Sunday, June 29, 2025
Homeರಾಜ್ಯ10 ಲಕ್ಷ ಕೋಟಿ ವ್ಯವಹಾರದ ಸಮೂಹ ಸನ್ನಿಯ ಐಪಿಎಲ್‌ ಅವಾಂತರಕ್ಕೆ ಅಮಾಯಕರು ಬಲಿ

10 ಲಕ್ಷ ಕೋಟಿ ವ್ಯವಹಾರದ ಸಮೂಹ ಸನ್ನಿಯ ಐಪಿಎಲ್‌ ಅವಾಂತರಕ್ಕೆ ಅಮಾಯಕರು ಬಲಿ

Innocent people are victims of IPL chaos due to the madness of 10 lakh crore business

*ಉಮೇಶ್‌ ಕೋಲಿಗೆರೆ

ಐಪಿಎಲ್‌ ಕ್ರಿಕೆಟ್‌ ಎಂದರೆ ಪಡ್ಡೆ ಹುಡುಗರು ಹುಚ್ಚೆದ್ದು ಕುಣಿಯುತ್ತಾರೆ. ಆದರೆ ಅದರ ಹಿಂದೆ ಸುಮಾರು 10 ಲಕ್ಷ ಕೋಟಿ ರೂ. ಹೆಚ್ಚಿನ ಹಣಕಾಸು ವಹಿವಾಟು ಇದ್ದು, ಈ ರೀತಿಯ ಖಾಸಗಿ ಕಾರ್ಯಕ್ರಮದಲ್ಲಿ ಹನ್ನೊಂದು ಅಮಾಯಕರ ಜೀವ ಹತ್ಯೆಯಾಗಿದ್ದು, ಇತಿಹಾಸದಲ್ಲೇ ಕಪ್ಪುಚುಕ್ಕೆಯಾಗಿ ಉಳಿದಿದೆ.

ಐಪಿಎಲ್‌ ಎಂದರೆ ಕೇವಲ ಕ್ರಿಕೆಟ್‌ ಅಲ್ಲ. ಅದರ ಹಿಂದೆ ಕರ್ನಾಟಕದಂತಹ ಬೃಹತ್‌ ರಾಜ್ಯಗಳ ಮೂರುಪಟ್ಟು ಬಜೆಟ್‌ನಷ್ಟು ಹಣಕಾಸು ವಹಿವಾಟು ಇದೆ. ಪ್ರಾಂಚೈಸಿಗಳು, ಐಪಿಎಲ್‌ ಆಡಳಿತ ಮಂಡಳಿ, ರಾಜ್ಯ ಹಾಗೂ ರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆಗಳ ಆಡಳಿತ ಮಂಡಳಿಗಳು ಲಕ್ಷಾಂತರ ಕೋಟಿ ಹಣ ಬಾಚಿಕೊಳ್ಳುತ್ತಿವೆ. ಜನ ಇದ್ಯಾವುದರ ಪರಿವೇ ಇಲ್ಲದೆ ಐಪಿಎಲ್‌ ಎಂದರೇ ಅದೊಂದು ಆಟ ಎಂದು ಭಾವಿಸಿ ಹುಚ್ಚೆದ್ದು ಕುಣಿಯುತ್ತಿದ್ದಾರೆ.

ಐಪಿಎಲ್‌ ಆಡಳಿತ ಮಂಡಳಿಯಲ್ಲಿ ರಿಲಾಯನ್‌್ಸ, ರಾಯಲ್‌ ಚಾಲೆಂಜರ್‌ರ‍ಸ, ಮುಂಬೈ ಇಂಡಿಯನ್‌ ನಂತಹ ಪ್ರಾಂಚೈಸಿಗಳು ಪ್ರಮುಖ ಷೇರುದಾರರಾಗಿವೆ. ಕೋಟ್ಯಾಂತರ ರೂಪಾಯಿ ಆದಾಯದಲ್ಲಿ ಇವುಗಳೇ ಪ್ರಮುಖ ಪಾಲುದಾರರು.

