ಬೆಂಗಳೂರು, ಜೂ.10- ಮಂಗಳೂರಿನ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸುವುದು ಅನಿವಾರ್ಯ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಗೃಹಸಚಿವ ವಲಯಕ್ಕೆ ಪ್ರದತ್ತವಾದ ಅಧಿಕಾರವಿದೆ. ಆ ಆಧಾರದ ಮೇಲೆ ಅವರು ಎನ್ಐಎ ತನಿಖೆಗೆ ವಹಿಸುವಂತೆ ಹೇಳಿದ್ದಾರೆ. ನಮಗೆ ವಹಿಸುವುದು ಅನಿವಾರ್ಯವಿದೆ ಎಂದರು.
ಯಾವ ಕಾರಣಕ್ಕೆ ಎನ್ಐಎ ತನಿಖೆಯಾಗಬೇಕೆಂದು ಸ್ಪಷ್ಟ ವಿವರಣೆ ನೀಡಿಲ್ಲ. ಆದರೆ ಕೆಲವು ಸೆಕ್ಷನ್ಗಳನ್ನು ನಮೂದಿಸಿ ತನಿಖೆಗೆ ವಹಿಸುವಂತೆ ಹೇಳಿದ್ದಾರೆ. ಈ ಪತ್ರದ ಹಿಂದೆ ಬಿಜೆಪಿಯವರ ಕೈವಾಡವಿದೆ ಎಂದು ಪತ್ರದಲ್ಲೇನು ಉಲ್ಲೇಖ ಇಲ್ಲ. ನಮಗೆ ಪ್ರದತ್ತವಾದ ಅಧಿಕಾರವನ್ನು ಬಳಸಿ ತನಿಖೆಗೆ ಕೇಳುತ್ತಿರುವುದಾಗಿ ಹೇಳಿದ್ದಾರೆ. ಹೀಗಾಗಿ ನಮಗೆ ಹೆಚ್ಚಿನ ಮಾಹಿತಿಗಳಿಲ್ಲ ಎಂದರು.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರನ್ನು ಹೈಕಮಾಂಡ್ ದೆಹಲಿಗೆ ಕರೆಸಿಕೊಂಡಿದೆ. ಅಲ್ಲಿ ಯಾವ ರೀತಿಯ ಚರ್ಚೆಯಾಗಿದೆ ಎಂದು ಗೊತ್ತಿಲ್ಲ. ನನ್ನನ್ನು ಕರೆದಿಲ್ಲ. ಕರೆದರೆ ದೆಹಲಿಗೆ ಹೋಗುತ್ತೇನೆ ಎಂದು ಹೇಳಿದರು.
ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣ ಇಂದು ಹೈಕೋರ್ಟ್ನಲ್ಲಿ ವಿಚಾರಣೆಗೆ ಬರಲಿದೆ. ಹೈಕೋರ್ಟ್ ಕೇಳಿರುವ ಪ್ರಶ್ನೆಗಳಿಗೆ ಅಡ್ವಕೇಟ್ ಜನರಲ್ ಸರ್ಕಾರದ ಪರವಾಗಿ ಉತ್ತರವನ್ನು ಸಿದ್ದಪಡಿಸಿ ಪ್ರಮಾಣಪತ್ರ ನೀಡಲಿದ್ದಾರೆ. ವಾಸ್ತವಾಂಶವನ್ನು ಕೋರ್ಟ್ ಮುಂದಿಡಲಾಗುವುದು ಎಂದರು. ಪ್ರಕರಣದ ತನಿಖೆಯ ವರದಿ ಇನ್ನೂ ಸರ್ಕಾರಕ್ಕೆ ಬಂದಿಲ್ಲ. ಈ ಹಂತದಲ್ಲಿ ನಾವು ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದು ಹೇಳಿದರು.