Wednesday, June 4, 2025
Homeರಾಜ್ಯಪಾತಾಳಕ್ಕೆ ಕುಸಿದ ಮಾವಿನ ಹಣ್ಣಿನ ಬೆಲೆ, ಬೆಳೆಗಾರರು ಕಂಗಾಲು

ಪಾತಾಳಕ್ಕೆ ಕುಸಿದ ಮಾವಿನ ಹಣ್ಣಿನ ಬೆಲೆ, ಬೆಳೆಗಾರರು ಕಂಗಾಲು

In Karnataka, pest attacks make mangoes sourer for farmers as prices drop

ಬೆಂಗಳೂರು, ಜೂ.2– ಹಣ್ಣುಗಳ ರಾಜ ಮಾವಿನ ದರ ಪಾತಾಳ ತಲುಪಿದ್ದು, ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೇ, ಜೂನ್ ತಿಂಗಳು ಬಂತಂದರೆ ಎಲ್ಲೆಡೆ ಮಾವಿನಹಣ್ಣಿನ ಗಮಲು ಜೋರಾಗಿರುತ್ತದೆ. ಆದರೆ ಹಣ್ಣು ಇದೆ, ಬೆಲೆ ಇಲ್ಲ. ಇದರಿಂದ ಗ್ರಾಹಕರಿಗೆ ಅನುಕೂಲವಾದರೆ ಬೆಳೆಗಾರರಿಗೆ ತೋಟ ಕೊಂಡವರಿಗೆ ತೀವ್ರ ನಷ್ಟ ಅನುಭವಿಸುವಂತಾಗಿದೆ.

ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ ಇತರ ರಾಜ್ಯಗಳಿಂದ ಏಕಕಾಲಕ್ಕೆ ಅಪಾರ ಪ್ರಮಾಣದಲ್ಲಿ ಮಾವು ಮಾರುಕಟ್ಟೆ ಪ್ರವೇಶಿಸುವುದರಿಂದ ಬೇಡಿಕೆ ಕಡಿಮೆಯಾಗಿ ಬೆಲೆ ಕುಸಿತವಾಗಿದೆ. ಅಲ್ಲದೆ ಹಣ್ಣು ಕಟಾವಿನ ಸಂದರ್ಭದಲ್ಲಿ ಮಳೆ ಪ್ರಾರಂಭವಾಗಿದ್ದು, ಹಣ್ಣುಗಳು ಸಹ ಹಾಳಾಗುತ್ತಿವೆ. ಇದರಿಂದ ಬೇಗ ಮರದಿಂದ ಕಿತ್ತು ಹಣ್ಣು ಮಾಡಿ ಮಾರಾಟ ಮಾಡುವುದರಿಂದ ಬೆಲೆ ಇಳಿಕೆಯಾಗಿದೆ.

ವರ್ಷದ ಬೆಳೆಯಾದ ಮಾವನ್ನು ಪ್ರತಿ ಮರಕ್ಕೆ ಇಳುವರಿ ಆಧಾರದ ಮೇಲೆ 2 ರಿಂದ 5 ಸಾವಿರದವರೆಗೆ ಗುತ್ತಿಗೆ ಆಧಾರದಲ್ಲಿ ವ್ಯಾಪಾರಸ್ಥರು ಖರೀದಿಸುತ್ತಾರೆ. ಆರಂಭದಲ್ಲಿ ಉತ್ತಮ ಬೆಲೆಯಿತ್ತು. ಕಳೆದ ಮೂರು ವಾರಗಳಿಂದ ಬೆಲೆ ದಿಢೀರ್ ಕುಸಿತವಾಗಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ಉಪ್ಪಿನಕಾಯಿ, ಜ್ಯೂಸ್ ಕಾರ್ಖಾನೆಗಳಲ್ಲಿ ಬೇಡಿಕೆಯೂ ಸಹ ಕಡಿಮೆಯಾಗಿದೆ. ಇದರಿಂದ ಔಷಧಿ, ಕಾಯಿಗಳನ್ನು ಕೀಳುವ ಕೂಲಿಯೂ ಸಹ ಹುಟ್ಟುತ್ತಿಲ್ಲ. ಇದರಿಂದ ಕೆಲವರು ಮರಗಳಲ್ಲಿ ಕಾಯಿ ಕೀಳದೇ ಬಿಟ್ಟಿದ್ದಾರೆ.

