Tuesday, July 1, 2025
Homeರಾಜಕೀಯ | Politicsನಾನೇ ದಸರಾ ಉದ್ಘಾಟಿಸುತ್ತೇನೆ, ಸರ್ಕಾರ ಬಂಡೆಯಂತೆ ಭದ್ರವಾಗಿದೆ : 'ಕೈ'ಜೋಡಿಸಿದ ಸಿಎಂ-ಡಿಸಿಎಂ

ನಾನೇ ದಸರಾ ಉದ್ಘಾಟಿಸುತ್ತೇನೆ, ಸರ್ಕಾರ ಬಂಡೆಯಂತೆ ಭದ್ರವಾಗಿದೆ : ‘ಕೈ’ಜೋಡಿಸಿದ ಸಿಎಂ-ಡಿಸಿಎಂ

I will inaugurate Dasara myself, the government is as strong as a rock: CM-DCM join hands

ಮೈಸೂರು,ಜೂ.30- ಈ ಬಾರಿ ದಸರಾ ವನ್ನು ನಾನೇ ಉದ್ಘಾಟನೆ ಮಾಡುತ್ತೇನೆ. ತಮ ಸರ್ಕಾರ 5 ವರ್ಷ ಬಂಡೆಯಂತೆ ಭದ್ರವಾಗಿರುತ್ತದೆ. ಯಾರು, ಏನೇ ಹೇಳಿದರೂ ನನ್ನ ಮತ್ತು ಡಿ.ಕೆ.ಶಿವಕುಮಾರ್‌ ನಡುವೆ ಭಿನ್ನಾಭಿಪ್ರಾಯಗಳಿರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಮೈಸೂರು ವಿಮಾನನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಅವರು ಹೇಳುವುದು ಯಾವುದೂ ನಿಜವಾಗಿಲ್ಲ. ನಾನು ಮತ್ತು ಡಿ.ಕೆ.ಶಿವಕುಮಾರ್‌ ಚೆನ್ನಾಗಿದ್ದೇವೆ. ಯಾರು, ಏನೇ ಹೇಳಿದರೂ ನಾವು ಕೇಳುವುದಿಲ್ಲ ಎಂದರು. ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಪರಸ್ಪರ ಕೈ ಹಿಡಿದು ಮೇಲೆತ್ತಿ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಟೀಕೆಗಳಿಗೆ ಮತ್ತು ವಿರೋಧಪಕ್ಷಗಳಿಗೆ ತಿರುಗೇಟು ನೀಡುವ ಪ್ರಯತ್ನ ಮಾಡಿದರು.

ಸಿದ್ದರಾಮಯ್ಯ ಈ ಬಾರಿ ದಸರಾ ಉದ್ಘಾಟನೆ ಮಾಡುವುದಿಲ್ಲ ಎಂದು ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ಹಾಗೂ ಬಿಜೆಪಿ ಮಾಜಿ ಸಚಿವ ಶ್ರೀರಾಮಲು ಭವಿಷ್ಯ ನುಡಿದಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಿಮಗೆ ಏನೆನ್ನಿಸುತ್ತದೆ? ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.

