Monday, June 16, 2025
Homeರಾಜ್ಯಜೆಡಿಎಸ್ ಪಕ್ಷವನ್ನು ಮುಳಗಿಸುವ ಮಹಾನುಭಾವರು ಹುಟ್ಟಲು ಸಾಧ್ಯವಿಲ್ಲ : ಗುಡುಗಿದ ಎಚ್‌ಡಿಡಿ

ಜೆಡಿಎಸ್ ಪಕ್ಷವನ್ನು ಮುಳಗಿಸುವ ಮಹಾನುಭಾವರು ಹುಟ್ಟಲು ಸಾಧ್ಯವಿಲ್ಲ : ಗುಡುಗಿದ ಎಚ್‌ಡಿಡಿ

ಬೆಂಗಳೂರು,ಜೂ.15- ಜೆಡಿಎಸ್‌‍ ಪಕ್ಷವನ್ನು ಮುಗಿಸುತ್ತೇವೆ ಎಂಬ ಮಹಾನುಭಾವರು ಎಂದಿಗೂ ಹುಟ್ಟಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಇಂದಿಲ್ಲಿ ಗುಡುಗಿದರು.
ಜೆ.ಪಿ.ಭವನದಲ್ಲಿಂದು ನಡೆದ ಜೆಡಿಎಸ್‌‍ ಸದಸ್ಯತ್ವ ನೋಂದಣಿ ಮಿಸ್ಡ್‌ಕಾಲ್‌ ಅಭಿಯಾನ ಜನರೊಂದಿಗೆ ಜನತಾದಳ ಸಂಘಟನಾ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂಘಟನಾ ಪ್ರವಾಸ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊರಾರ್ಜಿ ದೇಸಾಯಿಯವರು ಈ ಪಕ್ಷವನ್ನು ನನ್ನ ಕೈಗೆ ಕೊಟ್ಟರು. ಅನಂತರ ಜನತಾದಳ ವಿಭಜನೆಯಾದರೂ ಈ ಪಕ್ಷ ಉಳಿದಿದೆ. ನನ್ನ ಅನಂತರವೂ ಉಳಿಯಲಿದೆ ಎಂದು ಹೇಳಿದರು.

ಹಿಂದಿನ ಸೋಲು ಮುಂದಿನ ಗೆಲುವಿಗೆ ಬುನಾದಿಯಾಗಲಿದೆ ಎಂದ ಅವರು, ಇಡೀ ಭಾರತದಲ್ಲಿ ಪ್ರಧಾನಿ ಮೋದಿಯವರಿಗೆ ಸರಿಸಾಟಿಯಾಗಿ ನಿಲ್ಲುವ ವ್ಯಕ್ತಿ ಯಾರೂ ಇಲ್ಲ, ಯಾವ ಪಕ್ಷದಲ್ಲೂ ಇಲ್ಲ, ದೇಶದ ಪ್ರಧಾನಿಯಾಗಿ 11 ವರ್ಷದಿಂದಲೂ ಮುನ್ನಡೆಸಿ ವಿಶ್ವನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಪ್ರಧಾನಿ ಅವರು ಮುನ್ನಡೆಸುತ್ತಿರುವ ರಾಷ್ಟ್ರೀಯ ಪಕ್ಷವಾದ ಬಿಜೆಪಿಯೊಂದಿಗೆ ನಮ ಪಕ್ಷ ಸಂಬಂಧ ಇಟ್ಟುಕೊಂಡಿದೆ ಎಂದರು.

