ಬೆಂಗಳೂರು, ಫೆ.4- ದೆಹಲಿಗೆ ಯಾವುದೇ ನಿಯೋಗ ತೆಗೆದುಕೊಂಡು ಹೋಗುತ್ತಿಲ್ಲ. ಅಂತಹ ರಾಜಕೀಯ ಬೆಳವಣಿಗೆಗಳು ಯಾವುದೂ ಆಗಿಲ್ಲ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಭೇಟಿಯಾಗುತ್ತಾರೆ ಎಂದು ಯಾರು ಸುದ್ದಿ ಹಬ್ಬಿಸಿದ್ದಾರೋ ನನಗೆ ಗೊತ್ತಿಲ್ಲ. ನಾನು ಇಲಾಖೆ ಕೆಲಸಕ್ಕೆ ದೆಹಲಿಗೆ ಹೋಗುತ್ತೇನೆ.
ಹೋಗಲೇ ಬಾರದು ಎಂಬ ನಿಷೇಧದ ಆದೇಶವೇನೂ ಇಲ್ಲ. ಅದರ ಅವಶ್ಯಕತೆ ಇದ್ದಾಗ ಹೋಗುತ್ತೇವೆ ಎಂದರು.
ಚನ್ನಪಟ್ಟಣದಲ್ಲಿ ಸಿಎಂ ಬದಲಾವಣೆ ಹೇಳಿಕೆ ವಿಚಾರವನ್ನು ನಾನು ಫಾಲೋಅಪ್ ಮಾಡಿಲ್ಲ. ಅದರ ಬಗ್ಗೆ ನಾನು ಹೆಚ್ಚು ಮಾತಾಡಲ್ಲ ಎಂದು ಅವರು ತಿಳಿಸಿದರು.ದೆಹಲಿಯ ಕರ್ನಾಟಕ ಭವನ ಉದ್ಘಾಟನೆಗೆ ನಮನ್ನು ಕರೆದರೆ ಹೋಗುತ್ತೇವೆ. ಡಿಸಿಎಂ ಇದ್ದಾಗ ನಾನೇ ಆ ಭವನಕ್ಕೆ ಅಡಿಗಲ್ಲು ಹಾಕಿದ್ದೆ. ಆಹ್ವಾನವಿಲ್ಲದೇ ಹೇಗೆ ಹೋಗೋದು ಎಂದು ಅವರು ಪ್ರಶ್ನಿಸಿದರು.
ರಾಜ್ಯಪಾಲರಿಗೆ ಕಳುಹಿಸಲಾಗಿದೆ: ಮೈಕ್ರೋಫೈನಾನ್್ಸಗಳಿಗೆ ಕಡಿವಾಣ ಹಾಕುವ ಸುಗ್ರೀವಾಜ್ಞೆಯನ್ನು ರಾಜ್ಯಪಾಲರಿಗೆ ಕಳುಹಿಸಲಾಗಿದೆ. ಈ ಹಿಂದೆ ಕಾನೂನಿನಲ್ಲಿ ಶಿಕ್ಷೆ ಮೂರು ವರ್ಷವಿತ್ತು. ಅದನ್ನು ಈಗ 10 ವರ್ಷ ಮಾಡಿದ್ದೇವೆ. ದಂಡವನ್ನು 5ಲಕ್ಷ ರೂ.ಗೆ ಹೆಚ್ಚಿಸಿದ್ದೇವೆ. ಕಿರುಕುಳ ನೀಡುವವರಿಗೆ ಕಾನೂನಿನ ಬಿಸಿ ತಟ್ಟಲೆಂದು ಮಾಡಿದ್ದೇವೆ. ರಾಜ್ಯಪಾಲರು ಬೆಂಗಳೂರಿನಲ್ಲಿ ಇಲ್ಲ.ಅವರು ಇವತ್ತು ಬರುತ್ತಾರೆಯೋ ನೊಡೋಣ. ರಾಜ್ಯಪಾಲರು ಅಂಕಿತವನ್ನು ಹಾಕಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮೈಕ್ರೋಫೈನಾನ್್ಸಗಳು ನ್ಯಾಯಾಲಯಕ್ಕೆ ಹೋಗಬಹುದು. ಇದೇ ಕಾರಣಕ್ಕೆ ಎರಡು ದಿನ ಸುಗ್ರೀವಾಜ್ಞೆ ರಾಜ್ಯಪಾಲರಿಗೆ ಕಳುಹಿಸುವುದು ವಿಳಂಬವಾಯಿತು. ಈಗ ಕಾನೂನಿನ ತೊಡಕುಗಳನ್ನು ಸರಿಪಡಿಸಿದ್ದೇವೆ. ಕಾನೂನಿನ ಸಮಸ್ಯೆ ಎದುರಾಗಲ್ಲ ಎಂದುಕೊಂಡಿದ್ದೇವೆ ಎಂದು ಅವರು ತಿಳಿಸಿದರು.
