ಬೆಂಗಳೂರು, ಅ.17- ಅಂಗನವಾಡಿಗಳಿಗೆ ಸರಬರಾಜಗುತ್ತಿರುವ ಕಳಪೆ ಆಹಾರವನ್ನು ನಿಲ್ಲಿಸಿ ಕೂಡಲೇ ಈ ಮೊದಲಿನಂತೆ ಜನತಾ ಬಜಾರ್ನಿಂದ ಗುಣಮಟ್ಟದ ಆಹಾರ ಪೂರೈಕೆ ಮಾಡುವಂತೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯು ರಾಜ್ಯದ ಅಂಗನವಾಡಿಗಳಿಗೆ ಸರಬರಾಜಾಗುತ್ತಿರುವ ಕಳಪೆ ಆಹಾರ ಕೂಡಲೇ ನಿಲ್ಲಿಸಿ ಮೊದಲಿನಂತೆ ಜನತಾ ಬಜಾರ್ ನಿಂದ ಉತ್ತಮ ಗುಣಮಟ್ಟದ ಆಹಾರ ಪೂರೈಸಬೇಕೆಂದು ಶಿಫಾರಸು ಮಾಡಿದೆ.
ಅಂಗನವಾಡಿಗಳಿಗೆ ಪೌಷ್ಟಿಕ ಆಹಾರ ಸರಬರಾಜು ಆಗುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿರುವ ಅಶೋಕ್ ಅವರು ಸಮಿತಿ ಶಿಫಾರಸು ಮಾಡಿರುವಂತೆ ಜನತಾ ಬಜಾರ್ಗಳಿಂದಲೇ ಆಹಾರ ಪದಾರ್ಥ ಪೂರೈಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಈಗ ಮಕ್ಕಳಿಗೆ ಪೌಡರ್ ರೂಪದಲ್ಲಿ ಆಹಾರ ಸರಬರಾಜಾಗುತ್ತಿದ್ದು ಅದರಲ್ಲಿ ಪೌಷ್ಟಿಕಾಂಶ ಇದೆಯೋ ಇಲ್ಲವೋ ಗೊತ್ತಿಲ್ಲ, ಔಷಧಿ ರೂಪದಲ್ಲಿ ಆಹಾರ ಕೊಡುತ್ತಿದ್ದಾರೆ. ಗುಣಮಟ್ಟವಿಲ್ಲದ ಅಲ್ಪ ಪ್ರಮಾಣದ ಆಹಾರ ಪೂರೈಸುತ್ತಿರುವುದು ಕಂಡುಬಂದಿದೆ ಹಾಗಾಗಿ ಮೊದಲು ಏನು ಆಹಾರ ಪೂರೈಸಲಾಗುತ್ತಿತ್ತೋ ಆ ರೀತಿಯ ಆಹಾರವನ್ನು ಈಗಲೂ ಸಹ ಪೂರೈಕೆ ಮಾಡಬೇಕೆಂದು ಸಮಿತಿಯು ತನ್ನ ಅಭಿಪ್ರಾಯ ವ್ಯಕ್ತಪಡಿಸಿರುವುದು ಕರ್ನಾಟಕ ರಾಜ್ಯದ ಬಡಮಕ್ಕಳ ಆರೋಗ್ಯಪೂರ್ಣ ಬೆಳವಣಿಗೆಯ ದೃಷ್ಟಿಯಿಂದ ಐತಿಹಾಸಿಕವಾದ ಹಾಗೂ ಮಹತ್ವದ ತೀರ್ಮಾನವಾಗಿದೆ ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಸ್ಥೆಗೆ ನೀಡಿರುವ ಆದೇಶವನ್ನು ರದ್ದುಪಡಿಸಿ, ಸರ್ಕಾರಿ ಸ್ವಾಮ್ಯದ ಸಹಕಾರಿ ಸಂಸ್ಥೆ ಜನತಾ ಬಜಾರ್ ಮೂಲಕ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಲು ಆದೇಶ ನೀಡುವುದು ಎಲ್ಲ ರೀತಿಯಲ್ಲೂ ಉತ್ತಮ ಕ್ರಮ ಆಗುತ್ತದೆ.ಹಾಗಾಗಿ ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಶಿಫಾರಸ್ಸಿನ ಅನ್ವಯ ಕೂಡಲೇ ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ತಮ್ಮಲ್ಲಿ ಕೋರುತ್ತೇನೆ ಎಂದು ಅವರು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.