ನೆರೆಯ ಆಂಧ್ರಪ್ರದೇಶದಲ್ಲಿ ತೋರಿಸಿದ ಕಾಳಜಿಯನ್ನು ಕರ್ನಾಟಕದಲ್ಲೂ ತೋರಬೇಕು. ಅಲ್ಲಿನ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಕುಮಾರಸ್ವಾಮಿ ಮುಂದಾಗಿದ್ದಾರೆ. ನಮ ರಾಜ್ಯದಲ್ಲಿ ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಎಚ್‌ಎಂಟಿ ಕಾರ್ಖಾನೆ, ಎಚ್‌ಎಎಲ್‌ನಂತಹ ಸಂಸ್ಥೆಗಳಿವೆ. ರಾಜ್ಯಸರ್ಕಾರ ಕೇಂದ್ರಸರ್ಕಾರದೊಂದಿಗೆ ಸೂಕ್ತ ಸಹಕಾರ ನೀಡಬೇಕು ಎಂದು ಹೇಳಿದರು.
ಪ್ರಾದೇಶಿಕ ಪಕ್ಷವಾದ ಜೆಡಿಎಸ್‌‍ಗೆ ಶಕ್ತಿಯನ್ನು ಹೆಚ್ಚಿಸುವ ಹೊಣೆಗಾರಿಕೆ ಜೆಡಿಎಸ್‌‍ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ಬಾಬು, ಮಾಜಿ ಸಚಿವ ವೆಂಕಟರಾವ್‌ ನಾಡಗೌಡ, ಜೆಡಿಎಸ್‌‍ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರ ಮೇಲಷ್ಟೇ ಇಲ್ಲ. ಎಲ್ಲಾ ಶಾಸಕರೂ, ಮಾಜಿ ಶಾಸಕರು, ಜಿಲ್ಲಾ ಮತ್ತು ತಾಲ್ಲೂಕು ಘಟಕದ ಅಧ್ಯಕ್ಷರು, ವಿವಿಧ ಭಾಗಗಳ ಮುಖ್ಯಸ್ಥರ ಮೇಲಿದೆ ಎಂದರು.

ಪಂಚರತ್ನ ಹಾಗೂ ಜನತಾ ಜಲಧಾರೆ ಕಾರ್ಯಕ್ರಮದ ಹೆಸರಿನಲ್ಲಿ ಒಂದು ವರ್ಷ ಹೋರಾಟ ಮಾಡಲಾಯಿತು. 25 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಲಾಯಿತು. ಆದರೂ ಕೇವಲ 2 ಸಾವಿರ ರೂ. ಗ್ಯಾರಂಟಿಗೆ ಮನಸೋತು ರಾಜ್ಯದ ಶಾಶ್ವತ ಅಭಿವೃದ್ಧಿಗೆ ದೊಡ್ಡ ಪೆಟ್ಟು ಬಿದ್ದಿದೆ. ರಾಜ್ಯಾದ್ಯಂತ ನಾಳೆಯಿಂದ ಪ್ರವಾಸ ಹಮಿಕೊಳ್ಳಲಾಗುತ್ತದೆ. ಆಗ ಆಯಾ ಜಿಲ್ಲೆಯ ಮುಖಂಡರು, ಕಾರ್ಯಕರ್ತರು ಪಕ್ಷ ಸಂಘಟನೆಗೆ ಒತ್ತು ನೀಡಬೇಕೆಂದು ಹೇಳಿದರು.

