ಬೆಂಗಳೂರು,ಫೆ.25– ಗ್ಯಾರಂಟಿ ಯೋಜನೆಗಳನ್ನು ಬಿಪಿಎಲ್ ಕಾರ್ಡ್ದಾರರಿಗೆ ಮಾತ್ರ ಯಾಕೆ ನೀಡಬಾರದು ಎಂದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಅವರು ತುಮಕೂರು ಜಿಲ್ಲಾ ಕೆಡಿಪಿ ಸಭೆಯಲ್ಲಿ ಸಲಹೆ ನೀಡಿದರು. ವಿಪಕ್ಷದವರು ಸಲಹೆ ನೀಡಿದರೆ ಚರ್ಚೆ ಮಾಡುವುದಾಗಿ ಈ ವೇಳೆ ಹೇಳಿದ್ದೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಯಂಪ್ರೇರಿತವಾಗಿ ಅನೇಕ ಜನ ಗ್ಯಾರಂಟಿ ಯೋಜನೆಗಳನ್ನು ಬಿಡುತ್ತಿದ್ದಾರೆ. ಆದಾಯ ತೆರಿಗೆ ಪಾವತಿಸುವವರು, ಸರ್ಕಾರಿ ನೌಕರರು ಸೇರಿದಂತೆ ಬಹಳಷ್ಟು ಜನ ಬಿಟ್ಟಿದ್ದಾರೆ. ಅದನ್ನು ಮುಂದುವರಿದು ಬಡವರಿಗಾಗಿ ಮಾಡಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಸಲಹೆ ಕೊಟ್ಟಿದ್ದಾರೆ ಎಂದರು.
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಅಗತ್ಯದ ಬಗ್ಗೆ ಚರ್ಚೆ ಮಾಡಬೇಕು. ನಂತರ ಏನೆಂಬುದು ಗೊತ್ತಾಗಲಿದೆ. ಸಾಧಕ-ಬಾಧಕಗಳನ್ನು ಚರ್ಚಿಸಬೇಕು. ಚುನಾವಣೆ ಸಂದರ್ಭದಲ್ಲಿ ಬರೀ ಬಿಪಿಎಲ್ ಕಾರ್ಡ್ಾರರಿಗೆ ಮಾತ್ರ ಎಂದು ಹೇಳಿರಲಿಲ್ಲ. ಚರ್ಚೆ ಮಾಡಿದ ಮೇಲೆ ಸರ್ಕಾರ ತೀರ್ಮಾನ ಮಾಡಬೇಕಾಗುತ್ತದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳಿಂದ ಹೊರೆಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಸರ್ಕಾರಕ್ಕೆ ಹೊರೆಯಾಗುತ್ತದೆ ಎಂಬುದು ಗೊತ್ತಿತ್ತು. ಬಡವರಿಗಾಗಿ ಕೊಡುವ ಕಾರ್ಯಕ್ರಮಗಳಿಂದ ಹೊರೆಯಾಗಲೇಬೇಕು. ಈ ವಿಚಾರ ಗೊತ್ತಿದ್ದೇ ಮಾಡಿದ್ದೇವೆ ಎಂದು ಹೇಳಿದರು.ಬೆಳಗಾವಿಯಲ್ಲಿ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ವರದಿ ನೀಡುವಂತೆ ವಲಯ ಐಜಿಪಿ, ಎಸ್ಪಿಯವರಿಗೆ ಸೂಚಿಸಿದ್ದೇನೆ. ಬಸ್ ನಿರ್ವಾಹಕನ ಮೇಲೆ ಏತಕ್ಕಾಗಿ ಪೋಕೋ ಕೇಸ್ ದಾಖಲಿಸಲಾಗಿದೆ. ಪರಿಶೀಲಿಸಿ ವರದಿ ನೀಡುವಂತೆ ಹೇಳಿದ್ದೇನೆ ಎಂದರು.
ಇಂದು ಕನ್ನಡಪರ ಸಂಘಟನೆಗಳು ಪ್ರತಿಭಟನೆ ಮಾಡಲು ಅವಕಾಶ ನೀಡಲಾಗಿದೆ. ಶಾಂತಿಯುತ ಪ್ರತಿಭಟನೆ ನಡೆಸಬೇಕು. ಒಂದು ವೇಳೆ ಗಲಾಟೆ ಮಾಡಿದರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂಬುದನ್ನು ಹೇಳಿದ್ದೇವೆ. ಮಹಾರಾಷ್ಟ್ರ ಸರ್ಕಾರದ ಬಸ್ಗಳು ಬರುತ್ತಿಲ್ಲ. ಕರ್ನಾಟಕದ ಬಸ್ಗಳು ಹೋಗುತ್ತಿಲ್ಲ.