ತುಮೂಲ್ ಬಗ್ಗೆ ಗುಬ್ಬಿ ಶಾಸಕ ಶ್ರೀನಿವಾಸ್ ಬೇಸರಗೊಂಡಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಾವು ಪ್ರಾಮಾಣಿಕವಾಗಿ ಕೆಲಸ ಮಾಡುವವರು. ನಮಗೂ ಸಮಸ್ಯೆಗಳು ಹೆಚ್ಚಿವೆ. ನಾವೆಲ್ಲ ಸ್ನೇಹಿತರೇ,ಒಂದೇ ಪಕ್ಷದಲ್ಲಿದ್ದೇವೆ. ಇಂಥ ವಿಚಾರವೆಲ್ಲ ರಾಜಕೀಯದಲ್ಲಿ ಬರುತ್ತವೆ. ಅವರ ಜೊತೆ ನಾನು ಮಾತನಾಡ್ತೇನೆ. ಮಾತು ಬಿಡುವಷ್ಟು ರಾಜಕೀಯ ಇಲ್ಲ ಎಂದರು.
ಹಸುಗಳನ್ನು ಕದ್ದವರ ಬಗ್ಗೆ ಸಚಿವ ಮಂಕಾಳು ವೈದ್ಯ ಅವರ ಹೇಳಿಕೆ ಬಗ್ಗೆ ಗೊತ್ತಿಲ್ಲ. ಅದು ಅವರ ವೈಯಕ್ತಿಕ ಹೇಳಿಕೆ. ಯಾವುದೋ ಸಂದರ್ಭದಲ್ಲಿ ಹೇಳಿರುತ್ತಾರೆ ಎಂದು ಅವರು ತಿಳಿಸಿದರು.
ಡಿಜಿಟಲ್ ಮೂಲಕ ಮತಾಂತರಗೊಳಿಸುವ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಆ ವಿಚಾರ ಬಂದರೆ ಕಾನೂನು ಚೌಕಟ್ಟಲ್ಲಿ ಕ್ರಮ ಜರುಗಿಸುತ್ತೇವೆ. ಹಿಂದಿನ ಸರ್ಕಾರ ಮತಾಂತರ ಕುರಿತ ಕಾಯ್ದೆ ತಂದಿತ್ತು. ಅದನ್ನು ವಾಪಸ್ ಪಡೆಯುವ ಕ್ರಮವಾಗುತ್ತಿದೆ ಎಂದರು.
ಎಸ್ಎಸ್ಎಲ್ಸಿ ಪರಿಕ್ಷೆಯಲ್ಲಿ ಹಿಜಾಬ್ಗೆ ಅವಕಾಶ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ, ಈ ಕುರಿತು ನಾವು ಸುದೀರ್ಘ ಚರ್ಚೆ ಮಾಡುತ್ತೇವೆ. ಇನ್ನು ಒಂದು ತಿಂಗಳ ಅವಕಾಶವಿದೆ. ನೋಡೋಣ ಆ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.