ಬೆಂಗಳೂರು,ಸೆ.24- ಸಾಲ ತೀರಿಸಲು ಸ್ನೇಹಿತನ ಮನೆಗೆ ಕನ್ನ ಹಾಕಿದ್ದ ಬಿಇ ಪದವೀಧರನನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿ 5.80 ಲಕ್ಷ ರೂ. ಮೌಲ್ಯದ 58 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಮೂಲತಃ ಕಲ್ಬುರ್ಗಿ ನಿವಾಸಿ ಮಂಜುನಾಥ್ (38) ಬಂಧಿತ ಪದವೀಧರ. ಈತ ಕೆಆರ್ಪುರಂನ ಅಯ್ಯಪ್ಪನಗರದಲ್ಲಿ ವಾಸವಾಗಿದ್ದು, ಬಿಇ ಸಿವಿಲ್ ಎಂಜಿನಿಯರ್ ವ್ಯಾಸಂಗ ಮಾಡಿದ್ದು, ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾನೆ.
ಸಾಲ ಮಾಡಿಕೊಂಡಿದ್ದ ಮಂಜುನಾಥ್ ಅದನ್ನು ತೀರಿಸಲು ಕಳ್ಳತನದ ಹಾದಿ ಹಿಡಿದಿದ್ದಾನೆ.
ಕೊಡಿಗೆಹಳ್ಳಿ ಗ್ರಾಮದಲ್ಲಿ ಈತನ ಸ್ನೇಹಿತ ನವೀನ್ ವಾಸವಾಗಿದ್ದು, ಆ.29 ರಂದು ಸಂಜೆ ಗ್ರಾಮದಲ್ಲಿ ಕೂರಿಸ್ದಿ ಗಣೇಶನ ಮೂರ್ತಿಗೆ ಪೂಜೆ ಮಾಡಿಸಿಕೊಂಡು ಬರಲು ಅವರ ಪತ್ನಿ ಸುಷಾ ಮನೆಗೆ ಬೀಗಹಾಕಿಕೊಂಡು ಹೋಗಿದ್ದರು.
ಇದೇ ಸಮಯಕ್ಕಾಗಿ ಕಾದಿದ್ದ ಮಂಜುನಾಥ್ ಸ್ನೇಹಿತನ ಮನೆಯ ಮುಂಬಾಗಿಲನ್ನು ಒಡೆದು ಒಳನುಗ್ಗಿ ಕೊಠಡಿಯ ಕಬೋರ್ಡ್ನಲ್ಲಿಟ್ಟಿದ್ದ 50 ಗ್ರಾಂ ಚಿನ್ನದ ಮಾಂಗಲ್ಯ ಸರ, 20 ಗ್ರಾಂ 2 ಚಿನ್ನದ ಬಳೆ, 35 ಗ್ರಾಂ ಕಿವಿಯೋಲೆಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದನು.
ಸುಷಾ ಅವರು ಕೆಲ ಸಮಯದ ಬಳಿಕ ಮನೆಗೆ ಬಂದಾಗ ಕಳ್ಳತನವಾಗಿರುವುದು ಕಂಡು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಹಲವು ಮಾಹಿತಿಗಳನ್ನು ಕಲೆಹಾಕಿ ಆರೋಪಿ ಮಂಜುನಾಥ್ನನ್ನು ಆತನ ಮನೆಯಲ್ಲೇ ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಸ್ನೇಹಿತನ ಮನೆಯಲ್ಲಿ ಕಳ್ಳತನ ಮಾಡಿದ್ದಾಗಿ ಹೇಳಿದ್ದಾನೆ. ಆತನ ಮನೆಯಲ್ಲಿದ್ದ 58 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 5.80 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.