ಮಹಿಳಾ ಮೀಸಲಾತಿ ಮಸೂದೆ ಲೋಕಸಭೆ, ರಾಜ್ಯಸಭೆಗಳೆರಡರಲ್ಲೂ ಅಂಗೀಕಾರವಾಗಿದೆ. ಮಹಿಳೆಯರಿಗೆ 78 ರಿಂದ 80 ಶಾಸಕ ಸ್ಥಾನಗಳು ದೊರೆಯಲಿವೆ. ಹೀಗಾಗಿ ಮಹಿಳೆಯರ ಜವಾಬ್ದಾರಿಯು ಪಕ್ಷ ಸಂಘಟನೆಯಲ್ಲಿ ಹೆಚ್ಚಿದೆ. ಹಿಂದಿನ ಸೋಲಿಗೆ ಎದೆಗುಂದದೆ ಧೈರ್ಯದಿಂದ ಪಕ್ಷ ಸಂಘಟನೆ ಮಾಡಬೇಕು. ನನಗೀಗ 93 ವರ್ಷ ನಡೆಯುತ್ತಿದ್ದು, ಕಾಲು ನೋವು ಮಾತ್ರ ಇದೆ. ಬುದ್ಧಿಗೆ ತೊಂದರೆ ಇಲ್ಲ. ಮರೆವು ಬಂದಿಲ್ಲ. ಮನೆಗೆ ಯಾರು, ಎಷ್ಟೊತ್ತಿಗೆ ಬಂದರೂ ತಿರಸ್ಕಾರ ಮನೋಭಾವದಿಂದ ನೋಡಿಲ್ಲ, ನೋಡುವುದೂ ಇಲ್ಲ. ಪಕ್ಷ ಸಂಘಟನೆಗಾಗಿ ಎಲ್ಲಿಗೆ ಬೇಕಾದರೂ ಕರೆಯಿರಿ ಬರುತ್ತೇನೆ ಎಂದು ಅವರು ಹೇಳಿದರು.
ಕುಟುಂಬಕ್ಕೆ ಸೀಮಿತವಾದ ಪಕ್ಷ ಎಂಬುದನ್ನು ಅಲ್ಲಗಳೆದ ಅವರು, ದೇಶಕ್ಕೆ 2ನೇ ಸ್ವಾತಂತ್ರ್ಯ ತಂದುಕೊಟ್ಟ ಜಯಪ್ರಕಾಶ್‌ ನಾರಾಯಣ್‌ ಅವರ ಹೆಸರನ್ನು ಪಕ್ಷದ ಕಚೇರಿಗೆ ಇಡಲಾಗಿದೆ. ದೇಶದಲ್ಲಿ ಎಲ್ಲಿಯೂ ಅವರ ಹೆಸರನ್ನಿಟ್ಟಿಲ್ಲ ಎಂದರು.

ಸಮಾವೇಶದಲ್ಲಿ ಜೆಡಿಎಸ್‌‍ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌‍ ಶಾಸಕಾಂಗ ಪಕ್ಷದ ಶಾಸಕ ಸಿ.ಬಿ.ಸುರೇಶ್‌ಬಾಬು, ಜೆಡಿಎಸ್‌‍ ಯುವಘಟಕದ ಅಧ್ಯಕ್ಷ ನಿಖಿಲ್‌ಕುಮಾರಸ್ವಾಮಿ, ಮಾಜಿ ಸಚಿವರಾದ ಲೀಲಾದೇವಿ ಆರ್‌.ಪ್ರಸಾದ್‌, ಎಚ್‌.ಕೆ.ಕುಮಾರಸ್ವಾಮಿ, ಆಲ್ಕೋಡ್‌ ಹನುಮಂತಪ್ಪ, ಸಿ.ಎಸ್‌‍.ಪುಟ್ಟರಾಜು, ವೆಂಕಟರಾವ್‌ನಾಡಗೌಡ, ಮಾಜಿ ಸಂಸದ ಕುಪೇಂದ್ರ ರೆಡ್ಡಿ, ಶಾಸಕರಾದ ಶಾರದಾ ಪೂರ್ಯ ನಾಯಕ್‌, ಎಂ.ಟಿ.ಕೃಷ್ಣಪ್ಪ, ಜವರಾಯಿಗೌಡ, ಟಿ.ಎ.ಶರವಣ, ಶರಣಗೌಡ ಕಂದಕೂರ್‌, ಮಾಜಿ ಶಾಸಕರಾದ ಚೌಡರೆಡ್ಡಿ, ಕೆ.ಎ.ತಿಪ್ಪೇಸ್ವಾಮಿ, ಸುರೇಶ್‌ಗೌಡ , ರಮೇಶ್‌ಗೌಡ, ವೀರಭದ್ರಯ್ಯ ಮುಂತಾದವರು ಪಾಲ್ಗ್ಗೊಂಡಿದ್ದರು.

RELATED ARTICLES

Latest News