ಶ್ರೀರಂಗಪಟ್ಟಣ,ಜೂ.12- ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಗಳಿಗೆ ಆಗಮಿಸುವ ಬಡ ರೋಗಿಗಳೊಂದಿಗೆ ವೈದ್ಯರು ಮೊದಲು ಸ್ವಯಂ ಹಾಗೂ ಮಾನವೀಯತೆಯಿಂದ ವರ್ತಿಸಲು ಕ್ರಮಕೈಗೊಳ್ಳಿ ಎಂದು ಸಾರ್ವಜನಿಕ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ.ಪಿ.ಮಾರುತಿ ಅವರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಆನಂದ್ ತಾಕೀತು ಮಾಡಿದರು.
ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಅವರು ಆಸ್ಪತ್ರೆಯ ವಾತವರಣ, ವಾರ್ಡುಗಳು, ವೈದ್ಯಕೀಯ ವ್ಯವಸ್ಥೆ ಹಾಗೂ ರೋಗಿಗಳಿಗೆ ನೀಡಲಾಗುತ್ತಿರುವ ಚಿಕಿತ್ಸಾ ಸೇವೆಯ ಕುರಿತು ಖುದ್ದು ಪರಿಶೀಲಿಸಿ ಸ್ಥಳದಲ್ಲಿದ್ದ ರೋಗಿಗಳಿಂದ ಮಾಹಿತಿ ಪಡೆದು ಅವರು ಬಳಿಕ ವೈದ್ಯಾಧಿಕಾರಿಯ ಕಚೇರಿಯಲ್ಲಿ ದಾಖಲೆಗಳ ಪರೀಶೀಲನೆಯೊಂದಿಗೆ ಈ ಮೊದಲೇ ಸಾರ್ವಜನಿಕರಿಂದ ಕೇಳಿಬಂದಿದ್ದ ವಿವಿಧ ದೂರುಗಳ ಪಟ್ಟಿ ಕುರಿತು ಪ್ರೆಶ್ನಿಸಿ ತರಾಟೆಗೆ ತೆಗೆದುಕೊಂಡರು.
ಆಸ್ಪತ್ರೆಗೆ ರೋಗಿಗಳು ಬಂದಾಗ ಸಾಕಷ್ಟು ಜನ ವೈದ್ಯರುಗಳು ಸೇವೆ ನೀಡಲು ಲಭ್ಯವಿಲ್ಲದೆ ಗೈರಾಗಿರಲು ಕಾರಣವೇನು..? ಇನ್ನು ರಾತ್ರಿ ವೇಳೆಯೂ ಇಂತಹ ಆರೋಪ ಅಧಿಕವಾಗಿರುವುದು ಸತ್ಯವೇ..! ಸಮಸ್ಯೆ ಹೇಳುವ ಬಡ ಹಾಗೂ ವೃದ್ದ ರೋಗಿಗಳೊಂದಿಗೆ ವೈದ್ಯರು, ವೈದ್ಯಕೀಯ ಸಿಬ್ಬಂದಿ ಏರುಧನಿಯಲ್ಲಿ ಕೋಪ ಪ್ರದರ್ಶಿಸುವುದು, ತಾತ್ಸರ ತೋರುವುದು ಏಕೆ..? ಗಾಯಾಳುಗಳಿಗೆ ಸರಿಯಾದ ರೀತಿಯಲ್ಲಿ ಶಸ್ತ ಚಿಕಿತ್ಸೆ ನೀಡದೆ ಕರ್ತವ್ಯ ಲೋಪ ಎಸಗುವುದು ಹಾಗೂ ವಿವಿಧ ಸೇವೆ ಮತ್ತು ಪ್ರಮಾಣ ಪತ್ರ ನೀಡಲು ಬಡಜನರ ಬಳಿ ಹಣ ಕೇಳುವುದು ಯಾರು, ಯಾಕೆ..? ಎಂದು ಸಾರ್ವಜನಿಕರ ಮುಂದೆಯೇ ಡಾ.ಮಾರುತಿ ಅವರಿಗೆ ಸರಣಿ ಪ್ರೆಶ್ನೆಗಳ ಸುರಿಮಳೆಗೈದರು.
ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯರುಗಳಾದ ಡಾ.ಮೊಹಮದ್ ಹಾಗೂ ಡಾ.ಸೌಮ್ಯ ಅವರೊಂದಿಗೆ ನ್ಯಾಯಾಧೀಶರ ಎಲ್ಲಾ ಪ್ರೆಶ್ನೆಗಳಿಗೂ ಉತ್ತರಿಸಿದ ಡಾ.ಮಾರುತಿ ಕೇಳಿಬಂದಿರುವ ದೂರುಗಳು ಸತ್ಯಕ್ಕೆ ವಿರುದ್ದಾಗಿದ್ದು, ಇಂತಹ ಸಮಸ್ಯೆಗಳನ್ನು ತಮ ಕೆಲಸಗಳಿಂದ ಸರಿಪಡಿಸಿಕೊಳ್ಳುವ ಮೂಲಕ ಸಿಬ್ಬಂದಿಗಳಿಗೆ ತಿಳಿಹೇಳುವ ಭರವಸೆ ನೀಡಿದರು. ಬಳಿಕ ಮಾತನಾಡಿದ ನ್ಯಾಯಾಧೀಶರಾದ ಎಂ.ಆನಂದ್, ಸರ್ಕಾರಿ ಆಸ್ಪತ್ರೆಯ ವೈದ್ಯರುಗಳು ತಾಳೆ ಹಾಗೂ ಭರವಸೆಯ ಮಾತುಗಳಿಂದ ಜನರ ಖಾಯಿಲೆಗಳು ಅರ್ಧದಷ್ಟು ವಾಸಿಯಾಗುವಂತೆ ನಡೆದುಕೊಳ್ಳುವ ಗುಣ ನಿಮಲ್ಲಿರಲಿ. ಯಾವುದೇ ಔಷಧಿಗಳನ್ನು ರೋಗಿಗಳು ಹೊರಭಾಗದ ಖಾಸಗಿ ಅಂಗಡಿಗಳಲ್ಲಿ ಖರೀದಿಸದೆ ಸರ್ಕಾರಿ ಔಷಧಿಗಳನ್ನೇ ವಿತರಿಸಿ. ಆಸ್ಪತ್ರೆಯಲ್ಲಿ ವೈದ್ಯರುಗಳು ಗೈರಾಗದೆ, ರೋಗಿಗಳಿಗೆ ಚಿಕಿತ್ಸೆ ಉತ್ತಮ ವಾತವರಣ, ಶೌಚಾಲಯ ಹಾಗೂ ಪ್ರಯೋಗಾಲಯದ ಸೇವೆ ನೀಡಬೇಕು. ಇಂತಹ ದೂರುಗಳು ಕೇಳಿಬಂದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಾಕೀತು ಮಾಡಿದರು.