ರಾಮನಗರ.ಜು.8– ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು, ನನಗೆ ಸಚಿವ ಸ್ಥಾನ ಬೇಡ ಎಂದು ಚನ್ನಪಟ್ಟಣ ಕ್ಷೇತ್ರದ ಶಾಸಕ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜಿಲ್ಲೆಯ ಜನ ಹಾಗೂ ಶಾಸಕರ ಅಭಿಪ್ರಾಯ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂಬುದಾಗಿದೆ. ಈ ವಿಚಾರವಾಗಿ ಹೈಕಮಾಂಡ್ ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವ ನಿರೀಕ್ಷೆಯಿದೆ ಎಂದರು.
ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ದ. ಹೈಕಮಾಂಡ್ ಮಟ್ಟದಲ್ಲಿ ಯಾವ ರೀತಿಯ ಒಡಂಬಡಿಕೆಯಾಗಿದೆ ಎಂಬುದು ನಮಗೆ ಗೊತ್ತಿಲ್ಲ. ನಾನು ಕಾಂಗ್ರೆಸ್ ಸೇರಿ 6 ತಿಂಗಳಾಗಿವೆ. ಪಕ್ಷದ ಚಟುವಟಿಕೆಗಳಲ್ಲಿ ನಾನು ಹೆಚ್ಚು ಸಕ್ರಿಯವಾಗಿಲ್ಲ. ರಾಜಕಾರಣ ಮಾಡಲು ಹೋಗುತ್ತಿಲ್ಲ. ಕ್ಷೇತ್ರದಲ್ಲಿ ನುಸಿಪೀಡೆ ಸೇರಿದಂತೆ ಇತರ ವಿಚಾರಗಳಿಗೆ ಸಂಬಂಧಪಟ್ಟಂತೆ ಹೆಚ್ಚು ಗಮನ ಹರಿಸುತ್ತಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ನಲ್ಲಿ ಸಚಿವ ಸ್ಥಾನಕ್ಕಾಗಿ ಎಚ್.ಸಿ.ಬಾಲಕೃಷ್ಣ ಆಕಾಂಕ್ಷಿಯಾಗಿದ್ದಾರೆ. ಮೊದಲು ಅವರಿಗೆ ಅವಕಾಶ ಸಿಗಲಿ. ನಾನೇನೂ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವುದು ನಮ್ಮ ಮೊದಲ ಬಯಕೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಪದಾರ್ಪಣೆ ಮಾಡುವ ಬಗ್ಗೆಯಾಗಲೀ, ಅವರನ್ನು ಹಿಂದುಳಿದ ವರ್ಗಗಳ ಘಟಕದ ಸಲಹಾ ಸಮಿತಿಯ ಸದಸ್ಯರನ್ನಾಗಿ ನೇಮಿಸುವ ಬಗ್ಗೆಯಾಗಲೀ ನನಗೆ ಮಾಹಿತಿ ಇಲ್ಲ. ಕಾಂಗ್ರೆಸ್ ನನಗೆ ಹಳೆಯ ಪಕ್ಷ. ಆದರೆ ರಾಜ್ಯ ರಾಜಕಾರಣದಲ್ಲಿ ನನಗೆ ಹೆಚ್ಚಿನ ಸಕ್ರಿಯತೆ ಇಲ್ಲ. ಶಾಸಕರ ಜೊತೆ ಚರ್ಚೆ ಮಾಡುವುದಾಗಲೀ, ಯಾರು, ಯಾವ ಹುದ್ದೆಗೆ ನೇಮಕವಾಗುತ್ತಿದ್ದಾರೆ ಎಂಬೆಲ್ಲಾ ವಿಚಾರಗಳ ಬಗ್ಗೆ ಗಮನ ಕೊಡುತ್ತಿಲ್ಲ.
ಇನ್ನೂ 2-3 ತಿಂಗಳು ಕಳೆಯಲಿ. ಆ ಬಳಿಕ ಸಕ್ರಿಯವಾಗಿ ಪಾಲ್ಗೊಳ್ಳುತ್ತೇನೆ ಎಂದು ತಿಳಿಸಿದರು. ಕಣ್ಣ ನದಿಪಾತ್ರದಲ್ಲಿ ಮರಳು ಗಣಿಗಾರಿಕೆ ಶುರುವಾಗಿರುವ ಬಗ್ಗೆ ಮಾಹಿತಿ ಇದೆ. ಇದರಿಂದಾಗಿಯೇ ನದಿಪಾತ್ರ ಒಂದಕ್ಕೆ ಮೂರರಷ್ಟು ಹೆಚ್ಚಾಗಿದೆ. ನಾನು ಮೊದಲಿನಿಂದಲೂ ಅಕ್ರಮ ಮರಳುಗಾರಿಕೆ ವಿರುದ್ಧ ಹೋರಾಟ ನಡೆಸಿದ್ದೇನೆ. ತಾಲ್ಲೂಕು ಆಡಳಿತ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಪೊಲೀಸರು ಮರಳು ಗಣಿಗಾರಿಕೆಯನ್ನು ತಡೆಯಬೇಕು ಎಂದು ಸೂಚಿಸಿದರು.
- ಬೆಂಗಳೂರಿನ ಮಹಿಳೆಯರೇ ಹುಷಾರ್ : 1 ರೂ. ಬಡ್ಡಿಗೆ ಲೋನ್ ಕೊಡುವುದಾಗಿ ಹಣ ದೋಚುತ್ತಿದೆ ಗ್ಯಾಂಗ್
- ಮೊಬೈಲ್ ಕಳೆದುಹೋದರೆ-ಕಳ್ಳತನವಾದರೆ ದೂರು ನೀಡಿ, ಇಲ್ಲದಿದ್ರೆ ಸಂಕಷ್ಟ ಗ್ಯಾರಂಟಿ
- ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಗೆ ಭಾರತದ ಸಾರಥ್ಯ
- ಎಗ್ಗಿಲ್ಲದೆ ನಡೆಯುತ್ತಿದೆ ಪಡಿತರ ಅಕ್ಕಿ ಕಳ್ಳಸಾಗಾಣಿಕೆ : ಆರ್.ಅಶೋಕ್ ಆಕ್ರೋಶ
- ನಾಳೆ ಆಂಧ್ರಕ್ಕೆ ಮೋದಿ : 13,430 ಕೋಟಿ ರೂ.ಗಳ ಯೋಜನೆಗೆ ಚಾಲನೆ