Tuesday, June 17, 2025
Homeರಾಜ್ಯಭಾರಿ ಮಳೆಗೆ ಜಲಾಶಯಗಳ ಒಳ ಹರಿವು ಹೆಚ್ಚಳ: ನಾಳೆಯಿಂದ ಮಳೆ ಪ್ರಮಾಣ ಇಳಿಕೆ

ಭಾರಿ ಮಳೆಗೆ ಜಲಾಶಯಗಳ ಒಳ ಹರಿವು ಹೆಚ್ಚಳ: ನಾಳೆಯಿಂದ ಮಳೆ ಪ್ರಮಾಣ ಇಳಿಕೆ

ಬೆಂಗಳೂರು, ಜೂ.17- ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಕೆಲವು ಭಾಗಗಳಲ್ಲಿ ಕಳೆದ 8-10 ದಿನಗಳಿಂದ ಆರ್ಭಟಿಸುತ್ತಿರುವ ಮುಂಗಾರು ಮಳೆ ಇನ್ನೂ ಎರಡು ದಿನ ಮುಂದುವರೆಯಲಿದೆ. ಆದರೆ, ನಾಳೆಯಿಂದ ಮಳೆಯ ಪ್ರಮಾಣ ಇಳಿಮುಖವಾಗುವ ಮುನ್ಸೂಚನೆಗಳಿವೆ. ಮುಂಗಾರು ಚುರುಕಾಗಿ ಮತ್ತೆ ಆರ್ಭಟಿಸುತ್ತಿರುವ ಹಿನ್ನೆಲೆಯಲ್ಲಿ ನದಿಗಳ ನೀರಿನ ಮಟ್ಟ ಗಣನೀಯವಾಗಿ ಏರಿಕೆ ಕಂಡಿದ್ದು, ಜಲಾಶಯಗಳ ಒಳಹರಿವು ಹೆಚ್ಚಾಗಿಗೆ. ಜಲಪಾತಗಳಲ್ಲಿ ಜೀವಕಳೆ ತುಂಬಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ. ಕೃಷ್ಣಾ, ಕಾವೇರಿ ಕಣಿವೆಯ ಪ್ರಮುಖ ನದಿಗಳ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಏರತೊಡಗಿದೆ.

ಮಲೆನಾಡು ಭಾಗದಲ್ಲಿ ಇನ್ನೆರಡು ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಜಲಾಶಯಗಳ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬರಲಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ಉಡುಪಿ, ಶಿವಮೊಗ್ಗ, ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಹಾವೇರಿ, ಮೈಸೂರು, ದಾವಣಗೆರೆ ಜಿಲ್ಲೆಗಳಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗಿದೆ. ಕಾರ್ಕಳ ತಾಲ್ಲೂಕಿನ ಪಲ್ಲಿ ಗ್ರಾಮ ಪಂಚಾಯ್ತಿಯಲ್ಲಿ 230 ಮಿ.ಮೀ.ನಷ್ಟು ಭಾರಿ ಮಳೆಯಾಗಿದೆ.

ಹಾಸನ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದ್ದು, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆ ಬಿದ್ದಿದೆ. ಉಳಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಚದುರಿದಂತೆ ಕೆಲವೆಡೆ ಮಾತ್ರ ಹಗುರದಿಂದ ಸಾಧಾರಣ ಮಳೆಯಾಗಿದೆ. ಜಲ ವಿದ್ಯುತ್‌ ಉತ್ಪಾದಿಸುವ ಲಿಂಗನಮಕ್ಕಿ, ಸೂಪಾ, ವಾರಾಹಿ ಜಲಾಶಯಗಳಿಗೆ ಒಟ್ಟು 74 ಸಾವಿರ ಕ್ಯುಸೆಕ್‌್ಸ ಅಧಿಕ ಒಳಹರಿವು ಇದೆ. ಕಾವೇರಿ ಕಣಿವೆಯ ಹಾರಂಗಿ ಹಾಗೂ ಕಬಿನಿ ಜಲಾಶಗಳ ಒಳಹರಿವು ಹೆಚ್ಚಾಗಿರುವ ಪರಿಣಾಮ ಹೊರ ಹರಿವನ್ನು ಹೆಚ್ಚಿಸಲಾಗಿದೆ. ಹಾರಂಗಿ ಜಲಾಶಯ ಶೇ.72ರಷ್ಟು ಭರ್ತಿಯಾಗಿದ್ದರೆ, ಕಬಿನಿ ಜಲಾಶ ಶೇ.84ರಷ್ಟು ತುಂಬಿದೆ. ಈ ಜಲಾಶಯಕ್ಕೆ ಪ್ರಸ್ತುತ 15 ಸಾವಿರ ಕ್ಯುಸೆಕ್‌್ಸಗೂ ಅಧಿಕ ಒಳಹರಿವು ಇದೆ.