ಕಳೆದ ವರ್ಷ ಹೊರರಾಜ್ಯಗಳಿಂದ ವ್ಯಾಪಾರಿಗಳು ಬರುತ್ತಿದ್ದರು. ಆದರೆ ಈ ಬಾರಿ ಯಾರೂ ಕೂಡ ರಾಜ್ಯದತ್ತ ಬಂದಿಲ್ಲ. ಹವಾಮಾನ ವೈಪರೀತ್ಯದಿಂದಲೂ ಸಹ ಹಣ್ಣುಗಳಿಗೆ ತೊಂದರೆಯಾಗಿದ್ದು

ಮಳೆ ಹಾಗೂ ಆಲಿಕಲ್ಲು ಬಿದ್ದಿದ್ದರಿಂದ ಹೆಚ್ಚು ದಿನ ಹಣ್ಣನ್ನು ಶೇಖರಿಸಲಾಗುತ್ತಿಲ್ಲ. ಇದರಿಂದ ಸಾಲದ ಸುಳಿಗೆ ಸಿಲುಕುವಂತಾಗಿದೆ. ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ತೀವ್ರ ಸಂಕಷ್ಟ ತಂದೊಡ್ಡಿದೆ.

ಮೂರು ಲಕ್ಷಕ್ಕೆ ಮಾವಿನ ತೋಟವೊಂದನ್ನು ಗುತ್ತಿಗೆ ಪಡೆದಿದ್ದು, ಪ್ರಾರಂಭದಲ್ಲೇ ಸ್ವಲ್ಪ ಹಣ್ಣನ್ನು ಕಟಾವು ಮಾಡಲಾಗಿತ್ತು. ಉಳಿದ ಹಣ್ಣನ್ನು ಕಟಾವು ಮಾಡುವಷ್ಟರಲ್ಲೇ ಬೆಲೆ ಕುಸಿತವಾಗಿದೆ. ಇದರಿಂದ ಕೂಲಿ, ಸಾಗಾಟ ವೆಚ್ಚವೂ ಸಹ ಸಿಗುವುದಿಲ್ಲ ಎಂದು ಗಿಡದಲ್ಲೇ ಬಿಡಲಾಗಿದೆ. ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಕೆಜಿಗೆ 10 ರಿಂದ 15 ರೂ. ಇದೆ. ನಮ್ಮ ಕೂಲಿ, ಸಾಲಕ್ಕೆ ಬಡ್ಡಿ

ಕೂಡ ದೊರೆಯದಂತಾಗಿದೆ ಎಂದು ಬೆಂಗಳೂರು ದಕ್ಷಿಣ (ಹಿಂದಿನ ರಾಮನಗರ) ಜಿಲ್ಲೆಯ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ. ಈ ಬಾರಿ ತೋಟ ಮಾಡಿಕೊಂಡು ಕನಿಷ್ಟ 5 ಲಕ್ಷ ರೂ. ನಷ್ಟವಾಗಿದೆ. ಸಾಲಕ್ಕೆ ಬಡ್ಡಿ ಕಟ್ಟುವುದೂ ಸಹ ದುಸ್ತರವಾಗಿದೆ. ವರ್ಷದ ಬೆಳೆಯನ್ನೇ ನಂಬಿಕೊಂಡಿದ್ದ ನಮಗೆ ಬೆಲೆ ಕುಸಿತ ದೊಡ್ಡ ಆಘಾತ ತಂದಿದೆ ಎಂದು ಮಾಗಡಿ ತಾಲ್ಲೂಕಿನ ತೋಟ ಖರೀದಿದಾರರೊಬ್ಬರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಚಿಲ್ಲರೆಯಾಗಿ ಮಾರಾಟವಾಗುವ ಮಾವಿನಹಣ್ಣಿನ ದರ ನೋಡುವುದಾದರೆ ಸೇಂಧೂರ 50 ರಿಂದ 60 ರೂ., ತೋತಾಪುರಿ 30 ರಿಂದ 40 ರೂ., ಬಾದಾಮಿ 50 ರಿಂದ 60 ರೂ., ಮಲ್ಲಿಕಾ 60 ರೂ., ರಸಪೂರಿ 80 ರೂ.ಗಳಾಗಿದ್ದು, ಎಪಿಎಂಸಿ ಮಾರುಕಟ್ಟೆಯಲ್ಲಿ ಇನ್ನೂ ಕಡಿಮೆ ದರಕ್ಕೆ ಸಿಗುತ್ತದೆ.

RELATED ARTICLES

Latest News