ನವದೆಹಲಿ,ಮೇ 10- ಆಪರೇಶನ್ ಸಿಂರ್ಧೂದ ಹೊಡೆತ ತಿನ್ನುತ್ತಿರುವ ನಡುವೆಯೇ ಪಾಕಿಸ್ತಾನ ರಾಜಧಾನಿ ಪ್ರದೇಶ ಇಸ್ಲಾಮಾಬಾದ್ ಆಡಳಿತವು ಮುಂದಿನ 48 ಗಂಟೆಗಳ ಕಾಲ ರಾಜಧಾನಿ ನಗರದೊಳಗಿನ ಎಲ್ಲಾ ಪೆಟ್ರೋಲ್ ಮತ್ತು ಡೀಸೆಲ್ ಕೇಂದ್ರಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ತಕ್ಷಣದ ಆದೇಶ ಹೊರಡಿಸಿದೆ.
ಇಸ್ಲಾಮಾಬಾದ್ ಆಡಳಿತ ಹೊರಡಿಸಿದ ಅಧಿಕೃತ ಸೂಚನೆಯಲ್ಲಿ ನಿಖರ ಕಾರಣ ಉಲ್ಲೇಖಿಸದೇ, ಎಲ್ಲಾ ಪೆಟ್ರೋಲ್ ಪಂಪ್ಗಳನ್ನು ಕೂಡಲೇ ಮುಚ್ಚಬೇಕೆಂದು ಕಟ್ಟಾಜ್ಞೆ ಮಾಡಿದೆ. ಈ ಆದೇಶ ಶನಿವಾರ ಮುಂಜಾನೆ ಹೊರಡಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ಇದರಿಂದ 48 ಗಂಟೆ ವರೆಗೆ ಇಸ್ಲಾಮಾಬಾದ್ನಲ್ಲಿ ಖಾಸಗಿ ವಾಹನಗಳು, ಸಾರ್ವಜನಿಕ ಸಾರಿಗೆ ಹಾಗೂ ವಾಣಿಜ್ಯ ವಾಹನಗಳಿಗೆ ಇಂಧನ ಲಭ್ಯವಾಗದೇ ಎಲ್ಲಾ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದೆ. ಜೊತೆಗೆ ಈ ಬೆಳವಣಿಗೆ ಪಾಕ್ ಸರ್ಕಾರಕ್ಕೆ ಭಾರೀ ನಷ್ಟ ತಂದೊಡ್ಡುತ್ತಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಅಧಿಕೃತ ಅಧಿಸೂಚನೆಯಲ್ಲಿ ಈ ಕಠಿಣ ಕ್ರಮಕ್ಕೆ ಯಾವುದೇ ಕಾರಣವನ್ನು ತಿಳಿಸಲಾಗಿಲ್ಲ ಮತ್ತು ಅಧಿಕಾರಿಗಳು ತಕ್ಷಣವೇ ಯಾವುದೇ ಹೆಚ್ಚಿನ ವಿವರಗಳನ್ನು ನೀಡಿಲ್ಲ, ಒಂದು ಸಂಭಾವ್ಯ ಕಾರಣವೆಂದರೆ ಇಂಧನ ಪೂರೈಕೆಯ ಬಗ್ಗೆ ಇರುವ ಕಳವಳವಾಗಿರಬಹುದು ಎಂದು ಮೂಲಗಳು ತಿಳಿಸಿವೆ.
ಈ ಸಂಪೂರ್ಣ ಬಂದ್ ಆದೇಶ ತಕ್ಷಣದಿಂದ ಜಾರಿಗೆ ಬಂದಿದೆ. ಈ ಆದೇಶದ ಅವಧಿಯವರೆಗೆ ಇಸ್ಲಾಮಾಬಾದ್ನೊಳಗಿನ ಯಾವುದೇ ಖಾಸಗಿ ವಾಹನ, ಸಾರ್ವಜನಿಕ ಸಾರಿಗೆ ಅಥವಾ ವಾಣಿಜ್ಯ ಕಾರ್ಯಾಚರಣೆಗಳಿಗೆ ಯಾವುದೇ ಇಂಧನ ಲಭ್ಯವಿರುವುದಿಲ್ಲ. ಇದರಿಂದ ಜನರಲ್ಲಿ ಹಾಹಾಕಾರವೇ ಏಳುವ ನಿರೀಕ್ಷೆ ಇದೆ. ವಿದೇಶಿ ಮೀಸಲು ವಿನಿಮಯ ಸಂಗ್ರಹದಲ್ಲಿ ತೀವ್ರ ಕೊರತೆ ಹೊಂದಿರುವ ಪಾಕಿಸ್ತಾನದ ಬಳಿ ಗಲ್ಫ್ ರಾಷ್ಟ್ರಗಳಿಂದ ಇಂಧನ ಖರೀದಿಸಲೂ ಹಣವಿಲ್ಲದಾಗಿದೆ.
ಹೀಗಾಗಿ ಆಪತ್ಕಾಲಕ್ಕೆ ಸರಕಾರ ಸಂಗ್ರಹ ಮಾಡಿ ಇಡುತ್ತಿರಬಹುದು ಎಂದು ಶಂಕಿಸಲಾಗಿದೆ.
