆ?, ರಕ್ಷಣಾ ಕಾರ್ಯಾಚರಣೆ ತಡವಾಗಿದ್ದೇಕೆ?, ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯತೆ ಸಮರ್ಪಕವಾಗಿತ್ತೇ? ಎಂಬುದನ್ನು ಪರಿಶೀಲಿಸಬೇಕಿದೆ.

ಇಂತಹ ದುರ್ಘಟನೆಗಳನ್ನು ನಿರ್ವಹಣೆ ಮಾಡುವಲ್ಲಿ ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸಲಾಗಿದೆಯೇ?, ಈ ಹಿಂದೆ ದೇಶದಲ್ಲಿ ವಿಮಾನ ಪತನಗಳಾದಾಗ ಯಾವೆಲ್ಲಾ ಕ್ರಮಗಳನ್ನು ಅನುಸರಿಸಲಾಗಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯಸರ್ಕಾರಗಳು ಘಟನೋತ್ತರದಲ್ಲಿ ಅನುಸರಿಸಬೇಕಾದ ಪ್ರಮಾಣಿತ ಮಾರ್ಗಸೂಚಿಗಳನ್ನು ಉನ್ನತಾಧಿಕಾರಿ ಸಮಿತಿ ಪರಿಶೀಲಿಸಲಿದೆ. ನಿಯಮಾವಳಿಗಳ ಬದಲಾವಣೆ, ನಿರ್ವಹಣಾ ಸುಧಾರಣೆ, ತರಬೇತಿ ಹೆಚ್ಚಳದಂತಹ ವಿಚಾರಗಳ ಬಗ್ಗೆಯೂ ಕೇಂದ್ರ ಸರ್ಕಾರ ವರದಿ ಕೇಳಿದೆ.

RELATED ARTICLES

Latest News