ಬೆಂಗಳೂರು, ಜೂ.28-ಮಲೆನಾಡು, ಕರಾವಳಿ ಭಾಗದಲ್ಲಿ ಮುಂಗಾರು ಅಬ್ಬರದಿಂದ ಅತೀವೃಷ್ಟಿಯಾಗಿದ್ದರೆ, ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ ಕೊರತೆ ಉಂಟಾಗಿ ಮುಂಗಾರು ಹಂಗಾಮಿನ ಬಿತ್ತನೆ ಸಿದ್ಧತೆಗೆ ಹಿನ್ನಡೆಯಾಗಿದೆ.ಕೇರಳ, ಮಲೆನಾಡು ಹಾಗೂ ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾದ ಪರಿಣಾಮ ಕೃಷ್ಣಾ, ಕಾವೇರಿ, ತುಂಗಭದ್ರಾ ಸೇರಿದಂತೆ ಬಹುತೇಕ ನದಿಗಳು ಮೈದುಂಬಿ ಹರಿಯುತ್ತಿವೆ. ಜೊತೆಗೆ ಜಲಾಶಯಗಳ ಒಳ ಹರಿವು ಹೆಚ್ಚಾಗಿದ್ದು, ನೀರಿನ ಮಟ್ಟ ನಿರಂತರವಾಗಿ ಏರಿಕೆಯಾಗುತ್ತಿದೆ. ಕಾವೇರಿ ಕೊಳ್ಳದ ಕೆ.ಆರ್.ಎಸ್. ಕಬಿನಿ, ಹಾರಂಗಿ, ಹೇಮಾವತಿ ಜಲಾಶಯಗಳು ಭರ್ತಿಯ ಹಂತ ತಲುಪಿವೆ.
ಕಾವೇರಿ ಕೊಳ್ಳದ ಆಲಮಟ್ಟಿ, ನಾರಾಯಣಪುರ, ಭದ್ರಾ, ತುಂಗಭದ್ರಾ ಸೇರಿದಂತೆ ಪ್ರಮುಖ ಜಲಾಶಯಗಳಲ್ಲಿ ಶೇ.50ಕ್ಕಿಂತಲೂ ಹೆಚ್ಚು ನೀರು ತುಂಬಿದೆ. ಕಳೆದ ವರ್ಷಕ್ಕಿಂತ ದುಪ್ಪಟ್ಟು
ನೀರು ಸಂಗ್ರಹಗೊಂಡಿದೆ. ಇದರಿಂದ ಕುಡಿಯುವ ನೀರು ಹಾಗೂ ನೀರಾವರಿ ಆಧರಿತ ಬೆಳೆಗಳಿಗೆ ನೀರಿನ ಕೊರತೆ ನೀಗಿದೆ. ಆದರೆ, ಒಳನಾಡಿನಲ್ಲಿ ಮುಂಗಾರು ದುರ್ಬಲಗೊಂಡಿದ್ದು,
ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.
ಮೋಡ ಕವಿದ ವಾತಾವರಣವಿದ್ದು, ಆಗೊಮ್ಮೆ, ಈಗೊಮ್ಮೆ ಕೆಲವೆಡು ತುಂತುರು ಇಲ್ಲವೆ ಸಾಧಾರಣ ಮಳೆಯಾಗುತ್ತಿದೆ. ಬಲವಾದ ತಂಪಾದ ಮೇಲೆ ಗಾಳಿ ಮಾತ್ರ ಬೀಸುತ್ತಿದ್ದು, ಉತ್ತಮ ಮಳೆಯ ನಿರೀಕ್ಷೆ ಜೂನ್ ತಿಂಗಳಲ್ಲಿ ಹುಸಿಯಾಗಿದೆ. ಮಾರ್ಚ್ನಿಂದ ಮೇವರೆಗಿನ ಪೂರ್ವ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚಾಗಿತ್ತು. ಅಲ್ಲದೆ, ಮೇ ಕೊನೆಯ ವಾರದಲ್ಲಿ ಮುಂಗಾರು ಆಗಮಿಸಿ ಅಧಿಕ ಮಳೆಯಾಗಿತ್ತು.
ಜೂನ್ ಮೊದಲ ವಾರದಿಂದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿದೆ. ಒಳನಾಡಿನ ಒಣಹವೆ ಮುಂದುವರೆದಿದೆ.ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಜೂನ್ ಒಂದರಿಂದ ನಿನ್ನೆವರೆಗೆ ರಾಜ್ಯದಲ್ಲಿ ವಾಡಿಕೆಗಿಂತ ಶೇ.8ರಷ್ಟು ಹೆಚ್ಚು ಮಳೆಯಾಗಿದೆ. ಆದರೆ, ದಕ್ಷಿಣ ಒಳನಾಡಿನಲ್ಲಿ ಶೇ.21ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಹೆಚ್ಚುಕಡಿಮೆ ವಾಡಿಕೆ ಮಳೆಯಾಗಿದೆ. ಈ ಅವಧಿಯಲ್ಲಿ ರಾಜ್ಯದ ವಾಡಿಕೆ ಮಳೆ ಪ್ರಮಾಣ 74.5 ಮಿ.ಮೀ. ಇದ್ದು, 189.2 ಮಿ.ಮೀ.ನಷ್ಟು ಮಳೆ ಬಿದ್ದಿದೆ.