ಶೇ.70ರಷ್ಟು ಭರ್ತಿಯಾಗಿರುವ ಹೇಮಾವತಿ ಜಲಾಶಯಕ್ಕೆ 8 ಸಾವಿರ ಕ್ಯುಸೆಕ್‌್ಸ ಅಧಿಕ ಪ್ರಮಾಣದ ಒಳಹರಿವು ಇದೆ. ಅದೇ ರೀತಿ ಶೇ.66ರಷ್ಟು ನೀರಿನ ಸಂಗ್ರಹವಿರುವ ಕೆಆರ್‌ಎಸ್‌‍ ಜಲಾಶಯಕ್ಕೆ 16 ಸಾವಿರ ಕ್ಯುಸೆಕ್‌್ಸಗೂ ಅಧಿಕ ಪ್ರಮಾಣದ ಒಳ ಹರಿವು ಇದೆ. ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಕೇರಳದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಗಳ ಒಳಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಒಳಹರಿವು ಇದೇ ರೀತಿ ಮುಂದುವರೆದರೆ ಜೂನ್‌ ಅಂತ್ಯದೊಳಗೆ ಪೂರ್ಣ ಪ್ರಮಾಣದಲ್ಲಿ ಈ ಜಲಾಶಯಗಳು ಭರ್ತಿಯಾಗುವುದನ್ನು ತಳ್ಳಿ ಹಾಕುವಂತಿಲ್ಲ.

ಕೃಷ್ಣಾ ಕೊಳ್ಳದ ಭದ್ರಾ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ಆಲಮಟ್ಟಿ, ನಾರಾಯಣಪುರ ಜಲಾಶಯಗಳ ಒಳಹರಿವು ಏರಿಕೆಯಾಗಿದೆ. ಒಟ್ಟಾರೆ ಈ ಜಲಾಶಯಗಳಿಗೆ 60 ಸಾವಿರ ಕ್ಯುಸೆಕ್‌್ಸಗೂ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿದೆ. ಈ ಜಲಾಶಯಗಳಲ್ಲಿ ಶೇ.40ರಷ್ಟು ನೀರು ಸಂಗ್ರಹವಾಗಿದೆ. ರಾಜ್ಯ ಪ್ರಮುಖ ಜಲಾಶಯಗಳಲ್ಲಿ ಕಳೆದ ವರ್ಷ ಇದೇ ಸಂದರ್ಭದಲ್ಲಿ ಕೇವಲ 84.05 ಟಿಎಂಸಿ ಅಡಿಯಷ್ಟು ಮಾತ್ರ ನೀರಿತ್ತು. ಈ ವರ್ಷ174.66 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗಿದೆ.ಮೇನಲ್ಲಿ ಮುಂಗಾರು ಆರಂಭವಾದಾಗ ಇದೇ ರೀತಿ ಭಾರಿ ಮಳೆಯಾಗಿತ್ತು. ಜಲಾಶಯಗಳಿಗೆ ಸಾಕಷ್ಟು ನೀರು ಬಂದಿತ್ತು.

ಕೊಂಕಣ ಭಾಗದಲ್ಲಿ ಮೇಲೈ ಸುಳಿಗಾಳಿ ಉಂಟಾಗಿರುವ ಪರಿಣಾಮ ರಾಜ್ಯದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ಕರಾವಳಿ ಹಾಗೂ ಕರಾವಳಿಗೆ ಹೊಂದಿಕೊಂಡಿರುವ ಜಿಲ್ಲೆಗಳಿಗೆ ಇನ್ನೆರಡು ದಿನಗಳ ಕಾಲ ಭಾರಿ ಮಳೆ ಮುನ್ನೆಚ್ಚರಿಕೆ ನೀಡಲಾಗಿದೆ. ಒಳನಾಡಿನ ಇತರ ಜಿಲ್ಲೆಗಳಲ್ಲಿ ಒಣ ಹವೆ ಇರಲಿದ್ದು, ಕೆಲವೆಡೆ ಮಾತ್ರ ಮಳೆಯಾಗಲಿದೆ ಎಂಬ ಮುನ್ಸೂಚನೆ ನೀಡಲಾಗಿದೆ.

RELATED ARTICLES

Latest News