ಹಾಸನ,ಫೆ.25- ಡಿಸಿ ಖಾತೆಗೆ ಸರ್ಕಾರದಿಂದ ಹಾಕಿರುವ ಹಣ ಜಿಲ್ಲಾ ಅಭಿವೃದ್ಧಿಗೆ ಬಿಡುಗಡೆ ಮಾಡುತ್ತಿಲ್ಲ. ಖಜಾನೆಯಲ್ಲಿ ಇಟ್ಟುಕೊಂಡು ಹಣ್ಣಿಟ್ಟು, ಕಾಯಿ ಹೊಡೆದು, ದೀಪ ಹಚ್ಚಿ ಪೂಜೆ ಮಾಡಲಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದು ಹೋಗಿದೆ. ಸರ್ಕಾರ ಜಿಲ್ಲೆಗೆ ಅತಿವೃಷ್ಟಿ ಪರಿಹಾರವಾಗಿ 12 ಕೋಟಿ ಹಣ ಬಿಡುಗಡೆ ಮಾಡಿದೆ. ಜಿಲ್ಲಾಧಿಕಾರಿಗಳು ಅದನ್ನು ಹಾಗೆಯೇ ಇಟ್ಟುಕೊಂಡಿದ್ದಾರೆ. ರಸ್ತೆ ಗುಂಡಿ ಮುಚ್ಚಲು ಜಿಲ್ಲಾಧಿಕಾರಿ ಹಣ ಕೊಡುತ್ತಿಲ್ಲ. ಬಿಡುಗಡೆಯಾಗಿರುವ ಹಣವನ್ನು ಖಜಾನೆಯಲ್ಲಿ ಇಟ್ಟುಕೊಂಡಿದ್ದಾರೆ ಇದೇ ರೀತಿ ಮುಂದುವರೆದರೆ ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರ ಹೋರಾಟ ಮಾಡುತ್ತೇನೆ ಎಂದು ಎಚ್ಚರಿಸಿದರು.
ರಾಜ್ಯ ಸರ್ಕಾರ ಸಂಪೂರ್ಣ ದ್ವೇಷದ ರಾಜಕಾರಣ ಮಾಡುತ್ತಿದೆ. ಜಿಲ್ಲೆಯಲ್ಲಿ ಕಾಮಗಾರಿಗಳೆಲ್ಲ ನಿಂತು ಹೋಗಿದೆ. ಹಾಸನ ವಿಶ್ವವಿದ್ಯಾಲಯ ಮುಚ್ಚಲು ಹೊರಟಿದ್ದಾರೆ.ಮುಚ್ಚುವ ಬದಲು ಅದಕ್ಕೆ ಬೇಕಾದ ಸೌಲಭ್ಯ ಒದಗಿಸಲಿ ಎಂದು ಒತ್ತಾಯಿಸಿದರು.
ಹಾಸನ ಜಿಲ್ಲಾ ಆಸ್ಪತ್ರೆಯಲ್ಲಿ ಲೂಟಿ ನಡೆಯುತ್ತಿದ್ದು ಹಿಮ್ಸ್ ನಿರ್ದೇಶಕರ ಮಾತು ನಡೆಯುತ್ತಿಲ್ಲ. ಹಾಸನ ಕೃಷಿ ಕಾಲೇಜನ್ನು ಮಂಡ್ಯ ಯುನಿವರ್ಸಿಟಿಗೆ ಸೇರಿಸುತ್ತಿದ್ದೀರಿ. ಕೃಷಿ ಕಾಲೇಜು, ಬೆಂಗಳೂರು ಯೂನಿವರ್ಸಿಟಿ ವ್ಯಾಪ್ತಿಯಲ್ಲಿ ಇರಲಿ ಎಂದು ಆಗ್ರಹಿಸಿದ ಅವರು. ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ಹೋರಾಟ ಮಾಡುತ್ತೇನೆ. ಜೆಡಿಎಸ್ ನ ನಾಲ್ಕು ಶಾಸಕರು ಒಟ್ಟಾಗಿ ಇದನ್ನು ಪ್ರಶ್ನೆ ಮಾಡುತ್ತೇವೆ ನಮ್ಮ ಹೋರಾಟಕ್ಕೆ ಬಿಜೆಪಿ ಶಾಸಕರ ಸಹಕಾರವು ಕೋರುತ್ತೇನೆ ಎಂದರು.
ಕುಮಾರಸ್ವಾಮಿಗೆ ಮಂಡ್ಯ ಜಿಲ್ಲೆ ಜನರು ರಾಜಕೀ ಯವಾಗಿ ಶಕ್ತಿ ಕೊಟ್ಟಿದ್ದಾರೆ. ಮಂಡ್ಯಕ್ಕೆ ಏನು ಮಾಡಿದ್ದೇನೆ ಎಂದು ಚರ್ಚೆಗೆ ಬರಲಿ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿಗೆ ರೇವಣ್ಣ ತಿರುಗೇಟು ನೀಡಿದ ಅವರು, ಅಭಿವೃದ್ಧಿ ಮಾಡಲಿ ಇಲ್ಲ, ಜನರು ನಮಗೆ ಶಕ್ತಿ ಕೊಟ್ಟಾಗ ಮಾಡುತ್ತೇವೆ ಎಂದರು.