Saturday, October 5, 2024
Homeರಾಜ್ಯಪ್ರಮುಖ ಜಲಾಶಯಗಳಿಗೆ ಒಳ ಹರಿವಿನ ಪ್ರಮಾಣ ಹೆಚ್ಚಳ

ಪ್ರಮುಖ ಜಲಾಶಯಗಳಿಗೆ ಒಳ ಹರಿವಿನ ಪ್ರಮಾಣ ಹೆಚ್ಚಳ

ಬೆಂಗಳೂರು, ಜೂ.29- ಕಳೆದ ನಾಲ್ಕೈದು ದಿನಗಳಿಂದ ಕೇರಳದ ವಯನಾಡು, ಕೊಡಗು, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಬಿದ್ದ ಮಳೆಯಿಂದಾಗಿ ಪ್ರಮುಖ ಜಲಾಶಯಗಳ ನೀರಿನ ಒಳ ಹರಿವು ಗಣನೀಯವಾಗಿ ಹೆಚ್ಚಾಗಿದೆ. ಶೇ. 3ರಷ್ಟು ನೀರಿನ ಸಂಗ್ರಹ ಹೆಚ್ಚಾಗಿದೆ.
ಅಂದರೆ, ಸುಮಾರು 18 ಟಿಎಂಸಿ ಅಡಿಯಷ್ಟು ನೀರು ಜಲಾಶಯಗಳಿಗೆ ಹರಿದು ಬಂದಿದೆ.
ಕೇರಳ, ಮಲೆನಾಡು ಭಾಗದಲ್ಲಿ ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಏರಿಕೆಯಾಗಿದ್ದ ಒಳಹರಿವಿನ ಪ್ರಮಾಣ ನಾಳೆಯಿಂದ ಇಳಿಮುಖವಾಗುವ ಸಾಧ್ಯತೆ ಹೆಚ್ಚಾಗಿದೆ.

ಕರ್ನಾಟಕ ರಾಜ್ಯ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ ಪ್ರಸ್ತುತ ಶೇ. 24ರಷ್ಟು ನೀರು ಸಂಗ್ರಹವಾಗಿದೆ. ಅಂದರೆ, 217.83 ಟಿಎಂಸಿ ಅಡಿ ನೀರು ಜಲಾಶಯಗಳಲ್ಲಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 171.98 ಅಡಿ ನೀರಿತ್ತು. ಕಳೆದ ವರ್ಷಕ್ಕಿಂತ ಸುಮಾರು 46 ಟಿಎಂಸಿಯಷ್ಟು ಹೆಚ್ಚುವರಿ ನೀರು ಸಂಗ್ರಹವಾಗಿದೆ.
ಕಾವೇರಿ ಜಲಾನಯನ ಭಾಗದ ಹಾರಂಗಿ, ಹೇಮಾವತಿ, ಕೆಆರ್‌ಎಸ್‌‍ ಹಾಗೂ ಕಬಿನಿ ಜಲಾಶಯಗಳಿಗೆ ಕಳೆದ ಮೂರು ದಿನಗಳಿಂದ ಒಳಹರಿವು ಹೆಚ್ಚಳವಾಗಿದೆ. ಈ ನಾಲ್ಕು ಜಲಾಶಯಗಳಿಂದ ಒಟ್ಟು 43 ಸಾವಿರ ಕ್ಯುಸೆಕ್ಸ್ ಗೂ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿದೆ.

ಹಾರಂಗಿ ಜಲಾಶಯಕ್ಕೆ ಒಂದೂವರೆ ಸಾವಿರ ಕ್ಯುಸೆಕ್ಸ್ ಗೂ ಅಧಿಕ ನೀರು ಬರುತ್ತಿದೆ. ಹೇಮಾವತಿ ಜಲಾಶಯಕ್ಕೆ 5 ಸಾವಿರ ಕ್ಯುಸೆಕ್‌್ಸಗೂ ಹೆಚ್ಚು, ಕೆಆರ್‌ಎಸ್‌‍ ಜಲಾಶಯಕ್ಕೆ 18 ಸಾವಿರ ಕ್ಯುಸೆಕ್‌್ಸಗೂ ಅಧಿಕ ಹಾಗೂ ಕಬಿನಿ ಜಲಾಶಯಕ್ಕೆ 17 ಸಾವಿರ ಕ್ಯುಸೆಕ್‌್ಸಗೂ ಅಧಿಕ ಪ್ರಮಾಣದ ಒಳಹರಿವಿದೆ.