ಅಂದಾಜಿನ ಪ್ರಕಾರ ಐಪಿಎಲ್‌ನ ಒಟ್ಟು ವಹಿವಾಟು 12 ಬಿಲಿಯನ್‌ ಡಾಲರ್‌ನಷ್ಟು ಸರಿಸುಮಾರು ಇದರ ರೂಪಾಯಿ ಮೌಲ್ಯ 10.26 ಲಕ್ಷ ಕೋಟಿ ರೂಪಾಯಿಗಳು. ರಾಜ್ಯ ಸರ್ಕಾರದ ಬಜೆಟ್‌ ಪ್ರಸಕ್ತ ವರ್ಷ ಕೇವಲ 4 ಲಕ್ಷಕೋಟಿ ರೂ. ಕರ್ನಾಟಕಕ್ಕಿಂತಲೂ ಐಪಿಎಲ್‌ನ ವಹಿವಾಟು ಮೂರು ಪಟ್ಟು ಹೆಚ್ಚಿದೆ ಎಂದರೆ ಅದರ ಹಿಂದೆ ಇರುವ ಸಮೂಹ ಸನ್ನಿಯನ್ನು ಅರ್ಥೈಸಿಕೊಳ್ಳಲೇಬೇಕಿದೆ.

ಅಧಿಕೃತ ಮೂಲಗಳ ಪ್ರಕಾರ 2023 ರಿಂದ 27ರ ನಡುವೆ ಐಪಿಎಲ್‌ ಸರಣಿಯ ಪ್ರಸಾರದ ಹಕ್ಕನ್ನು 44,075ಕೋಟಿಗೆ ಮಾರಾಟ ಮಾಡಲಾಗಿದೆ. ಇದರಲ್ಲಿ ಟಿವಿಗಳಿಂದ 23, 575 ಕೋಟಿ ರೂ., ಡಿಜಿಟಲ್‌ ಮಾಧ್ಯಮಗಳಿಂದ 20,500 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ.

2025ರ ಸಾಲಿನಲ್ಲಿ ಜಾಹೀರಾತುಗಳಿಂದ 6 ರಿಂದ 7 ಸಾವಿರ ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಇದರ ಜೊತೆಗೆ ಐಪಿಎಲ್‌ ತಂಡದ ಪ್ರಾಯೋಜಕತ್ವದ ಹೆಸರಿನಲ್ಲಿ ಕೋಟ್ಯಾಂತರ ರೂ. ಸಂಗ್ರಹಿಸಲಾಗಿದೆ. 98,000 ಕೋಟಿ ರೂ.ಗಳ ಬ್ರ್ಯಾಂಡ್‌ ವ್ಯಾಲ್ಯೂನೊಂದಿಗೆ ಬೆಂಗಳೂರಿನ ರಾಯಲ್‌ ಚಾಲೆಂಜರ್ಸ್‌ ಎರಡನೇ ಸ್ಥಾನದಲ್ಲಿದೆ.

18 ವರ್ಷದ ಬಳಿಕ ಆರ್‌ಸಿಬಿ ಕಪ್‌ ಗೆದ್ದಿದ್ದನ್ನು ಮನೆಮನೆಯ ಹಬ್ಬ ಎಂದು ನಾಡಿನ ಜನ ಸಂಭ್ರಮಿಸಿದರು. ಈ ಭಾವನೆಯನ್ನೇ ಆರ್‌ಸಿಬಿ ಬಂಡವಾಳ ಮಾಡಿಕೊಂಡು ಐಪಿಎಲ್‌ ಗೆದ್ದ ಮಾರನೇ ದಿನವೇ ವಿಜಯೋತ್ಸವ ನಡೆಯಲೇಬೇಕೆಂದು ಪಟ್ಟು ಹಿಡಿದಿತ್ತು. ಒಂದು ಖಾಸಗಿ ಸಂಸ್ಥೆಯ ಲಾಭಕ್ಕಾಗಿ ಹಿಂದೆ-ಮುಂದೆ ಯೋಚಿಸದೆ ಕಾರ್ಯಕ್ರಮಕ್ಕೆ ಅವಕಾಶ ಕೊಟ್ಟು ಭಾರಿ ದುರಂತದ ಹೊಣೆಗಾರಿಕೆಗೆ ಗುರಿಯಾಗಿದೆ.

