ಮಂಗಳೂರು,ಆ.7-ಧರ್ಮಸ್ಥಳದ ಸುತ್ತಮುತ್ತ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳು ಉತ್ಖನನ ನಡೆಸುತ್ತಿದ್ದ ಸ್ಥಳದ ಬಳಿ ಖಾಸಗಿ ವಾಹಿನಿಯೊಂದರ ವರದಿಗಾರರೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎ್ಐಆರ್ ದಾಖಲಾಗಿದೆ. ಗಿರೀಶ್ ಮಟ್ಟಣನವರ್ , ಮಹೇಶ್ ಶೆಟ್ಟಿ ತಿಮರೋಡಿ , ಯೂಟ್ಯೂಬರ್ ಸಮೀರ್ ಹಾಗೂ ಜಯಂತ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಖಾಸಗಿ ವಾಹಿನಿಯ ವರದಿಗಾರನ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 115(2), 189(2), 191(2), 351(2), 352, 190 ಅಡಿ ಎ್ಐಆರ್ ದಾಖಲಾಗಿದೆ. ಎ್ಐಆರ್ ನಲ್ಲಿ ಗಿರೀಶ್ ಮಟ್ಟೆಣ್ಣವರ್ (ಎ1), ಮಹೇಶ್ ಶೆಟ್ಟಿ ತಿಮರೋಡಿ (ಎ2), ಯೂಟ್ಯೂಬರ್ ಸಮೀರ್(ಎ3), ಜಯಂತ್(ಎ4) ಹಾಗೂ ಇತರರು ಎಂದು ಉಲ್ಲೇಖಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಯೂಟ್ಯೂಬರ್ಗಳ ಮೇಲೆ ನಡೆದ ಹಲ್ಲೆ ಮತ್ತು ಅವರುಗಳ ಎರಡು ವಾಹನಗಳಿಗೆ ಹಾನಿ ನಡೆಸಿದ ಬಗ್ಗೆ ಹಾಗೂ ಖಾಸಗಿ ನ್ಯೂಸ್ ಚಾನೆಲ್ನ ವರದಿಗಾರನ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣಾ ಆವರಣದಲ್ಲಿ, ಪಾಂಗಾಳದಲ್ಲಿ (ಲಾಠಿ ಚಾರ್ಜ್ ನಡೆದ ಸ್ಥಳದಲ್ಲಿ) ಮತ್ತು ಆಸ್ಪತ್ರೆಯ ಮುಂದೆ ಕಾನೂನುಬಾಹಿರವಾಗಿ ಗುಂಪು ಸೇರಿರುವ ಬಗ್ಗೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಹಲ್ಲೆಗೊಳಗಾದವರು ಚಿಕಿತ್ಸೆಗಾಗಿ ದಾಖಲಾಗಿರುವ ಆಸ್ಪತ್ರೆಯ ವೈದ್ಯರನ್ನು ವಿಚಾರಿಸಲಾಗಿ, ಪ್ರಾಥಮಿಕ ಆರೋಗ್ಯ ತಪಾಸಣೆಯಲ್ಲಿ ಯಾವುದೇ ಗಂಭೀರ ಗಾಯಗಳಾಗಿರುವುದು ಕಂಡುಬಂದಿಲ್ಲ ಎಂಬುದಾಗಿ ಮೌಖಿಕವಾಗಿ ತಿಳಿಸಿದ್ದಾರೆ.ಘಟನೆಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆಳ್ತಂಗಡಿ ಠಾಣೆ ಪೊಲೀಸರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ದೂರಿನಲ್ಲಿ ಏನಿದೆ?
ಧರ್ಮಸ್ಥಳದ ಸುತ್ತಮುತ್ತ ನಡೆಯುತ್ತಿರುವ ಉಖ್ಖನನದ ವಿಡಿಯೋ ಮಾಡಲು ಬಂದಿದ್ದ ಯೂಟ್ಯೂಬರ್ಗಳ ಮೇಲೆ ನಿನ್ನೆ ಸಂಜೆ ಹಲ್ಲೆ ನಡೆದ ವಿಚಾರ ತಿಳಿದ ಹಿನ್ನೆಲೆಯಲ್ಲಿ ಖಾಸಗಿ ವಾಹಿನಿ ವರದಿಗಾರ ಹರೀಶ್ ಎಂಬುವವರು ಹಲ್ಲೆಗೆ ಒಳಗಾದವರನ್ನು ಮಾತನಾಡಿಸಲು ಉಜಿರೆಯ ಬೆನಕ ಆಸ್ಪತ್ರೆಗೆ ಹೋಗಿದ್ದಾಗ ಆ ಸಂದರ್ಭದಲ್ಲಿ ಗಿರೀಶ್ ಮಟ್ಟಣವರ್ ಬಳಿ ಬೈಟ್ ಕೊಡುವಂತೆ ಕೇಳಿದಾಗ ಅವರಿಗೆ ಬೈದಿದ್ದಾರೆ.
