ಬೆಂಗಳೂರು, ಜೂ.15-ನಾನು ಆರೋಗ್ಯದಿಂದ ಗಟ್ಟಿಮುಟ್ಟಾಗಿದ್ದು, ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದ ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಮುಂದೆ ಜೆಡಿಎಸ್ – ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು. ಜೆ.ಪಿ.ಭವನದಲ್ಲಿ ಮಿಸ್ಡ್ಕಾಲ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿದ ನಡೆದ ಪಕ್ಷದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನಗೆ ಮೂರು ಬಾರಿ ಹೃದಯ ಶಸ್ತ್ರಚಿಕಿತ್ಸೆ ಹಾಗೂ ಎರಡು ಬಾರಿ ಸ್ಟ್ರೋಕ್ ಹಾಗಿದೆ. ಭಗವಂತ ಆಯುಷ್ಯ ಕೊಟ್ಟಿದ್ದಾನೆ. ಜನರಿಗಾಗಿಯೇ ಬದುಕಿರುವೆ ಎಂದು ತಿಳಿಸಿದರು.
ತಂದೆ-ತಾಯಿಯವರು ಮಾಡಿರುವ ಒಳ್ಳೆಯ ಕಾರ್ಯ, ಅವರ ಆಶೀರ್ವಾದ, ನಾಡಿನ ಜನರ ಆಶೀರ್ವಾದದಿಂದ ಆರೋಗ್ಯವಾಗಿದ್ದೇನೆ. ಧೈರ್ಯವಾಗಿ ಹೇಳಿ ಈ ಬಾರಿ ಜನತಾದಳ ಸರ್ಕಾರ ಬರಲಿದೆ. ಬಿಜೆಪಿ ಜೊತೆಯಲ್ಲಿ ಹೋಗೋಣ, ನಾವು ತಪ್ಪು ಮಾಡೋದು ಬೇಡ. ನಾವು ತಗ್ಗಿಬಗ್ಗಿ ನಡೆಯೋಣ, ಮುಂದೇನು ಆಗತ್ತೋ ಭಗವಂತನ ಇಚ್ಚೆ ಎಂದರು. ಜೆಡಿಎಸ್ ಮುಗಿದು ಹೋಗಿದೆ ಬನ್ನಿ ನಮ ಜೊತೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಇಂತಹ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಇಲ್ಲಿ ಜನ ಸೇರಿರುವುದು ನೋಡಿದರೆ ಅವರಿಗೆ ಇಂದು ಉತ್ತರ ಸಿಕ್ಕಿದೆ. ಬಿಜೆಪಿ-ಜೆಡಿಎಸ ಮೈತ್ರಿಯಲ್ಲಿ ಗೊಂದಲ ಇಲ್ಲ. ಸೀಟ್ ತರೋದು ನನ್ನ ಜವಾಬ್ದಾರಿ. ಕ್ಷೇತ್ರ ಗಟ್ಟಿ ಮಾಡಿಕೊಳ್ಳಿ, ಎಲ್ಲವೂ ಕೇಂದ್ರದಲ್ಲಿ ನಿರ್ಧಾರವಾಗುತ್ತದೆ ಎಂದು ಅವರು ಹೇಳಿದರು.
ಅನಿವಾರ್ಯವಾಗಿ ನಾನು ಕೇಂದ್ರ ಸಚಿವನಾಗಿ ಹೋಗಿದ್ದೇನೆ. ಪಕ್ಷ ಸಂಘಟನೆ ಕುಂಟಿತ ಆಗಿದೆ. ಪಕ್ಷ ಉಳಿಸಿ ಬೆಳೆಸಲು ಛಲ ಇಟ್ಟುಕೊಂಡು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೊರಟಿದ್ದಾರೆ. ನಾನೇನು ಪಕ್ಷ ಸಂಘಟನೆ ಮಾಡು ಎಂದಿಲ್ಲ. ಮೊದಲು ಕ್ಷೇತ್ರಕ್ಕೆ ಕರೆದಾಗ ಬರಲು ಹಿಂದೇಟು ಹಾಕುತ್ತಿದ್ದರು. ಈಗ ನಿಖಿಲ್ ಖುದ್ದಾಗಿ ನಿಮ ಕ್ಷೇತ್ರಕ್ಕೆ ಬರುತ್ತಿದ್ದಾರೆ ಎಂದು ಅವರು ತಿಳಿಸಿದರು.
ಜೆಡಿಎಸ್ ಅನ್ನು ಕುಟುಂಬದ ಪಕ್ಷ ಎನ್ನುತ್ತೀರಾ? ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇನ್ನಿತರರ ಮನೆ ಮುಂದೆ ಬಡವರು ಬರ್ತಾರಾ?