ಕರಾವಳಿಯಲ್ಲಿ 718.8 ಮಿ.ಮೀ. ವಾಡಿಕೆ ಮಳೆಯಾಗಿದ್ದು, 806 ಮಿ.ಮೀ.ನಷ್ಟು ಮಳೆಯಾಗಿದ್ದು, ವಾಡಿಕೆಗಿಂತ ಶೇ.12ರಷ್ಟು ಹೆಚ್ಚು ಮಳೆಯಾಗಿದೆ. ಮಲೆನಾಡಿನಲ್ಲಿ 310.2 ಮಿ.ಮೀ. ವಾಡಿಕೆ ಮಳೆಗೆ 389 ಮಿ.ಮೀ.ನಷ್ಟು ಮಳೆಯಾಗಿದ್ದು, ವಾಡಿಕೆಗಿಂತ ಶೇ.25ರಷ್ಟು ಹೆಚ್ಚಾಗಿದೆ.ಉತ್ತರ ಒಳನಾಡಿನಲ್ಲಿ 91.7 ಮಿ.ಮೀ.ವಾಡಿಕೆ ಮಳೆಗೆ 190.8 ಮಿ.ಮೀ.ನಷ್ಟು ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ 61.5 ಮಿ.ಮೀ.ನಷ್ಟು ವಾಡಿಕೆ ಮಳೆಗೆ ಕೇವಲ 48.7 ಮಿ.ಮೀ.ನಷ್ಟು ಮಳೆಯಾಗಿದೆ. ಜನವರಿಯಿಂದ ಇದುವರೆಗೆ ರಾಜ್ಯದ ವಾಡಿಕೆ ಮಳೆ -ಪ್ರಮಾಣ 294 ಮಿ.ಮೀ. ಆಗಿದ್ದು, 476.7 ಮಿ.ಮೀ.ನಷ್ಟು ಮಳೆ ಬಿದ್ದಿದ್ದು, ವಾಡಿಕೆಗಿಂತ ಶೇ.62ರಷ್ಟು ಅಧಿಕ ಮಳೆಯಾಗಿದೆ.
ಜೂನ್ ತಿಂಗಳಲ್ಲಿ ಇದುವರೆಗೆ ದಾವಣಗೆರೆ ಹೊರತು ಪಡಿಸಿ ದಕ್ಷಿಣ ಒಳನಾಡಿ 10 ಜಿಲ್ಲೆಗಳಲ್ಲಿ ಮಳೆ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಚಾಮರಾಜನಗರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.ಉತ್ತರ ಒಳನಾಡಿನ ಬಳ್ಳಾರಿ, ಕೊಪ್ಪಳ, ರಾಯಚೂರು, ಕಲಬುರಗಿ, ಯಾದಗಿರಿ, ಬೀದರ್, ವಿಜಯಪುರ ಜಿಲ್ಲೆಗಳಲ್ಲಿ ಮಳೆ ಕೊರತೆ ಉಂಟಾಗಿದೆ. ಸದ್ಯಕ್ಕೆ ಒಳನಾಡಿನಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಗಳಿಲ್ಲ.
- ಸರ್ ಸಿ.ವಿ.ರಾಮನ್ನಗರದಲ್ಲಿ ಕೆಂಪೇಗೌಡ ಉದ್ಯಾನವನ
- ಬಿಎಂಟಿಸಿ ನಿರ್ವಾಹಕರ ವಿರುದ್ಧ 3500 ಪ್ರಕರಣ ದಾಖಲು
- ಹಾಸನದಲ್ಲಿ ಏನಾಗ್ತಿದೆ..? : ಒಂದೇ ತಿಂಗಳಲ್ಲಿ 17 ಮಂದಿ ಹೃದಯಾಘಾತದಿಂದ ಸಾವನ್ನಪ್ಪಲು ಕಾರಣವೇನು..?
- ಆರ್ಸಿಬಿ ಕಾಲ್ತುಳಿತ ಪ್ರಕರಣ : 3 ಐಪಿಎಸ್ ಅಧಿಕಾರಿಗಳ ಅಮಾನತನ್ನು ಅಂಗೀಕರಿಸಿದ ಕೇಂದ್ರ
- ಸಂವಿಧಾನದ ಮೂಲ ಆಶಯ ಬದಲಿಸಲು ಇಂದಿರಾ ಗಾಂಧಿ ಸಂಚು ಮಾಡಿದ್ದರು : ಬಿಜೆಪಿ