ಸದ್ಯದ ಪರಿಸ್ಥಿತಿಯಲ್ಲಿ ಎರಡು ರಾಜ್ಯಗಳ ಬಸ್ ಸಂಚಾರ ನಿಲ್ಲಿಸಲಾಗಿದೆ. ವಾತಾವರಣ ತಿಳಿಯಾದ ಮೇಲೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.ಉದಯಗಿರಿ ಗಲಾಟೆಗೆ ಸಂಬಂಧಿಸಿಂತೆ ನಾವು ಬಿಜೆಪಿಯವರ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ಮಾಡಿಲ್ಲ. ಬೇರೆಬೇರೆ ರೀತಿಯ ಬೆಳವಣಿಗೆಗಳಾಗಬಾರದು ಎಂಬ ಕಾರಣಕ್ಕೆ ಎರಡು ಕಡೆಯವರಿಗೆ ಪ್ರತಿಭಟನೆ ನಡೆಸಲು ಅವಕಾಶ ನೀಡಿರಲಿಲ್ಲ. ಕೋರ್ಟ್ಗೆ ಹೋಗಿದ್ದರು. ಕೋರ್ಟ್ ಆದೇಶದ ಮೇಲೆ ಮೈದಾನದಲ್ಲಿ ಪ್ರತಿಭಟನೆ ಮಾಡಿದ್ದಾರೆ. ಈ ಘಟನೆಯಲ್ಲಿ ರಾಜಕಾರಣ ಮಾಡಬೇಡಿ ಎಂದು ಹೇಳಿದ್ದೇನೆ ಎಂದು ಹೇಳಿದರು.
ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿಯವರು ಹೇಳಿದ್ದಾರೆ. ಸಮಯ ನೋಡಿಕೊಂಡು ಬಿಡುಗಡೆ ಮಾಡುತ್ತಾರೆ ಎಂದು ತಿಳಿಸಿದರು. ಮುಂದಿನ ಚುನಾವಣೆ ನನ್ನ ನಾಯಕತ್ವದಲ್ಲಿ ನಡೆಯಲಿದೆ ಎಂಬ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯಲ್ಲಿ ತಪ್ಪೇನಿದೆ ಎಂದು ಪರಮೇಶ್ವರ್ ಅವರು ಮಾಧ್ಯಮದವರನ್ನು ಪ್ರಶ್ನಿಸಿದರು. ಅದೆಲ್ಲ ಹೈಕಮಾಂಡ್ಗೆ ಬಿಡುವಂಥದ್ದು. ಹೈಕಮಾಂಡ್ ಮತ್ತು ಅಧ್ಯಕ್ಷರ ಮಧ್ಯೆ ನಾವು ಪ್ರವೇಶ ಮಾಡುವುದಿಲ್ಲ ಎಂದರು.
ಬಿಜೆಪಿಯವರಿಗೆ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗುವುದು ಬೇಕಿಲ್ಲ. ಹೇಗಾದರೂ ಮಾಡಿ ಗ್ಯಾರಂಟಿ ಯೋಜನೆಗಳನ್ನು ಹತ್ತಿಕ್ಕಬೇಕು ಎನ್ನುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.
ನಮ್ಮ ಉದ್ದೇಶ ಬಡವರಿಗೋಸ್ಕರ ಗ್ಯಾರಂಟಿ ಯೋಜನೆಗಳನ್ನು ಕೊಡುತ್ತಿದ್ದೇವೆ. ಬಡವರಿಗೆ ಹಣ ಕೊಡುವುದು ಬಿಜೆಪಿಯವರಿಗೆ ಮನಸ್ಸಿಲ್ಲ ಎಂದರೆ ಬಿಜೆಪಿಯವರ ಸಿದ್ಧಾಂತ ಏನಿದೆ ಎಂಬುದು ಅರ್ಥವಾಗುತ್ತದೆ.
ಬಿಜೆಪಿಯವರು ಬಡವರ ಪರ ಇಲ್ಲ. ಪ್ರತಿಭಟನೆ ಮೂಲಕ ಸಾರ್ವಜನಿಕವಾಗಿ ಅದನ್ನು ಹೇಳಲು ಹೊರಟಿದ್ದಾರೆ. ಇದೆಲ್ಲವನ್ನೂ ಜನ ಗಮನಿಸುತ್ತಾರೆ ಎಂದು ಟೀಕಿಸಿದರು.ದಲಿತರು ಮೀಸಲಿಟ್ಟ ಹಣವನ್ನು ದಲಿತರಿಗೆ ನೀಡುತ್ತಿದ್ದೇವೆ. ಸರ್ಕಾರದಲ್ಲಿ ಇಂಥ ಯೋಜನೆಗಳನ್ನು ಮಾಡಿದಾಗ ಯೋಚಿಸಿಯೇ ತೀರ್ಮಾನ ಕೈಗೊಂಡಿರುತ್ತೇವೆ. ಒಂದಷ್ಟು ಬದಲಾವಣೆಗಳಾದರೆ ಹಣ ಬಳಸಿರುತ್ತಾರೆ. ದಲಿತರಿಗಾಗಿ ಮೀಸಲಿಟ್ಟ ಹಣವನ್ನು ಕೊಳ್ಳೆ ಹೊಡೆಯಲಾಗಿದೆಯೇ ಎಂದು ಅವರು ಪ್ರಶ್ನಿಸಿದರು.