Friday, September 20, 2024
Homeರಾಜ್ಯಪಿಎಸ್‌‍ಐ ಸಾವಿನ ತನಿಖೆಗೆ ಸೂಚನೆ : ಗೃಹಸಚಿವ ಪರಮೇಶ್ವರ್‌

ಪಿಎಸ್‌‍ಐ ಸಾವಿನ ತನಿಖೆಗೆ ಸೂಚನೆ : ಗೃಹಸಚಿವ ಪರಮೇಶ್ವರ್‌

ಬೆಂಗಳೂರು,ಆ.3- ಯಾದಗಿರಿಯ ಪಿಎಸ್‌‍ಐ ಪರಶುರಾಮ್‌ ಅಸಹಜ ಸಾವಿನ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸಿರುವುದಾಗಿ ಗೃಹಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಯ ಪತ್ನಿ ಶ್ವೇತಾ ಅವರ ಆರೋಪವನ್ನು ತನಿಖೆಯಲ್ಲಿ ಪರಿಗಣಿಸುವಂತೆ ಆದೇಶಿಸಲಾಗಿದೆ.

ವರ್ಗಾವಣೆಗಾಗಿ ಸ್ಥಳೀಯ ಶಾಸಕರಿಗೆ 30 ಲಕ್ಷ ರೂ. ಲಂಚ ನೀಡಿದ್ದರು ಎಂದು ಆರೋಪ ಮಾಡಿದ್ದಾರೆ. ಅದು ಆರೋಪ ಮಾತ್ರ. ತನಿಖೆ ನಡೆಯಬೇಕು. ಆರೋಪ ಮಾಡಿದ ತಕ್ಷಣವೇ ಅದು ಸತ್ಯ ಎಂದಾಗಲೀ ಅಥವಾ ಸುಳ್ಳು ಎಂದಾಗಲೀ ಹೇಳಲಾಗುವುದಿಲ್ಲ. ತನಿಖೆ ನಡೆಯಲಿ ಎಂದರು.

ಪರಶುರಾಮ್‌ ಸಾವು ಸಹಜವಾಗಿದೆ. ಆತಹತ್ಯೆ ಅಲ್ಲ. ಮರಣದ ಮುನ್ನ ಬರೆದಿರುವ ಯಾವುದೇ ಪತ್ರಗಳು ದೊರೆತಿಲ್ಲ. ಕುಟುಂಬದ ಸದಸ್ಯರು ವರ್ಗಾವಣೆ ಹಿನ್ನೆಲೆಯಲ್ಲಿ ಒತ್ತಡಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಅದನ್ನು ನಾವು ತಳ್ಳಿಹಾಕುವುದಿಲ್ಲ. ತನಿಖೆ ಮಾಡಲು ಸೂಚಿಸಿದ್ದೇನೆ ಎಂದು ಹೇಳಿದರು.

ಪ್ರಾಥಮಿಕ ಸಾಕ್ಷ್ಯ ಹಾಗೂ ಮಾಹಿತಿ ಕಲೆ ಹಾಕಿದ ಬಳಿಕ ಎಫ್‌ಐಆರ್‌ ದಾಖಲಿಸುತ್ತಾರೆ. ಹಾಗಾಗಿ ವಿಳಂಬವಾಗಿ ಪ್ರಕರಣ ದಾಖಲಿಸಲಾಗುತ್ತಿದೆ ಎಂಬುದು ಸರಿಯಲ್ಲ. ಪ್ರಕರಣದಲ್ಲಿ ಕಾನೂನಿನ ಪಾಲನೆಯನ್ನಷ್ಟೇ ನಾವು ಮಾಡುತ್ತೇವೆ. ಅಧಿಕಾರಿಯ ಸಮುದಾಯ ಅಥವಾ ಜಾತಿಯನ್ನು ನಾವು ಪರಿಗಣಿಸುವುದಿಲ್ಲ. ಬಿಜೆಪಿ ನಾಯಕರು ಆರೋಪ ಮಾಡುವ ವಿಚಾರ ಕುರಿತಂತೆ ತಾವು ಪ್ರತಿಕ್ರಿಯಿಸುವುದಿಲ್ಲ ಎಂದರು.

ಒಂದು ವೇಳೆ ಪ್ರಕರಣದಲ್ಲಿ ಶಾಸಕರು ಭಾಗಿಯಾಗಿದ್ದರೂ ಕೂಡ ಎಫ್‌ಐಆರ್‌ ದಾಖಲಾದ ಬಳಿಕ ತನಿಖೆ ಮುಂದುವರೆಯಲಿದೆ ಎಂದು ತಿಳಿಸಿದರು. ಬಿಜೆಪಿ-ಜೆಡಿಎಸ್‌‍ನ ಪಾದಯಾತ್ರೆಗೆ ಷರತ್ತುಗಳನ್ನು ವಿಧಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯಬಾರದು.

ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಎಚ್ಚರಿಕೆ ನೀಡಲಾಗಿದೆ. ಅವರು ನ್ಯಾಯಾಲಯಕ್ಕೆ ಹೋಗುವ ಮುನ್ನವೇ ನಾವೇ ಅನುಮತಿ ನೀಡುವುದಾಗಿ ಹೇಳಿದ್ದೆವು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿತ್ತು ಎಂದು ತಿಳಿಸಿದರು.

RELATED ARTICLES

Latest News