ಹಾಸನ, ಜೂ.28 – ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ವತಃ ಆಟೋ ಚಲಾಯಿಸಿಕೊಂಡೇ ಆಸ್ಪತ್ರೆಗೆ ಸೇರಿದ್ದ ಚಾಲಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಸಿದ್ದೇಶ್ವರ ನಗರದಲ್ಲಿ ನಡೆದಿದೆ.ಗೋವಿಂದ(37) ಮೃತಪಟ್ಟವರು.
ಇಂದು ಬೆಳಿಗ್ಗೆ 7 ಗಂಟೆ ಸುಮಾರಿನಲ್ಲಿ ಆಟೋ ಓಡಿಸುವಾಗಲೇ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಆ ನೋವಿನಲ್ಲೇ ಆಟೋ ಚಲಾಯಿಸಿಕೊಂಡು ಜಿಲ್ಲಾಸ್ಪತ್ರೆಗೆ ತೆರಳಿದ್ದರು.ವೈದ್ಯರು ತಪಾಸಣೆ ನಡೆಸುವಷ್ಟರಲ್ಲೇ ಚಾಲಕ ಗೋವಿಂದ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಳೆದ ಒಂದು ತಿಂಗಳ ಅವಧಿಯಲ್ಲೇ ಜಿಲ್ಲೆಯಲ್ಲಿ ಒಟ್ಟು 17 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳಿಸಿದೆ.
ಅದರಲ್ಲೂ ಬಾಳಿ ಬದುಕಬೇಕಾದ ಯುವಕ-ಯುವತಿಯರು, ಮಧ್ಯವಯಸ್ಸಿನಲ್ಲೇ ಈ ರೀತಿಯ ಹೃದಯಾಘಾತದಿಂದ ತಮ್ಮ ಬಾಳಪಯಣ ಮುಗಿಸುತ್ತಿರುವುದು ಪೋಷಕರನ್ನು ದಿಗ್ಧಾಂತಗೊಳಿಸಿದೆ.
ಹೃದಯಾಘಾತಕ್ಕೆ ಕಾರಣವೇನೆಂಬುದು ಯಕ್ಷಪ್ರಶ್ನೆಯಾಗಿದ್ದು, ಜಿಲ್ಲೆಯ ವೈದ್ಯರು ನಿರಂತರ ಅಧ್ಯಯನದಲ್ಲಿ ತೊಡಗಿದ್ದಾರೆ. ಇದು ವೈದ್ಯಲೋಕಕ್ಕೆ ಸವಾಲಾಗಿದ್ದು, ಮಧ್ಯವಯಸ್ಕರೇ ದುರಂತ ಅಂತ್ಯ ಕಾಣುತ್ತಿರುವುದರ ಮೂಲ ಏನೆಂದು ಪತ್ತೆ ಹಚ್ಚಬೇಕಾಗಿದೆ.
ಒತ್ತಡದ ಜೀವನ, ಆಹಾರಶೈಲಿ, ಬದಲಾದ ಜೀವನ ಕ್ರಮವೇ ಹೃದಯಾಘಾತಕ್ಕೆ ಕಾರಣವೆಂದು ಕೆಲವರು ಅಭಿಪ್ರಾಯಪಟ್ಟಿದ್ದು, ಯುವಜನತೆ ಆದಷ್ಟು ಆರೋಗ್ಯದತ್ತ ಗಮನ ಹರಿಸಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ.
- ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಬಸ್, ತಪ್ಪಿದ ಅಪಾಯ
- ದತ್ತಾತ್ರೇಯ ಹೊಸಬಾಳೆ ಹೇಳಿಕೆ ಅಪ್ರಸ್ತುತ : ಗೃಹಸಚಿವ ಪರಮೇಶ್ವರ್
- ಕೋಡಿಶ್ರೀಗಳ ಚಿನ್ನಾಭರಣವಿದ್ದ ಬ್ಯಾಗ್ಗೆ ಕನ್ನ ಹಾಕಿದ್ದ ಖದೀಮನ ಬಂಧನ
- ಸರ್ ಸಿ.ವಿ.ರಾಮನ್ನಗರದಲ್ಲಿ ಕೆಂಪೇಗೌಡ ಉದ್ಯಾನವನ
- ಬಿಎಂಟಿಸಿ ನಿರ್ವಾಹಕರ ವಿರುದ್ಧ 3500 ಪ್ರಕರಣ ದಾಖಲು