Friday, May 30, 2025
Homeಮನರಂಜನೆ'ಪಾರು' ಧಾರಾವಾಹಿ ಖ್ಯಾತಿಯ ಕಿರುತೆರೆ ನಟ ಶ್ರೀಧರ್ ನಾಯಕ್ ವಿಧಿವಶ

‘ಪಾರು’ ಧಾರಾವಾಹಿ ಖ್ಯಾತಿಯ ಕಿರುತೆರೆ ನಟ ಶ್ರೀಧರ್ ನಾಯಕ್ ವಿಧಿವಶ

Kannada Serial Actor Sridhar Passed Away

ಬೆಂಗಳೂರು, ಮೇ 27- ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಇನ್ನೂ ಬಹಳಷ್ಟು ಕಾಲ ಮಿಂಚಬೇಕು ಎಂದು ಅಪಾರ ಕನಸು ಹೊತ್ತಿದ್ದ ನಟ ಶ್ರೀಧರ್ ನಾಯಕ್ (47) ಅವರ ಕನಸು ಈಡೇರುವ ಮುನ್ನವೇ ಬಣ್ಣದ ಲೋಕದ ನಂಟು ಕಳಚಿ ಬಾರದ ಲೋಕಕ್ಕೆ ತೆರಳಿದ್ದಾರೆ.

ಕಿರುತೆರೆಯಲ್ಲಿ ಸಣ್ಣ ಪುಟ್ಟ ಪಾತ್ರ ಮಾಡುವ ಮೂಲಕ ಜನರಿಗೆ ಚಿರಪರಿಚಿತರಾಗಿದ್ದ ಶ್ರೀಧರ್ ನಾಯಕ್ ಅವರಿಗೆ ಕೋವಿಡ್ ಸಮಯದಲ್ಲಿ ಯಾವುದೇ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಸಿಗದೆ ಮನೆ ಬಾಡಿಗೆ ಕಟ್ಟಲು ಪರದಾಟ ನಡೆಸಿದ್ದರು. ಅಲ್ಲದೆ ಊಟ ಸರಿಯಾಗಿ ಮಾಡದೆ ದೇಹದಲ್ಲಿ ವಿಟಮಿನ್ ಹಾಗೂ ಪ್ರೋಟಿನ್ ಕಡಿಮೆಯಾಗಿತ್ತು. ಇದರಿಂದ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಾ ಹೋಯ್ತು ಎಂದು ಸ್ವತ: ಶ್ರೀಧರ್ ನಾಯಕ್ ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಕಳೆದ ಒಂದು ತಿಂಗಳ ಹಿಂದೆ ತಾವು ಅನಾರೋಗ್ಯ ಪೀಡಿತರಾಗಿ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ತಾವು ಆರ್ಥಿಕವಾಗಿ ಬಳಲುತ್ತಿದ್ದು ಧನಸಹಾಯಕ್ಕಾಗಿ ನೆರವು ಕೋರಿದ್ದರು. ನಂತರ ಕಿರುತೆರೆ, ಹಿರಿತೆರೆ ಕಲಾವಿರು, ತಂತ್ರಜ್ಞರಲ್ಲದೆ ಸಾರ್ವಜನಿಕರು ಕೂಡ ಸಹಾಯಹಸ್ತ ಚಾಚಿದ್ದರು.

ಶ್ರೀಧರ್ ನಾಯಕ್ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ವಿಡೀಯೋದಲ್ಲಿ ತಾವು ಶೀಘ್ರ ಗುಣಮುಖರಾಗಿ ಮತ್ತೆ ನಟಿಸುವುದಾಗಿ ಹೇಳಿದ್ದರು. ಆದರೆ ಅವರ ಆಸೆ ಕೊನೆಗೂ ಈಡೇರದೆ ಕಳೆದ ರಾತ್ರಿ 10 ಗಂಟೆ ಸುಮಾರಿಗೆ ನಿಧನರಾಗಿದ್ದು ಇಂದು ಅವರ ಅಂತ್ಯಕ್ರಿಯೆ ನೆರವೇರಲಿದೆ. ಕಲಾವಿದರು ಹಾಗೂ ಅಭಿಮಾನಿಗಳು ಶ್ರೀಧರ್ ನಾಯಕ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಬೆಳಿಗ್ಗೆ 11 ಗಂಟೆಯವರೆಗೆ ವ್ಯವಸ್ಥೆ ಮಾಡಲಾಗಿತ್ತು.

ನಾಗೇಂದ್ರ ಶಾ ಕಂಬನಿ:
ಶ್ರೀಧರ್ ನಾಯಕ್ ಅವರ ನಿಧನಕ್ಕೆ ಕಂಬನಿ ಮಿಡಿದಿರುವ ಹಿರಿಯ ನಟ ನಾಗೇಂದ್ರ ಶಾ ಅವರು, ನಮ್ಮ ಜೊತೆಗಿದ್ದ ಕಲಾವಿದ ಶ್ರೀಧರ್ ನಾಯಕ್ ಬಹಳ ದಿನಗಳ ಅನಾರೋಗ್ಯದಿಂದ ಮುಕ್ತರಾಗಿ ರಾತ್ರಿ 10 ಗಂಟೆಗೆ ದೇವಸನ್ನಿಧಿ ಸೇರಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ. ಕಲಾವಿರಾದ ಮೋಕ್ಷಿತಾ ಪೈ, ವಿನಯಾ ಪ್ರಸಾದ್, ನಾಗೇಶ್ ಯಾದವ್, ನಾರಾಯಣಸ್ವಾಮಿ ಸೇರಿದಂತೆ ಹಲವು ಕಿರುತೆರೆ ಹಾಗೂ ಹಿರಿತೆರೆಯ ಕಲಾವಿದರು ಕಂಬನಿ ಮಿಡಿದಿದ್ದಾರೆ.

ಪಾರು, ಮಂಗಳಗೌರಿ, ವಧು, ಮನೆಯೇ ಮಂತ್ರಾಲಯ ಸೇರಿದಂತೆ 40ಕ್ಕೂ ಹೆಚ್ಚು ಧಾರಾವಾಹಿಗಳು ಹಾಗೂ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್, ಚಿರಂಜೀವಿ ಸರ್ಜಾ ಅಭಿನಯದ ರಾಜಾಮಾರ್ತಂಡ, ಈಶ ಮಹೇಶ ಸೇರಿದಂತೆ ಕೆಲವು ತಮಿಳು ಸಿನಿಮಾಗಳಲ್ಲೂ ಶ್ರೀಧರ್ ನಾಯಕ್ ನಟಿಸಿದ್ದರು.

RELATED ARTICLES

Latest News