ಬಹುಷಃ ನೀವೇ ದಸರಾ ಉದ್ಘಾಟಿಸಬಹುದು ಎಂದು ಮಾಧ್ಯಮದವರು ಹೇಳಿದಾಗ, ಅಷ್ಟೇ…. ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಒಟ್ಟಿಗೇ ಹೇಳಿದರು.ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಬೆಂಗಳೂರಿಗೆ ಬಂದಿದ್ದಾರೆ. ಶಾಸಕರುಗಳ ಅಭಿಪ್ರಾಯಗಳನ್ನು ಕೇಳಲಿದ್ದಾರೆ. ನಿಮಗೆ ಯಾವ ತೊಂದರೆಯಿದೆ ಎಂಬ ಪ್ರಶ್ನೆಯ ಜೊತೆಗೆ ಪಕ್ಷ ಸಂಘಟನೆ ಕುರಿತು ಮಾತುಕತೆ ನಡೆಸಲಿದ್ದಾರೆ. ಅವರು ಅವರ ಕೆಲಸವನ್ನು ಮಾಡುತ್ತಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಗೊಂದಲಗಳಿಗೆ ತೆರೆ :
ಸಹಕಾರ ಸಚಿವ ಕೆ.ಎನ್‌.ರಾಜಣ್ಣನವರು ಸಿದ್ದರಾಮಯ್ಯನವರ ಪರಮಾಪ್ತರಾಗಿದ್ದು, ಇತ್ತೀಚೆಗೆ ಹೇಳಿಕೆ ನೀಡಿ ಸೆಪ್ಟೆಂಬರ್‌ನಲ್ಲಿ ರಾಜಕೀಯ ಕ್ರಾಂತಿಯಾಗಲಿದೆ ಎಂದಿದ್ದರು. ಯಾವ ರೀತಿ ಕ್ರಾಂತಿ ಎಂಬ ಬಗ್ಗೆ ಅವರು ಸ್ಪಷ್ಟತೆ ನೀಡದೇ ಇದ್ದರೂ, ಆಂತರ್ಯವಾಗಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗಲಿದೆ, ಕೆಲ ಸಚಿವರು ಅಧಿಕಾರ ಕಳೆದುಕೊಳ್ಳಲಿದ್ದಾರೆ, ಹೊಸಬರಿಗೆ ಅವಕಾಶ ಸಿಗಲಿದೆ ಎಂಬ ಚರ್ಚೆಗಳು ಕಾವೇರಿದ್ದವು.

ಶಾಸಕ ಬಿ.ಆರ್‌.ಪಾಟೀಲ್‌ರು ಬಹಿರಂಗವಾಗಿ ಹೇಳಿಕೆ ನೀಡಿ, ವಸತಿ ಇಲಾಖೆಯಲ್ಲಿ ಮನೆಗಳ ಮಂಜೂರಾತಿಗೆ ಲಂಚ ಪಡೆಯಲಾಗುತ್ತಿದೆ ಎಂದು ಆರೋಪಿಸಿದರು.ಶಾಸಕ ರಾಜು ಕಾಗೆ ಸರ್ಕಾರದ ಆಡಳಿತ ವ್ಯವಸ್ಥೆ ನಿಷ್ಕ್ರಿಯವಾಗಿದೆ. ಶಾಸಕ ಸ್ಥಾನಕ್ಕೆ ನಾನು 2-3 ದಿನದಲ್ಲಿ ರಾಜೀನಾಮೆ ನೀಡುತ್ತೇನೆ ಎಂದಿದ್ದರು.

ಈ ಹೇಳಿಕೆಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ಸುರ್ಜೇವಾಲ ಬೆಂಗಳೂರಿಗೆ ಆಗಮಿಸಿದ್ದಾರೆ.ರಾಜಣ್ಣ ಅವರ ಸೆಪ್ಟಂಬರ್‌ ಕ್ರಾಂತಿಯ ಹೇಳಿಕೆ ಒಂದು ಕಡೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಕಾಂಗ್ರೆಸ್‌‍ ಅಧ್ಯಕ್ಷ ಸ್ಥಾನ ತೊರೆಯುವ ಮುನ್ಸೂಚನೆ ನೀಡಿದರೆ, ಮತ್ತೊಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಗಳು ನಡೆದಿದ್ದವು.

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ನಡುವೆ ಭಿನ್ನಾಭಿಪ್ರಾಯಗಳಿವೆ. ಸೆಪ್ಟೆಂಬರ್‌ ವೇಳೆಗೆ ಮುಖ್ಯಮಂತ್ರಿ ಬದಲಾವಣೆಯಾಗಲಿದ್ದು, ಬೇರೆ ಮುಖ್ಯಮಂತ್ರಿ ದಸರಾ ಉದ್ಘಾಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ಸೇರಿದಂತೆ ಇತರರು ಭವಿಷ್ಯ ನುಡಿದಿದ್ದರು. ಈ ರೀತಿಯ ಗೊಂದಲಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಪರಸ್ಪರ ಕೈ ಹಿಡಿದು ಮೇಲೆಕ್ಕೆತ್ತಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ.

RELATED ARTICLES

Latest News