ಬೆಂಗಳೂರು,ಮೇ.30- ಕನ್ನಡ ನಾಡು ಕಂಡ ಖ್ಯಾತ ಸಾಹಿತಿ, ಕವಿ ಜೀವನ ಸಾರ ತಿಳಿಸಿದ್ದ ಎಲ್ಲರ ಬಾಯಲ್ಲೂ ಸದಾ ಗುನುಗುವ ಗೀತೆ ರಚಿಸಿದ್ದ ಹೆಚ್.ಎಸ್ ವೆಂಕಟೇಶಮೂರ್ತಿ ಅವರು (81) ಇಂದು ವಿಧಿವಶರಾಗಿದ್ದಾರೆ.
ಸಾಹಿತ್ಯ ಲೋಕದ ಅಪೂರ್ವ ರತ್ನ ಎಂದೇ ಕರೆಯಲ್ಪಡುತ್ತಿದ್ದ ಎಚ್ಎಸ್ವಿ ಅವರು ನಾಲ್ವರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಆಗಲಿದ್ದಾರೆ. ಇತ್ತೀಚೆಗೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಗೆ ದಾಖಲಾಗಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆಂದು ಕುಟುಂಬ ಮೂಲಗಳು ತಿಳಿಸಿವೆ.
ಮೂಲತಃ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಗ್ರಾಮದ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದ ಹೆಚ್.ಎಸ್ವಿ ಮೂವತ್ತು ವರ್ಷಗಳ ಕಾಲ ಗ್ರಾಮ್ಯ ಜೀವನ ನಡೆಸಿ ನಂತರ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಮ್.ಎ ಪದವಿ ಪಡೆದರು ಅಪಟ್ಟ ಹಳ್ಳಿ ಸಗಡಿನ ಮೇರು ಪ್ರತಿಭೆ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ಸೇವೆ ಆರಂಭಿಸಿದ ನಂತರ ಕನ್ನಡದಲ್ಲಿ ಕಥನ ಕವನಗಳು ಎಂಬ ಮಹಾಪ್ರಬಂಧಕ್ಕೆ ಪಿಚ್ ಡಿ ಪದವಿ ಪಡೆದಿದ್ದರು.
2000ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದರು. ಕನ್ನಡದಲ್ಲಿ 100ಕ್ಕೂ ಹೆಚ್ಚು ಕೃತಿಗಳನ್ನು ಬರೆದಿರುವ ಅವರು, ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ ಸೇರಿದಂತೆ ಹಲವು ಪ್ರಕಾರಗಳಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ.ಜೊತೆಗೆ ಮಕ್ಕಳಿಗಾಗಿ ಕವಿತೆ, ನಾಟಕ, ಕಥೆಗಳನ್ನು ಬರೆದಿದ್ದಾರೆ. ಇವರು ಅನುವಾದಿಸಿದ ಕಾಳಿದಾಸನ ಋತುಸಂಹಾರ ಕಾವ್ಯಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕಾರವನ್ನು ನೀಡಿ ಗೌರವಿಸಿದೆ.
85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಇವರು ರಾಜ್ಯೋತ್ಸವ ಪ್ರಶಸ್ತಿ, ಆಕಾಶವಾಣಿ ರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಲಭಿಸಿವೆ. ಯಾವುದೇ ಬಾವಗೀತೆ ಕಾರ್ಯಕ್ರಮದಲ್ಲಿ ಹೆಚ್ಎಸ್ವಿ ಬಾವಪೂರ್ಣ ಹಾಡು ವಿಜೃಂಬಿಸುತ್ತಿತ್ತು. ಕನ್ನಡ ಚಿತ್ರರಂಗದಲ್ಲೂ ತನ್ನ ಛಾಪು ಮೂಡಿಸಿದ ಅವರು ಚಿನ್ನಾರಿಮುತ್ತ, ಕೊಟ್ರೇಶಿ ಕನಸು, ಅಮೇರಿಕಾ ಅಮೇರಿಕಾ, ಹಾಗೂ ಇತ್ತೀಚಿನ ಕಿರಿಕ್ ಪಾರ್ಟಿ ಮುಂತಾದ ಜನಪ್ರಿಯ ಚಲನಚಿತ್ರಗಳಲ್ಲಿ ಇವರು ಹಾಡು, ಸಂಭಾಷಣೆ ರಚಿಸಿದರು.
ಕಿರುತೆರೆಯಲ್ಲಿ ಹೊಸ ದಾಖಲೆ ನಿರ್ಮಿಸಿದ ಮುಕ್ತ, ಮಹಾಪರ್ವ, ಧಾರಾವಾಹಿಗಳ ಶೀರ್ಷಿಕೆ ಗೀತೆ ರಚಿಸಿದ್ದರು. ಎಚ್ಎಸ್ವಿ ಅವರ ಸಾಹಿತ್ಯವೂ ಭಾವಾನಾತ್ಮಕ, ಗ್ರಾಮೀಣ ಬದುಕಿನ ಚಿತ್ರಣ, ಭಾಷೆ ಸರಳತೆ ಮತ್ತು ಆಳವಾದ ಅರ್ಥದಿಂದ ಸಮೃದ್ಧವಾಗಿತ್ತು. ಅವರ ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. |