7,73,760 ಕೋಟಿ. ರೂಗಳ ಬ್ರ್ಯಾಂಡ್‌ ವ್ಯಾಲ್ಯೂನೊಂದಿಗೆ ಮುಖೇಶ್‌ ಅಂಬಾನಿ, ನೀತ ಅಂಬಾನಿ ಅವರ ಮುಂಬೈ ಇಂಡಿಯನ್‌್ಸ ಮೊದಲ ಸ್ಥಾನದಲ್ಲಿದೆ. ಇಂಡಿಯಾ ಸಿಮೆಂಟ್‌ ಮಾಲೀಕ ಎನ್‌. ಶ್ರೀನಿವಾಸನ್‌ ಅವರ ಚೆನ್ನೈ ಸೂಪರ್‌ಕಿಂಗ್‌್ಸ 83 ಸಾವಿರ ಕೋಟಿ, ಸನ್‌ ಟಿವಿ ನೆಟ್‌ವರ್ಕ್‌ನ ಕಲಾನಿಧಿ ಮಾರನ್‌ ಅವರ ಸನ್‌ರೈಸ್‌‍ ಹೈದರಾಬಾದ್‌ 44,166 ಕೋಟಿ, ಜೆಎಸ್‌‍ಡಬ್ಲ್ಯೂ ಎಂಬ ಬೃಹತ್‌ ಉದ್ಯಮದ ಮಾಲೀಕ ಸಚಿನ್‌ಜಿಂದಾಲ್‌ ಅವರ ದೆಹಲಿ ಕ್ಯಾಪಿಟಲ್‌್ಸ ತಂಡ 70 ಸಾವಿರ ಕೋಟಿ ರೂ. ಮಾರುಕಟ್ಟೆ ಮೌಲ್ಯಗಳನ್ನು ಹೊಂದಿದೆ.

ಪ್ರಾಂಚೈಸಿ ಹೊಂದಿರುವವರೆಲ್ಲಾ ದುಡ್ಡು ಇರುವ ದೊಡ್ಡ ದೊಡ್ಡ ಖುಳಗಳೇ ಆಗಿವೆ. ಆದರೆ ಮೊನ್ನೆ ಬೆಂಗಳೂರಿನಲ್ಲಿ ಕಾಲ್ತುಳಿತಕ್ಕೊಳಗಾಗಿ ಮೃತಪಟ್ಟವರು ಮಾತ್ರ ಅಮಾಯಕರು ಮತ್ತು ಬಡವರ ಮಕ್ಕಳು. ಭಾರೀ ಹಣಕಾಸು ವಹಿವಾಟಿನ ದಂಧೆ ಹೊಂದಿರುವ ಈ ಐಪಿಎಲ್‌ ಎಂಬ ಜೂಜಿಗೆ ರಾಜ್ಯ ಸರ್ಕಾರ ಕೈಜೋಡಿಸಿದ್ದು ಈಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ಖುದ್ದು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವರು ಮುಂದಾಳತ್ವ ವಹಿಸಿ ಕಾರ್ಯಕ್ರಮ ಮಾಡಿದ್ದು, ವ್ಯಾಪಕ ಟೀಕೆಗಳಿಗೆ ಗುರಿಯಾಗಿದೆ.