ಗೆದ್ದಾಗ ಹಿಗ್ಗಿಲ್ಲ, ಸೋತಾಗ ಕುಗ್ಗಿಲ್ಲ. ಕಾಂಗ್ರೆಸನ್ನು ಸಂಪೂರ್ಣ ಮನೆಗೆ ಕಳಿಸುವವರೆಗೆ ವಿರಮಿಸಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.ನಾನು ಕೇಂದ್ರದಲ್ಲಿ ಉಕ್ಕಿನ ಮಂತ್ರಿ ಆಗಿರಬಹುದು.ಸೂಟುಬೂಟು ತೊಟ್ಟವರು ನನ್ನ ಜೆಪಿ ನಗರದ ಮನೆಗೆ ಬರಲ್ಲ. ಆಸ್ಪತ್ರೆ ಕಷ್ಟ, ಸಂಸಾರ ಕಷ್ಟ, ಉದ್ಯೋಗ ಕೇಳಿ ಬರೋರೇ ಹೆಚ್ಚು. ಇಂಥವರು ಡಿಕೆಶಿ ಮನೆ ಹತ್ತಿರ ಹೋಗಲ್ಲ. ನಮ್ಮದು ಏಳು ಕೋಟಿ ಜನರ ಪಕ್ಷ. ಅಧಿಕಾರದಲ್ಲಿ ಇರಲಿ ಬಿಡಲಿ ಜನರ ಪಕ್ಷದ ಇದು ಎಂದರು.
ಸಿದ್ದರಾಮಯ್ಯ ಕೇಂದ್ರದ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ಗೆ ಪತ್ರ ಬರೆದು ಮಾವಿಗೆ ಬೆಂಬಲ ಬೆಲೆ ಕೊಡಿ ಎಂದು ಕೇಳಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಬೆಂಬಲ ನೀಡಲು 5 ಕೋಟಿ ರೂ. ನೀಡಿದ್ದೆ. ಜೆಡಿಎಸ್ಗೂ ಕಾಂಗ್ರೆಸ್ಗೂ ಇದೇ ವ್ಯತ್ಯಾಸ ಇರುವುದು. 2006ರಲ್ಲಿ ಸಿಎಂ ಆಗಿದ್ದಾಗ ದೆಹಲಿಗೆ ಹೋಗಿದ್ದೆ, ಟಮೋಟೋ ಬೆಳೆಗಾರರು ದೆಹಲಿಗೆ ಬಂದಿದ್ದರು, ಅಲ್ಲೇ ಅವರ ಸಮಸ್ಯೆ ಬಗೆಹರಿಸಿದೆ. ನಿನ್ನೆ ಸಿಎಂ, ಡಿಸಿಎಂ ಆರೋಗ್ಯ ಆವಿಷ್ಕಾರ ಕಾರ್ಯಕ್ರಮ ಮಾಡಿದ್ದಾರೆ. ಇವರ ಯೋಗ್ಯತೆಗೆ ವೈದ್ಯರನ್ನು ಕೊಡಿ ಅಂದರೆ ಆಸ್ಪತ್ರೆ ಕಟ್ಟಿ ಏನು ಮಾಡುತ್ತೀರಿ? ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಾಡಿ ಅಂತಿದ್ದಾರೆ. ಖರ್ಗೆಯವರು ನಲವತ್ತು ವರ್ಷ ಶಾಸಕರಾಗಿದ್ದರು. 20 ವರ್ಷ ಮಂತ್ರಿಯಾಗಿದ್ದರು.ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಾಡೋದಿರಲಿ, ಗುರುಮಿಠ್ಕಲ್ಗೆ ಖರ್ಗೆಯವರು ಏನು ಮಾಡಿದ್ದಾರೆ ಹೇಳಲಿ ಎಂದು ಖಾರವಾಗಿ ಪ್ರಶ್ನಿಸಿದರು.
ಬೆಂಗಳೂರನ್ನು ಸಿಂಗಾಪುರ ಮಾಡುತ್ತಾರಂತೆ, ನೋಡಿದ್ದೇವಲ್ಲ ಸಾಯಿ ಲೇಔಟ್ ಪರಿಸ್ಥಿತಿ ಏನಾಗಿತ್ತು? ಇದೇನಾ ಸಿಂಗಾಪುರ ಅಂದರೆ? ಈ ಸರ್ಕಾರದ ಬಗ್ಗೆ ಎಷ್ಟು ಹೇಳಿದರೂ ಸಾಲಲ್ಲ. ಈ ಸರ್ಕಾರದ ಕೆಲಸ ಬಹಳ ನೋಡಿದ್ದೇವೆ. ಎಷ್ಟು ಜನರಿಗೆ ಕೆಲಸ ಕೊಟ್ಟಿದ್ದಾರೆ? ಇವರು ವಿಧಾನಸೌಸದ ಮೆಟ್ಟಿಲಿಗೆ ಮಾತ್ರ ಸಿಎಂ ಅಂತೆ ಎಂದು ವ್ಯಂಗ್ಯವಾಡಿದರು.
ನಾನು ವಿಧಾನಸೌಧದಲ್ಲಿ ಇದ್ದರೆ ಚೆನ್ನಾಗಿತ್ತು, ಕೇಂದ್ರದಲ್ಲಿ ಮಂತ್ರಿಯಾಗಿದ್ದೇನೆ. ಎಂತೆಂಥ ಸಮಸ್ಯೆಗಳಿವೆ? ಕಾವೇರಿ ಆರತಿಗೆ 92 ಕೋಟಿ ರೂ. ಏನಕ್ಕಪ್ಪ? ಇವರ ಮುಖಕ್ಕೆ ಮಂಗಳಾರತಿ ಎತ್ತೋಕ್ಕಾ ಆ ಹಣ? ಎಂದು ಆಕ್ರೋಶ ವ್ಯಕ್ತಪಡಿಸಿದರು.