ಈ ವೇಳೆ ಅಲ್ಲೇ ಇದ್ದ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಅವರ ಗ್ಯಾಂಗ್ ಸದಸ್ಯರು ಹಲ್ಲೆ ಮಾಡಿದ್ದಾರೆ. ಈ ವೇಳೆ ಕೀಳು ಭಾಷೆಯಿಂದ ನಿಂದಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಯೂಟ್ಯೂಬರ್ ಸಮೀರ್ ಬೆದರಿಕೆ ಹಾಕಿದ್ದಾರೆ. ವಿಷಯ ತಿಳಿದು ಆಸ್ಪತ್ರೆಗೆ ಆಗಮಿಸಿದ ಪೊಲೀಸರು ಅವರನ್ನು ರಕ್ಷಣೆ ಮಾಡಿ ಒಳಗೆ ಕೂರಿಸಿದರು. ಈ ವೇಳೆ ಸ್ಥಳಕ್ಕೆ ಬಂದ ಜಯಂತ್ ಅವರ ವಿಡಿಯೋ ಮಾಡಿ ಹಲ್ಲೆ ಮಾಡಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತೇನೆ ಎಂದು ದೂರಿನಲ್ಲಿ ಹರೀಶ್ ತಿಳಿಸಿದ್ದಾರೆ.
ಘಟನೆಯ ಹಿನ್ನಲೆ :ಧರ್ಮಸ್ಥಳ ಗ್ರಾಮದ ನೇತ್ರಾವತಿ ನದಿ ತೀರದ ಪಾಂಗಳ ಎಂಬಲ್ಲಿ ಯೂಟ್ಯೂಬರ್ಸ್ ಹಾಗೂ ಮತ್ತೊಂದು ಗುಂಪಿನ ನಡುವೆ ಮಾತಿನ ಚಕಮಕಿ ನಡೆದು, ಬಳಿಕ ಹಲ್ಲೆ ಕೂಡ ನಡೆಸಲಾಗಿದೆ. ಮೊದಲು ಈ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಸುಳ್ಳು ಆರೋಪ ಮಾಡಿದ್ದಾರೆಂದು ಮೂರು ಮಂದಿ ಯೂಟ್ಯೂಬರ್ಗಳ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿತ್ತು.
ಹಲ್ಲೆ ಖಂಡಿಸಿ ಪಾಂಗಾಳ ಕ್ರಾಸ್ ಬಳಿ ಭಾರೀ ಜನ ಸೇರಿದ್ದು, ಎರಡೂ ಕಡೆಯ ಗುಂಪಿನ ಯುವಕರನ್ನು ಚದುರಿಸಲು ಪೊಲೀಸರ ಹರಸಾಹಸ ಪಟ್ಟಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗುತ್ತಿದ್ದಂತೆ ಪೊಲೀಸರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸಿದ್ದಾರೆ. ಎರಡೂ ಗುಂಪುಗಳಿಂದ ಕಲ್ಲು ತೂರಾಟ ನಡೆದಿದೆ ಎನ್ನಲಾಗಿದ್ದು, ಇದನ್ನು ತಡೆಯಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಗುಂಪು ಚದುರಿಸಿದ್ದಾರೆ .
ಹಲ್ಲೆ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿ, ಭದ್ರತೆ ಒದಗಿಸಿದರು. ಹಲ್ಲೆಗೊಳಗಾದ ಯೂಟ್ಯೂಬರ್ಗಳು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.. ಸ್ಥಳದಲ್ಲಿ ಪರಿಸ್ಥಿತಿ ಶಾಂತಿಯುತ: ಈ ಘಟನೆಗೆ ಸಂಬಂಧಿಸಿದಂತೆ ದ.ಕ ಜಿಲ್ಲಾ ಎಸ್ ಪಿ ಅರುಣ್ ಕುಮಾರ್ ಅವರು ಪ್ರಕಟಣೆ ನೀಡಿದ್ದು, ಧರ್ಮಸ್ಥಳದಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಸ್ಥಳದಲ್ಲಿ ಪರಿಸ್ಥಿತಿ ಪ್ರಸ್ತುತ ಶಾಂತಿಯುತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂವರು ಯೂಟ್ಯೂಬರ್ಗಳನ್ನು ನೇತ್ರಾವತಿಯ ಪಾಂಗಾಳ ಎಂಬಲ್ಲಿ ತಡೆಯಲಾಗಿತ್ತು. ಇಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದ್ದು, ತಡರಾತ್ರಿ ಪೊಲೀಸ್ ಠಾಣೆಯ ಎದುರು ಪರ-ವಿರೋಧ ಬಣದವರು ಪ್ರತಿಭಟನೆ ನಡೆಸಿದ್ದಾರೆ. ಉಜಿರೆಯಲ್ಲಿ ಯೂಟ್ಯೂಬರ್ಸ್ ಬೆಂಬಲಿಗರು ಕರ್ತವ್ಯದಲ್ಲಿದ್ದ ಪತ್ರಕರ್ತರ ಮೇಲೆಯೇ ಹಲ್ಲೆ ಮಾಡಿದ್ದಾರೆ. ಹಲವಾರು ಪತ್ರಕರ್ತರು ಸ್ಥಳೀಯ ಬೆಳವಣಿಗೆಯನ್ನು ನಿರಂತರ ವರದಿ ಮಾಡುತ್ತಿದ್ದು, ಎರಡು ಗುಂಪುಗಳ ನಡುವಿನ ಜಗಳಕ್ಕೆ ಇದೀಗ ಪತ್ರಕರ್ತರು ಗುರಿಯಾಗಿದ್ದಾರೆ. ವರದಿ ಮಾಡಲು ತೆರಳಿದ್ದಾಗಲೇ ಯೂಟ್ಯೂಬರ್ಸ್ ಬೆಂಬಲಿಗರು ಖಾಸಗಿ ವಾಹಿನಿಯ ವರದಿಗಾರ ಮತ್ತು ಕ್ಯಾಮೆರಾವ್ಯಾನ್ ಮೇಲೆ ಮನ ಬಂದಂತೆ ದಾಳಿ ನಡೆಸಿದ್ದಾರೆ.