ನಿನ್ನೆ 20 ಸಾವಿರ ಕ್ಯುಸೆಕ್ಸ್ ಗಿಂತ ಹೆಚ್ಚಿದ್ದ ಕಬಿನಿ ಜಲಾಶಯದ ಒಳಹರಿವು ಇಂದು 17 ಸಾವಿರ ಕ್ಯುಸೆಕ್‌್ಸಗೆ ಇಳಿಕೆಯಾಗಿದೆ. ಶೇ.73ರಷ್ಟು ನೀರು ಸಂಗ್ರಹವಾಗಿದೆ. 19.52 ಟಿಎಂಸಿ ಸಾಮರ್ಥ್ಯದ ಈ ಜಲಾಶಯದಲ್ಲಿ ಪ್ರಸ್ತುತ 14.31 ಟಿಎಂಸಿಯಷ್ಟು ನೀರಿದೆ.
ಆದರೆ, ಕೆಆರ್‌ಎಸ್‌‍ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ನಿನ್ನೆ 13 ಸಾವಿರ ಕ್ಯುಸೆಕ್‌್ಸನಷ್ಟಿದ್ದ ಒಳಹರಿವು ಇಂದು 18 ಸಾವಿರ ಕ್ಯುಸೆಕ್ಸ್ಗಿಂತ ಹೆಚ್ಚಾಗಿದೆ. ಶೇ.36ರಷ್ಟು ನೀರು ಸಂಗ್ರಹವಾಗಿದೆ. ಕಾವೇರಿ ನದಿ ಪಾತ್ರದ ಜಲಾಶಯಗಳಲ್ಲಿ ಶೇ.42ರಷ್ಟು ನೀರು ಸಂಗ್ರಹವಾಗಿದೆ.

ಜಲ ವಿದ್ಯುತ್‌ ಉತ್ಪಾದಿಸುವ ಲಿಂಗನಮಕ್ಕಿ, ಸೂಪಾ ಹಾಗೂ ವಾರಾಹಿ ಜಲಾಶಯಗಳಲ್ಲಿ ಶೇ.18ರಷ್ಟು ನೀರಿದೆ. ಕಳೆದ ವರ್ಷಕ್ಕಿಂತ 13 ಟಿಎಂಸಿ ನೀರು ಹೆಚ್ಚಾಗಿದೆ. ಮೂರು ಜಲಾಶಯಗಳಿಗೆ 14 ಸಾವಿರ ಕ್ಯುಸೆಕ್ಸ್ ಗೂ ಅಧಿಕ ಪ್ರಮಾಣದ ಒಳಹರಿವು ಇದೆ. ಇದರಲ್ಲಿ ಲಿಂಗನಮಕ್ಕಿ ಜಲಾಶಯಕ್ಕೆ 9 ಸಾವಿರ ಕ್ಯುಸೆಕ್‌್ಸಗೂ ಅಧಿಕ ಪ್ರಮಾಣದ ನೀರು ಬರುತ್ತಿದೆ.
ಕೃಷ್ಣಾ ಕೊಳ್ಳದ 7 ಪ್ರಮುಖ ಜಲಾಶಯಗಳಲ್ಲೂ ಒಳ ಹರಿವು ಹೆಚ್ಚಾಗಿದೆ.

ಒಟ್ಟಾರೆ 18 ಸಾವಿರ ಕ್ಯುಸೆಕ್ಸ್ ಗಿಂತ ಅಧಿಕ ಒಳಹರಿವು ಕಂಡುಬರುತ್ತಿದೆ. ಶೇ. 22 ರಷ್ಟು ಮಾತ್ರ ನೀರು ಸಂಗ್ರಹವಾಗಿದೆ. ಕಳೆದ ವರ್ಷಕ್ಕಿಂತ 20 ಟಿಎಂಸಿಯಷ್ಟು ಹೆಚ್ಚು ನೀರು ಸಂಗ್ರಹವಾಗಿದೆ. ಹೀಗಾಗಿ ಕಳೆದ ವರ್ಷಕ್ಕಿಂತ ಈ ವರ್ಷ ಮಳೆ ಹಾಗೂ ನೀರಿನ ಸಂಗ್ರಹದ ಪ್ರಮಾಣ ಸುಧಾರಿಸಿದೆ. ಆದರೂ ಉತ್ತರ ಕರ್ನಾಟಕ ಸೇರಿದಂತೆ ಒಳನಾಡಿನಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗಿಲ್ಲ. ಜಲಾಶಯಗಳಿಗೂ ನೀರು ಬಂದಿಲ್ಲ.

RELATED ARTICLES

Latest News