ಜಾಹೀರಾತು, ಟಿಕೆಟ್‌ ಮಾರಾಟ, ಪ್ರಾಯೋಜಕತ್ವ ಅಷ್ಟೇ ಅಲ್ಲದೆ ಐಪಿಎಲ್‌ನಿಂದ ಪರೋಕ್ಷವಾಗಿ ಭಾರೀ ಪ್ರಮಾಣದ ಹಣಕಾಸಿನ ವಹಿವಾಟು ನಡೆಯುತ್ತಿದೆ. ಆಹಾರ, ವಸತಿ, ಸಾರಿಗೆ ಸೇರಿದಂತೆ ಇತರ ವಲಯಗಳಲ್ಲಿ ಸಾವಿರಾರು ಕೋಟಿ ರೂ.ಗಳ ವಹಿವಾಟು ಸೃಷ್ಟಿಯಾಗುತ್ತದೆ.

ಐಪಿಎಲ್‌ ಸರಣಿಗಳಿಗೆ 800 ದಶ ಲಕ್ಷ ವೀಕ್ಷಕರಿದ್ದು, ಜಗತ್ತಿನ ಎಲ್ಲಾ ಮನೋರಂಜನಾ ಕಾರ್ಯಕ್ರಮಗಳಿಗಿಂತಲೂ ಹೆಚ್ಚಿನ ನೋಡುಗರನ್ನು ಹೊಂದಿದೆ. ಅದರಲ್ಲೂ 25 ರಿಂದ 45 ವರ್ಷದೊಳಗಿನ ವೀಕ್ಷಕರೇ ಸಿಂಹಪಾಲಿಲ್ಲಿದ್ದಾರೆ. ಕ್ರಿಕೆಟ್‌ ಅದರಲ್ಲೂ ಐಪಿಎಲ್‌ ಎಂಬುದು ಖಾಸಗಿ ಕಾರ್ಯಕ್ರಮ. ವಾಣಿಜ್ಯ ವಹಿವಾಟಿನ ಮೂಲ ಉದ್ದೇಶ ಹೊಂದಿರುವ ಸಮೂಹಸನ್ನಿ ಎಂಬ ಅರಿವಿದ್ದರೂ ರಾಜ್ಯ ಸರ್ಕಾರ ಅಗ್ಗದ ಪ್ರಚಾರ ಪಡೆಯಲು ಹೋಗಿ ಆತುರಾತುರವಾಗಿ ಕಾರ್ಯಕ್ರಮ ಮಾಡಿ ಅಮಾಯಕರ ಜೀವಗಳನ್ನು ಬಲಿಕೊಟ್ಟಿದೆ ಎಂದು ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ. ಅದು ನಿಜ ಕೂಡ ಆಗಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಮತ್ತು ಆರ್‌ಸಿಬಿ ತಂಡಗಳು ತಮ ಪಾಡಿಗೆ ತಾವು ವಿಜಯೋತ್ಸವ ಆಚರಣೆ ಮಾಡಿಕೊಳ್ಳುತ್ತಿದ್ದವು. ಆಟಗಾರರನ್ನು ವಿಧಾನಸೌಧಕ್ಕೆ ಕರೆತಂದು ಸನಾನಿಸುವ ಜರೂರತ್ತು ಏನಿತ್ತು? ಎಂಬ ಟೀಕೆಗಳು ವ್ಯಾಪಕವಾಗುತ್ತಿದೆ. ಯಾವುದಕ್ಕೂ ಉತ್ತರ ಹೇಳಲಾಗದೇ ಸರ್ಕಾರ ಐದು ಮಂದಿ ಹಿರಿಯ ಅಧಿಕಾರಿಗಳ ತಲೆದಂಡ ಮಾಡಿ ಕೈ-ಕೈ ಹಿಸುಕಿಕೊಳ್ಳುವ ಪರಿಸ್ಥಿತಿಗೆ ತಲುಪಿದೆ.

RELATED ARTICLES

Latest News