ಹುಬ್ಬಳ್ಳಿ, ಜೂ. 14- ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಕಾಮಗಾರಿಗಾಗಿ ಚನ್ನಮ ವೃತ್ತದ ಬಳಿಯಿರುವ ಈದ್ಗಾ ಮೈದಾನದ ಆವರಣದ ಗೋಡೆ ಭಾಗಶಃ ತೆರವು ಮಾಡಲಾಗಿದೆ.
ಸ್ವಾಧೀನ ಪ್ರಕ್ರಿಯೆ ಕಾಮಗಾರಿ ತಡರಾತ್ರಿ ಆರಂಭವಾಗಿ ಇಂದು ಬೆಳಗಿನ ಜಾವದವರೆಗೂ ತೆರವು ಮಾಡಿದ್ದಾರೆ.ಮೈದಾನದ ಮಧ್ಯ ಭಾಗದಲ್ಲಿರುವ ಈದ್ಗಾ ಕಟ್ಟಡದ ರಕ್ಷಣೆಗೆ, ತಡೆಗೋಡೆಯ ಸಮೀಪದ ಸುಮಾರು 10-20 ಮೀಟರ್ ಅಂತರದಲ್ಲಿ ತಗಡಿನ ಶೀಟ್ ಅಳವಡಿಸಲಾಗಿದೆ.
ಚನ್ನಮ ವೃತ್ತದಿಂದ ಕೋರ್ಟ್ ವೃತ್ತಕ್ಕೆ ತೆರಳುವಲ್ಲಿನ ಕಬ್ಬಿಣದ ತಡೆಗೋಡೆಯನ್ನು ಗ್ಯಾಸ್ ಕಟರ್ನಿಂದ ತುಂಡು ಮಾಡಿ ತೆರವು ಮಾಡಲಾಗಿದೆ.ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಕಾಮಗಾರಿ ಗುತ್ತಿಗೆ ಪಡೆದ ಝಂಡು ಕಂಪನಿಯ ಅಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ತೆರವು ಕಾರ್ಯಕ್ಕೆ ಮುಂದಾದರು.
ತೆರವು ಕಾರ್ಯಕ್ಕೆ ಅನುಮತಿ ಹಾಗೂ ಭದ್ರತೆ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಹಾನಗರ ಪಾಲಿಕೆಗೆ ಹಾಗೂ ಪೊಲೀಸ್ ಇಲಾಖೆಗೆ 2024ರ ಜುಲೈ 23 ರಂದೇ ಪತ್ರ ಬರೆದು ತಿಳಿಸಿದ್ದರು.
ಯೋಜನೆ ಪ್ರಕಾರ ಚನ್ನಮ ವೃತ್ತದಿಂದ ಕೋರ್ಟ್ ವೃತ್ತದ ಕಡೆಗೆ ಹಾಗೂ ಚನ್ನಮ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ತೆರಳುವ ಈದ್ಗಾ ಮೈದಾನದ ಅಕ್ಕಪಕ್ಕ ಶೇ 10-15ರಷ್ಟು ಭಾಗ ತೆರವು ಆಗಲಿದೆ.
ಮೇಲ್ಸೇತುವೆಗೆ ಕಾಮತ್ ಹೋಟೆಲ್ ಎದುರು ಬೃಹತ್ ಪಿಲ್ಲರ್ಗಳು, ಸಂಗೊಳ್ಳಿ ರಾಯಣ್ಣ ವೃತ್ತದ ಹೈಮಾಸ್ಟ್ ಕಂಬದ ಬಳಿ ಒಂದು ಪಿಲ್ಲರ್ ನಿರ್ಮಾಣವಾಗಲಿದೆ. ಈ ಕಾಮಗಾರಿಗೆ ಉಪನಗರ ಪೊಲೀಸ್ ಠಾಣೆ ಕಟ್ಟಡದ ಶೇ 20ರಷ್ಟು ಭಾಗವೂ ತೆರವು ಆಗಲಿದೆ.
ಈದ್ಗಾ ಮೈದಾನದ ಬಳಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಅನುಷ್ಠಾನಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪೊಲೀಸ್ ಭದ್ರತೆ ಕೇಳಿತ್ತು. ಅಗತ್ಯಕ್ಕೆ ತಕ್ಕಷ್ಟು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.