ಇಂಧನದ ಹಠಾತ್ ಅಲಭ್ಯತೆಯಿಂದ ಇಸ್ಲಾಮಾಬಾದ್ನಲ್ಲಿ ಸಾರಿಗೆ, ಉದ್ಯಮಗಳು ಮತ್ತು ಒಟ್ಟಾರೆ ಸಂಪರ್ಕದ ಮೇಲೆಯೇ ಹೊಡೆತ ಬೀಳುತ್ತದೆ ಎಂದು ನಿರೀಕ್ಷಿಸಲಾಗಿದೆ. ಈಗ ಇರುವ ಮೀಸಲು ಇಂಧನ ಲಭ್ಯತೆಯನ್ನು ರಕ್ಷಿಸಲಾಗಿದೆ. ಯುದ್ದದ ಆತಂಕಭರಿತ ಖರೀದಿ ಅಥವಾ ಸಂಗ್ರಹಣೆಯನ್ನು ತಡೆಯಲು ಪೆಟ್ರೋಲ್ ಪಂಪ್ಗಳನ್ನು ನಿರ್ದಿಷ್ಟ ಕಾಲ ಸ್ಥಗಿತಗೊಳಿಸಲು ಆದೇಶಿಸಿರಬಹುದು. ಸರಬರಾಜು ಆದ ಬಳಿಕ ನಿಯಂತ್ರಿತ ವಿತರಣೆ ಆರಂಭಿಸಬಹುದು ಎನ್ನಲಾಗಿದೆ.
ದೇಶಾದ್ಯಂತ ಅನೇಕ ವಾಯುನೆಲೆಗಳಲ್ಲಿ ಸ್ಫೋಟಗಳು, ಪಾಕಿಸ್ತಾನದ ವಾಯುಪ್ರದೇಶವನ್ನು ಮುಚ್ಚಿದ ವರದಿಗಳ ನಂತರ ಪೆಟ್ರೋಲ್ ಪಂಪ್ಗಳನ್ನು ಸ್ಥಗಿತಗೊಳಿಸಲಾಗಿದೆ.
ಶಾಂತಿಗೆ ಕರೆ ಕಟ್ಟಿ ಜೀ7 ದೇಶಗಳು
ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಬಗ್ಗೆ ಜೀ7 ದೇಶಗಳ ವಿದೇಶಾಂಗ ಸಚಿವರು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಒಂದು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ಶಾಂತಿಯನ್ನು ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಅದರ ಜೊತೆಗೆ, ಫಲ್ಯಾಮ್ ನಲ್ಲಿ ನಡೆದ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಪಾಕಿಸ್ತಾನಕ್ಕೆ ರಾಜಕೀಯ ಮತ್ತು ಸೈನಿಕ ಸಂಕಷ್ಟಗಳ ಜೊತೆಗೆ ಪ್ರಕೃತಿಯಿಂದಲೂ ತೊಂದರೆ ಎದುರಾಗಿದೆ. ರಾತ್ರಿ 1.44 ಗಂಟೆಗೆ ದೇಶದಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 4.0 ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ನ್ಯಾಷನಲ್ ಸೆಂಟರ್ ಫಾರ್ ಸಿಸ್ಟಾಲಜಿ) ದಾಖಲಿಸಿದೆ. ಈ ಭೂಕಂಪವು ಈಗಾಗಲೇ ಸಂಕಷ್ಟದಲ್ಲಿರುವ ಪಾಕಿಸ್ತಾನದ ಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸಿದೆ.
ಭಾರತ-ಪಾಕಿಸ್ತಾನ ಗಡಿಯಲ್ಲಿ ನಡೆಯುತ್ತಿರುವ ಈ ಘಟನೆಗಳು ಎರಡೂ ದೇಶಗಳ ನಡುವಿನ ಸಂಬಂಧವನ್ನು ಇನ್ನಷ್ಟು ಒತ್ತಡಕ್ಕೆ ಒಳಪಡಿಸಿವೆ. ಭಾರತೀಯ ಸೇನೆಯು ತನ್ನ ಗಡಿಗಳನ್ನು ರಕ್ಷಿಸಲು ಮತ್ತು ಯಾವುದೇ ದಾಳಿಗೆ ತಕ್ಕ ಪ್ರತಿಕ್ರಿಯೆ ನೀಡಲು ಸಂಪೂರ್ಣ ಸಿದ್ಧತೆಯಲ್ಲಿದೆ. ಇದೇ ವೇಳೆ, ಪಾಕಿಸ್ತಾನದ ಆಂತರಿಕ ಸಮಸ್ಯೆಗಳು, ಇಂಧನ ಕೊರತೆ, ಭೂಕಂಪ ಮತ್ತು ಸ್ಫೋಟಗಳು ದೇಶವನ್ನು ಅಸ್ಥಿರಗೊಳಿಸುತ್ತಿವೆ. ಅಂತರರಾಷ್ಟ್ರೀಯ ಸಮುದಾಯವು ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ, ಶಾಂತಿಯ ಕರೆ ನೀಡುತ್ತಿದೆ.