ಬೆಂಗಳೂರು,ಮೇ.9– ಭಯೋತ್ಪಾದನೆಗೆ ಸಂಬಂಧಪಟ್ಟಂತೆ ಸ್ಲೀಪರ್ ಸೆಲ್ಗಳು ಸೇರಿದಂತೆ ಇತರ ಸೂಕ್ಷ್ಮ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಹೊಸದಾಗಿ ಯಾವುದೇ ಸಲಹೆ, ಸೂಚನೆ ಹಾಗೂ ಎಚ್ಚರಿಕೆಗಳು ಬಂದಿಲ್ಲ. ಗೃಹ ಇಲಾಖೆಯು ಆರಂಭ ದಿಂದಲೂ ರಾಜ್ಯದಲ್ಲಿ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳಿಗೆ ಎಚ್ಚರಿಕೆಯಿಂದಿರಲು ತಾಕೀತು ಮಾಡಿದೆ.
ಗುಪ್ತದಳದ ಮಾಹಿತಿಯನ್ನು ನಿಖರವಾಗಿ ಕಲೆ ಹಾಕಬೇಕು. ಬೆಂಗಳೂರಿನಲ್ಲಿ ಸ್ಲೀಪರ್ ಸೆಲ್ಗಳಿದ್ದರೆ ಅದನ್ನು ಪತ್ತೆ ಹಚ್ಚಿ ಕೇಂದ್ರ ತನಿಖಾ ಸಂಸ್ಥೆಗಳ ಜೊತೆ ಮಾಹಿತಿ ಹಂಚಿಕೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದರು.
ಈಗಾಗಲೇ ಅಣೆಕಟ್ಟು, ಬೃಹತ್ ಕೈಗಾರಿಕೆಗಳು, ಪ್ರತಿಷ್ಠಿತ ಸಂಸ್ಥೆಗಳು, ವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ಭದ್ರತೆ ಒದಗಿಸಲಾಗಿದೆ. ಹೆಚ್ಚುವರಿ ರಕ್ಷಣೆಯ ಬಗ್ಗೆ ಇಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು.
ಭಯೋತ್ಪಾದಕರು ಗುರಿ ಮಾಡಿದ್ದಾರೋ, ಇಲ್ಲವೋ ಗೊತ್ತಿಲ್ಲ. ಆದರೆ ನಾವಂತೂ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದೇವೆ. ಆಯಾ ಪರಿಷ್ಕರಣೆಯ ಅಧಿಕಾರಿಗಳಿಗೆ ತೀವ್ರ ನಿಗಾ ವಹಿಸಲು ಆದೇಶಿಸಲಾಗಿದೆ ಎಂದರು.